ಶನಿವಾರ, ಏಪ್ರಿಲ್ 11, 2009

ಮಾಹಿತಿ ತೀರ್ಪು; ಜಾರಿ ಜಿಜ್ಞಾಸೆ


 ಇದು ೨೦೦೭ರ ಕತೆ.  ಆ ವರ್ಷದ ಜುಲೈನಲ್ಲಿ ಮಂಕಳಲೆಯ ಸತ್ಯನಾರಾಯಣ ಭಟ್ ಎಡಜಿಗಳೇಮನೆಯ ಗ್ರಾಮ ಪಂಚಾಯ್ತಿಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುತ್ತಾರೆ. ಅವರಿಗೆ ಅವರ ಊರಿನ ಕೆರೆಯ ಹೂಳೆತ್ತಿ   ದಂಡೆ ಬಲಪಡಿಸುವ ಕೆಲಸದ ಅಂದಾಜು ಪಟ್ಟಿ, ಅಂತಿಮ ಅಳತೆ ಪುಸ್ತಕ, ಹಣ ಸಂದಾಯದ ವೆಚ್ಚ ವಿವರ ಮತ್ತು ಮಂಕಳಲೆ ಸಾಗರ ನಡುವಿನ ಹಾನಂಬಿ ಕೂಡು ರಸ್ತೆಗೆ ಜಲ್ಲಿ ಹಾಕಿದ ಅಂದಾಜು ಪಟ್ಟಿ, ಅಂತಿಮ ಅಳತೆ ಪುಸ್ತಕ ಲೆಕ್ಕ ವಿವರಗಳು ಬೇಕಾಗಿತ್ತು. ಭಟ್ ಈ ಮಾಹಿತಿ ಕೋರಿದ ಅರ್ಜಿಯನ್ನು ಸದರಿ ಗ್ರಾ.ಪಂ.ನ ಕಾರ್ಯದರ್ಶಿಗಳಿಗೆ ಸಲ್ಲಿಸಿದರು.
 ಮೂವತ್ತು ದಿನ ಉರುಳಿದ್ದೇ ಬಂತು. ಮಾಹಿತಿ ದಕ್ಕಲಿಲ್ಲ. ಭಟ್ ತಡಮಾಡಲಿಲ್ಲ. ಆಗಸ್ಟ್ ೧೮ಕ್ಕೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದರು. ಅಲ್ಲಿಂದ ಎಡಜಿಗಳೆಮನೆ ಗ್ರಾ.ಪಂ. ಕಾರ್ಯದರ್ಶಿಗೆ ಸಮನ್ಸ್ ಜಾರಿಯಾಯಿತು.
 ಆಯೋಗದ ವಿಚಾರಣೆಗೆ ಅರ್ಜಿದಾರರು ಮತ್ತು ಆರೋಪಿಗಳಿಬ್ಬರು ಹಾಜರಾದರು. ಸ್ವಾರಸ್ಯವೆಂದರೆ ಸತ್ಯನಾರಾಯಣ ಭಟ್ ಮಾಹಿತಿ ಅರ್ಜಿ ಸಲ್ಲಿಸಿದ ವೇಳೆ ಕಾರ್ಯದರ್ಶಿಗಳಾಗಿದ್ದ  ಗಣಪತಿರಾವ್ ಈ ವಿಚಾರಣೆಗೆ ಮುನ್ನ  ನಿವೃತ್ತರಾಗಿದ್ದರು. ಅಕ್ಟೋಬರ್ ಒಂದರಿಂದ ಅಧಿಕಾರ ವಹಿಸಿಕೊಂಡಿದ್ದವರು ಕುಮಾರಪ್ಪ ಗೌಡರು. ಈ ಇಬ್ಬರೂ ವಿಚಾರಣೆಗೆ ಎದುರಿಸುವಂತಾಗಿತ್ತು. ವಿಚಾರಣೆ ವೇಳೆ ಪ್ರಸ್ತುತದ ಮಾಹಿತಿ ಅಧಿಕಾರಿ ಕುಮಾರಪ್ಪ  ಗೌಡ, ‘ತಾವು  ಅಕ್ಟೋಬರ್ ಏಳರಂದೇ ಮಾಹಿತಿ ಕಳಿಸಿಕೊಟ್ಟಿರುವುದಾಗಿ’ ವಾದಿಸಿದರು. ಅರ್ಜಿದಾರರು ಮಾಹಿತಿ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದರೆ ಕೊರಿಯರ್ ದಾಖಲೆಗಳನ್ನು ಪ್ರದರ್ಶಿಸಲು ಗೌಡರು ವಿಫಲರಾದರು !
