ಶುಕ್ರವಾರ, ಜುಲೈ 16, 2010

ನನ್ನದೊಂದು ಪುಟ್ಟ ಕಥೆ

ಈ ವಾರದ `ತರಂಗ'ದಲ್ಲಿ ನನ್ನದೊಂದು ಪುಟ್ಟ ಮಿನಿ ಕಥೆ ಪ್ರಕಟವಾಗಿದೆ. ಅದನ್ನು ನಿಮಗೂ ರುಚಿ ನೋಡಿ ತಿಳಿಸಲು ಕೊಡುತಿರುವೆ. ಪ್ರತಿಕ್ರಿಯಿಸಿ.
ಉಲ್ಲಾಸ......ಸಂತೋಷ.....
ಸಣ್ಣಕತೆ

ರದ್ದಿ ಪೇಪರ್ ಅಂಗಡಿಯಲ್ಲಿ ಯುವ ಕಥೆಗಾರ ಯೋಗೀಶ್‌ನಿಗೆ ಒಬ್ಬ ಮಹಾನ್ ಲೇಖಕನ ಅಪ್ರಕಟಿತ ಆತ್ಮಕತೆ, ಅದೂ ಹಸ್ತಾಕ್ಷರ ರೂಪದಲ್ಲಿರುವುದು ಸಿಕ್ಕಿಬಿಟ್ಟಿತು. ಒಂದಕ್ಕಿಂತ ಒಂದು ಸ್ವಾರಸ್ಯಕರ ಅಧ್ಯಾಯಗಳು. ಅದರಲ್ಲಿ ಒಂದು ಭಾಗವನ್ನು ಯೋಗೀಶ್ ಸಂಪಾದಕರಿಗೆ ಒದಗಿಸಿದ್ದು, ಅದನ್ನು ಇನ್ನು ಮುಂದೆ ನೀವೂ ಓದಿ.
"..............ನನ್ನ ಅಪ್ಪ - ಅಮ್ಮರ ಬಗ್ಗೆ ಹೇಳಲೇಬೇಕು. ಸರಿಸುಮಾರು ೩೪ ವರ್ಷಗಳ ದಾಂಪತ್ಯ ಅವರದು. ನಾನಂತೂ ಹುಟ್ಟಿದ ಮೇಲೆ ಎಂದೂ ಅವರು ಹೊಡೆದಾಡಿದ್ದನ್ನು, ಬೈದಾಡಿದ್ದನ್ನು, ಹೀಗಳೆದುಕೊಂಡಿದ್ದನ್ನು ನೋಡಿಲ್ಲ. ಯಾರಿಗಾದರೂ ಅಚ್ಚರಿ ಹುಟ್ಟಿಸುವಷ್ಟು ಅವರ ದಾಂಪತ್ಯ ಮಾದರಿಯಾಗಿತ್ತು. ಅಪ್ಪನ ಚಲನವಲನಗಳನ್ನು ಗಮನಿಸಿಯೇ ಅಮ್ಮ ಆತನ ಬೇಕುಬೇಡಗಳನ್ನು ಪೂರೈಸಬಲ್ಲವಳಿದ್ದಳು. ಊಟಕ್ಕೆ ಕುಳಿತಾಗಲೂ ಅಷ್ಟೇ, ಅಮ್ಮನ ಒಂದು ಕಣ್ಣು ಅಪ್ಪನ ತಟ್ಟೆಯ ಮೇಲೆ. ಏನು ಬೇಕು ಅಂತ ಅಪ್ಪ ಹೇಳುವ ಮುನ್ನವೇ ಬಡಿಸಿಯಾಗಿರುತ್ತಿತ್ತು.
ಅಪ್ಪ ಕಮ್ಮಿಯಲ್ಲ. ಮನೆಗೆ ತರುವ ಸಾಮಾನುಗಳ ಪಟ್ಟಿಯನ್ನೇನೂ ಅಮ್ಮ ಕೊಡುತ್ತಿರಲಿಲ್ಲ. ಆದರೆ ಅಮ್ಮ ಅಡುಗೆ ಮನೆಯಲ್ಲಿ `ಓ, ಬೇಳೆ ಖಾಲಿಯಾಯ್ತು', `ಸೇಬು ಹಣ್ಣು ಬೇಕೇನೋ ಪುಟ್ಟಾ...' ಅಂತೆಲ್ಲ ಮಾತನಾಡುವುದನ್ನೇ ಕೇಳಿ ಅಪ್ಪ ಅವನ್ನೆಲ್ಲ ತಂದಿಟ್ಟುಬಿಡುತ್ತಿದ್ದರು.
