ಸೋಮವಾರ, ಮಾರ್ಚ್ 9, 2009

ಕಿರಿಕಿರಿ ಕರೆ, ಎಸ್‌ಎಂಎಸ್ ಟ್ರಾಯ್ ನಿಯಮಕ್ಕೆ ತಿದ್ದುಪಡಿ

ಮೊಬೈಲ್ ಟಾಕ್ -5
 
ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ - ಟ್ರಾಯ್ ಕಳೆದ ವರ್ಷ ‘ಡು ನಾಟ್ ಡಿಸ್ಟರ್ಬ್’ ಎಂಬ ವಿಶಿಷ್ಟ ಸೌಲಭ್ಯವನ್ನು ಜಾರಿಗೊಳಿಸಿ ಮೊಬೈಲ್ ಕಂಪನಿಗಳಿಗೆ ಆದೇಶಿಸಿತ್ತು. ಅಗತ್ಯವಿರುವ ಚಂದಾದಾರರು ಈ ಸೌಲಭ್ಯವನ್ನು ಬಳಸಿಕೊಂಡು ಎನ್.ಡಿ.ಎನ್.ಸಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರೆ, ನಂತರ ಆ ಚಂದಾದಾರರಿಗೆ ಯಾವುದೇ ವ್ಯಾಪಾರಿ, ಜಾಹೀರಾತು ಕರೆ ಅಥವಾ ಎಸ್.ಎಂ.ಎಸ್. ಮಾಡುವಂತಿಲ್ಲ. ಈ ಯೋಜನೆ ಮೇಲ್ನೋಟಕ್ಕೆ ಚಂದ ಎನ್ನಿಸಿತ್ತಾದರೂ ಹಲವು ಗ್ರಾಹಕರಿಗೆ ಅನಗತ್ಯ ಜಾಹೀರಾತು ಕರೆ, ಮುಖ್ಯವಾಗಿ ಕಿರಿಕಿರಿಯ ಎಸ್‌ಎಂಎಸ್ ನಿಲ್ಲದ ಉದಾಹರಣೆಗಳಿವೆ. 
ಈ ರೀತಿಯ ಪ್ರಕರಣಗಳಲ್ಲಿ ಇನ್ನೊಂದು ರೀತಿಯ ಸಮಸ್ಯೆಯನ್ನು ಟ್ರಾಯ್ ಗಮನಿಸಿದೆ. ಚಂದಾದಾರ ಎನ್‌ಡಿಎನ್‌ಸಿ ನೋಂದಣಿಯ ನಂತರವೂ ಅನಗತ್ಯ ಕರೆ ಬಂದಲ್ಲಿ ಗ್ರಾಹಕ ಸೇವಾದಾತರಲ್ಲಿ ದೂರು ಸಲ್ಲಿಸುತ್ತಾನೆ ಎಂದುಕೊಂಡರೆ ಮೊಬೈಲ್ ಕಂಪನಿ ಎಷ್ಟು ದಿನ ಕಳೆದರೂ ಇತ್ಯರ್ಥಗೊಳಿಸದೆ ‘ನ್ಯಾಯ’ವನ್ನು ಕೊಲ್ಲುವ ಬುದ್ಧಿವಂತಿಕೆ ತೋರಿಸುತ್ತಿದ್ದವು. 
ಇದೀಗ ಟ್ರಾಯ್ ‘ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್(ಯುಸಿಸಿ) ಎರಡನೇ ತಿದ್ದುಪಡಿ - ೨೦೦೮’ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಮೊಬೈಲ್ ಕಂಪನಿ ದೂರು ಸ್ವೀಕರಿಸಿದ ೨೮ ದಿನಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಲೇಬೇಕು. 
ಒಂದೊಮ್ಮೆ ಈ ಗಡುವಿನಲ್ಲಿ ದೂರನ್ನು ನಿರ್ವಹಿಸದಿದ್ದರೆ, ಮೊದಲ ಸಂದರ್ಭದಲ್ಲಿ ಗರಿಷ್ಟ ೫ ಸಾವಿರ ರೂ. ದಂಡವನ್ನು ಸೇವಾದಾತ ಅರ್ಜಿದಾರನಿಗೆ ಕೊಡಬೇಕಾಗುತ್ತದೆ. ನಿರ್ಲಕ್ಷ್ಯ ಮುಂದುವರಿದಲ್ಲಿ ದಂಡದ ಮೊತ್ತ ೨೦ ಸಾವರದವರೆಗೆ ಹೆಚ್ಚಬಹುದು. 
ಅಷ್ಟೇ ಅಲ್ಲ, ಇನ್ನು ಮುಂದೆ ಪ್ರತಿ ಹೊಸ ಚಂದಾದಾರನಿಗೆ ಆಕ್ಟಿವೇಷನ್ ವೇಳೆಯಲ್ಲಿಯೇ ‘ಡು ನಾಟ್ ಕಾಲ್ ರಿಜಿಸ್ಟ್ರಿ’ಗೆ ನೋಂದಣಿ ಆಗಬೇಕೆ ಎಂಬ ವಿಚಾರಣೆಯನ್ನು ಸಿಮ್‌ದಾತರು ಮಾಡಲೇಬೇಕು. ಇನ್ನಷ್ಟು ವಿವರ ಬೇಕೆನಿಸಿದರೆ trai.gov.inವೆಬ್‌ಸೈಟ್‌ನಲ್ಲಿ ಇಣುಕಬಹುದು.
ಕುತೂಹಲವಿದೆ, ಮೊಬೈಲ್ ಕಂಪನಿಗಳು ಈ ತಿದ್ದುಪಡಿಗಳನ್ನು ಮೀರಲು ಯಾವ ರಂಗೋಲಿ ಕೆಳಗೆ ನುಸುಳುತ್ತವೆ?

ಮಾವೆಂಸ

mavemsa@gmail.com

 
200812023996