 ವಿಚಾರಣೆಯ ವೇಳೆ ನಿವೃತ್ತ ಕಾರ್ಯದರ್ಶಿ ಗಣಪತಿರಾವ್ ಉದ್ದೇಶಪೂರ್ವಕವಾಗಿ ಮಾಹಿತಿ  ಒದಗಿಸದಿರುವುದು ಆಯೋಗದ ಗಮನಕ್ಕೆ ಬಂದಿತು. ಕಾಯ್ದೆ ಸೆಕ್ಷನ್ ೨೦(೨)ರ ಅನ್ವಯ ಮಾಹಿತಿ ನೀಡಿದ್ದು ಪ್ರಮಾದಕಾರಿ ಕಾಮಗಾರಿಯಿಂದ ಕಂಟ್ರಾಕ್ಟರ್  ಕೃಷಿ ಭೂಮಿಗಳಿಗೆ ಅನಾಹುತಕಾರಿಯಾದುದನ್ನು ಅರ್ಜಿದಾರರು ಮನವರಿಕೆ ಮಾಡಿಕೊಟ್ಟಿದ್ದರಲ್ಲದೇ, ಮಾಹಿತಿ ದಕ್ಕಿದ್ದರೆ ನಷ್ಟವಾಗುತ್ತಿರಲಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.
 ಪ್ರಕರಣದ ವಿಚಾರಣೆಯ ನಂತರ ಮಾಹಿತಿ ಆಯೋಗ ಗಣಪತಿರಾವ್ ದೋಷಿ ಎಂದು ಗುರುತಿಸಿತು. ಅದಾಗಲೇ ಆರೋಪಿ  ನಿವೃತ್ತರಾದುದರಿಂದ ಆಯೋಗ ಶಿವಮೊಗ್ಗ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆರೋಪಿಗೆ ಸೂಕ್ತ ಶಿಸ್ತು ಕ್ರಮ ಕೈಗೊಳ್ಳಲು ಆದೇಶಿಸಿತು. ಕುಮಾರಪ್ಪ ಗೌಡ ವಿಚಾರಣೆಯ ವೇಳೆಯೇ ಅರ್ಜಿದಾರರು ಕೋರಿದ ದಾಖಲೆಗಳನ್ನು ಒದಗಿಸಿದ ಕಾರಣ ಆಯೋಗದ ಎಚ್ಚರಿಕೆಯನ್ನಷ್ಟೇ ಪಡೆದು ಬಚಾವಾದರು.
 ಈ ಪ್ರಕರಣದ ಕಡೆ ಇಷ್ಟಕ್ಕೇ ಮುಗಿಯುವುದಿಲ್ಲ. ಆಯೋಗ ತೀರ್ಪು (ಆದೇಶ ಸಂ. ಕೆ.ಐಸಿ ೨೫೧೭೧ ಸಿ-೨  ಎಂ: ೦೭:೧೪;೧೧;೧೭) ಬಂದಿತ್ತಾದರೂ ಗಣಪತಿರಾವ್‌ರಿಗೆ ಯಾವ ಶಿಸ್ತು ಕ್ರಮ ಹೇರಲಾಯಿತು ಎಂಬ ಕುತೂಹಲ ಸತ್ಯನಾರಾಯಣ ಭಟ್‌ರಿಗಿತ್ತು. ಹಾಗಾಗಿ ೨೦೦೮ರ ಮೇ೨೬ರಂದು ಅವರು ಸಾಗರದ  ತಾಲ್ಲೂಕು ಪಂಚಾಯ್ತಿಗೆ ಸದರಿ ವಿಷಯದ ಮಾಹಿತಿಗೆ ಮಾಹಿತಿ ಅರ್ಜಿ ಸಲ್ಲಿಸುತ್ತಾರೆ. ತಾಲ್ಲೂಕು ಪಂಚಾಯತ್‌ನ ಉತ್ತರ ಆಘಾತಕಾರಿಯಾಗಿತ್ತು. ಅದರ ಪ್ರಕಾರ ಮಾಹಿತಿ ಆಯೋಗದ ತೀರ್ಪು ಅವರ ಕೈಗೆ ಸೇರಿರಲಿಲ್ಲ. ಇನ್ನು ಶಿಸ್ತು ಕ್ರಮದ ಮಾತೆಲ್ಲಿ ?