ಊಟ ತಿಂಡಿಗೆ ಅಮ್ಮ ಅಪ್ಪನ್ನ ಕರೆಯುತ್ತಿದ್ದುದೇ ವಿಚಿತ್ರ. ನನ್ನ ಹತ್ತಿರ ದೊಡ್ಡದಾಗಿ "ಹೋಗು ಅಪ್ಪನನ್ನು ತಿಂಡಿಗೆ ಬಾ ಎಂದು ಕರೆ" ಎನ್ನುತ್ತಿದ್ದಳು. ನಿಜಕ್ಕಾದರೆ, ಆ ಮಾತು ಅಪ್ಪನಿಗೇ ಕೇಳಿಬಿಡುತ್ತಿದಾದ್ದರಿಂದ ಮತ್ತೆ ನಾನು ಕರೆಯಬೇಕಾದುದೇ ಇರುತ್ತಿರಲಿಲ್ಲ!
ಪ್ರೀತಿ, ಪ್ರೇಮದಲ್ಲಿ ಸಾಮಾನ್ಯವಾಗಿ ಮಾತನಾಡುವುದು ಕಣ್ಣು. ನನ್ನ ಅಪ್ಪ ಅಮ್ಮರ ವಿಚಾರದಲ್ಲಿ ಅದು ಇನ್ನಷ್ಟು ಸತ್ಯ. ಜಾತ್ರೆಗೆ ಹೋದರು ಎಂದಿಟ್ಟುಕೊಳ್ಳಿ. ಅಮ್ಮ ಅಂಗಡಿಯಾತನಲ್ಲಿ ಒಂದು ವಸ್ತುವಿನ ಬಗ್ಗೆ ವಿಚಾರಿಸಿ ಅಪ್ಪನ ಕಡೆ ನೋಡಿದರೂ ಎಂದಾದರೆ ಅಪ್ಪ ಅದನ್ನು ಖರೀದಿಸುತ್ತಿದ್ದರು. ಅದು ಅಪ್ಪನಿಗೆ ಇಷ್ಟವಿಲ್ಲವೆಂದರೆ ಅಮ್ಮ ವಿಚಾರಿಸುತ್ತಿದ್ದ ವೇಳೆಗಾಗಲೇ ಅಪ್ಪ ಪಕ್ಕದ ಅಂಗಡಿ ದಿಕ್ಕಿಗೆ ಸರಿದಿರುತ್ತಿದ್ದರು!
ಬಿಡಿ, ಇಂತಹ ನೂರು ಉದಾಹರಣೆ ಕೊಡಬಹುದು. ತಂದೆತಾಯಿಗೆ ಒಬ್ಬನೇ ಮಗನಾಗಿ ನಾನು ಮನೆಯಲ್ಲಿ ಶಾಂತ ವಾತಾವರಣವನ್ನೇ ಕಂಡೆ. ಬಹುಷಃ ಒಂದು ರೀತಿ ಏಕಾಂಗಿತನ ಕಾಡಿದ್ದರಿಂದಲೇ ನನ್ನ ಭಾವನೆಗಳನ್ನು ಅರುಹಿಕೊಳ್ಳಲು ಲೇಖನಿಯ ಮೊರೆ ಹೋದೆನೇ? ಹೇಳುವುದು ಕಷ್ಟ.
ಛೇ.... ಹೇಳಲು ಮರೆತಿದ್ದೆ. ನಾನು ಹುಟ್ಟಿದ ಸಮಯದಲ್ಲಿ ಅಪ್ಪ ಅಮ್ಮರಲ್ಲಿ ನನಗೆ ಹೆಸರು ಇಡುವ ವಿಚಾರದಲ್ಲಿ ಭಾರೀ ಜಿಜ್ಞಾಸೆ ಮೂಡಿತ್ತಂತೆ. ಅಮ್ಮ `ಉಲ್ಲಾಸ' ಎಂಬ ಹೆಸರನ್ನೂ, ಅಪ್ಪ `ಸಂತೋಷ' ಎನ್ನಬೇಕೆಂದೂ ವಾದಿಸಿದರಂತೆ. ಇಬ್ಬರಿಗೂ ತಾವು ಸೂಚಿಸಿದ ಹೆಸರು ಅಂತಿಮವಾಗಬೇಕೆಂಬ ಅಭಿಲಾಷೆ. ಅವರ ಜೀವಮಾನದ ಕೊನೆತನಕವೂ ಅಮ್ಮ ಉಲ್ಲಾಸ ಎಂದೂ, ಅಪ್ಪ ಸಂತೋಷ ಎಂತಲೂ ನನ್ನನ್ನು ಕೂಗಿ ಕರೆದರು. ಅವತ್ತಿನ ವಿವಾದದ ನಂತರ ಅವರಿಬ್ಬರ ನಡುವೆ ಮಾತುಕತೆ ನಡೆಯಲೇ ಇಲ್ಲ. ಇನ್ನೆಲ್ಲಿ ವಿವಾದ, ಗಲಾಟೆ!?