ಭಟ್ ನಿರಾಶರಾಗಲಿಲ್ಲ. ಶಿವಮೊಗ್ಗ ಜಿಲ್ಲಾ ಪಂಚಾಯತ್‌ಗೆ ಸೆಪ್ಟೆಂಬರ್‌ನಲ್ಲಿ ಅರ್ಜಿ ಸಲ್ಲಿಸಿ ತೀರ್ಪು ಕುರಿತ ತೆಗೆದುಕೊಂಡ  ಕ್ರಮ ಹಾಗೂ ಅನುಸರಣಾ ಕ್ರಮ ಒದಗಿಸಲು ಅರ್ಜಿ ಹಾಕಿದ್ದಾರೆ. ಅಲ್ಲದೇ  ಖುದ್ದು ಮಾಹಿತಿ ಆಯೋಗಕ್ಕೆ ಪತ್ರ ಬರೆದು ಸಾಗರ ತಾಲ್ಲೂಕು ಪಂಚಾಯ್ತಿ ಒದಗಿಸಿದ ಮಾಹಿತಿಯ ಸತ್ಯಾಸತ್ಯತೆಯನ್ನು ದೃಢಪಡಿಸಲು ವಿನಂತಿಸಿದ್ದಾರೆ.
ಅಧಿಕಾರ ಶಾಹಿ ಕಾಯ್ದೆಯನ್ವಯ ಮಾಹಿತಿ ಒದಗಿಸಲು ಹಿಂಜರಿಯುವುದಂತೂ ಖರೆ, ಕೊನೆಗೆ ತನ್ನ ಅಧಿಕಾರಿಗಳನ್ನು ನಿವೃತ್ತರನ್ನು ನಿರ್ಲಜ್ಜರಾಗಿ ರಕ್ಷಿಸುವ ಪರಿಯನ್ನು ಕಾಣುತ್ತಿದ್ದೇವೆ. ಕಳಪೆ- ಪ್ರಮಾದಕಾರಿಯಾಗಿ ಗುತ್ತಿಗೆ ನಿರ್ವಹಿಸಿದ ಕಂಟ್ರಾಕ್ಟರ್, ಅದನ್ನು ಸಮರ್ಥಿಸಿಕೊಳ್ಳುವಂತೆ ವರ್ತಿಸಿದ ಗ್ರಾ.ಪಂ. ಕಾರ್ಯದರ್ಶಿ ಆಯೋಗದ ತೀರ್ಪನ್ನು  ಮನ್ನಿಸದ ತಾಲ್ಲೂಕು- ಜಿಲ್ಲಾ ಪಂಚಾಯತ್ ಅಧಿಕಾರಿಗಳು ಈ ವಿಷವರ್ತಲದಿಂದ ನ್ಯಾಯವನ್ನು ಎತ್ತಿಹಿಡಿಯಲು ಲೋಕಾಯುಕ್ದ ಮೊರೆ ಹೋಗಬೇಕಾಗುತ್ತದೆ. ಸ್ವತಃ ಕರ್ನಾಟಕ ಮಾಹಿತಿ ಆಯೋಗ ತನ್ನ ತೀರ್ಪಿಗೆ ಕವಡೆಕಾಸಿನ ಬೆಲೆ ನೀಡದ ಪಂಚಾಯತ್ ವ್ಯವಸ್ಥೆಯ ಅಧಿಕಾರಿಗಳನ್ನು ವಿಚಾರಿಸಿಕೊಳ್ಳಬಹುದಲ್ಲವೇ?
-ಮಾವೆಂಸ
 
200812023996