ಆ ಮನೆಯಲ್ಲಿ ನಾನು ಮಾತ್ರ `ಸಂತೋಷ - ಉಲ್ಲಾಸ' ಆಗಿದ್ದೆ!!

- ಮಾವೆಂಸ

ಭಾನುವಾರ, ಜುಲೈ 11, 2010

ಹಣ ಕಂಡರೆ ಮೊಬೈಲ್ ಬಾಯಿಬಿಡುವುದೇ?


ಕೆಲ ವರ್ಷಗಳ ಹಿಂದೆ ಮೊಬೈಲ್‌ನಲ್ಲಿ ಎಸ್‌ಎಂಎಸ್ ಸ್ವೀಕರಿಸುವದಕ್ಕೆ ನಮಗೇ ದುಡ್ಡು ಕೊಡುವ ಕಂಪನಿಗಳ ಬಗ್ಗೆ ಬರೆದಿದ್ದೆ. ಯು ಮಿಂಟ್, ಎಂ ಜಿಂಜರ್ ಮೊದಲಾದ ಕಂಪನಿಗಳು ನಾವು ಸ್ವೀಕರಿಸುವ ಪ್ರತಿ ಎಸ್‌ಎಂಎಸ್‌ಗೆ ೧೦, ೨೫ ಪೈಸೆ ಕೊಡುವುದನ್ನು ಅಲ್ಲಿ ಬರೆಯಲಾಗಿತ್ತು. ಅಷ್ಟೇ ಅಲ್ಲ, ಈ ಅಂತರ್ಜಾಲ ಎಸ್‌ಎಂಎಸ್ ಕಂಪನಿಗಳು ೩೦೦ ಚಂದಾದಾರರನ್ನು ಒದಗಿಸಿಕೊಟ್ಟರೆ ಬೋನಸ್ ಆಗಿ ೩೦೦ರೂ. ಚೆಕ್ ಕಳಿಸಿಕೊಡುವುದನ್ನು ತಿಳಿಸಿದಂತೆ ನೆನಪು. ಆಸೆಯಿಂದ ನಾನೂ ನನ್ನ ಮಿತ್ರರಿಗೆ ಈ ಮೈಲ್ ಮಾಡಿದ್ದೆ. ೩೦೦ರೂ. ಬರಲಿ!
ಊಹ್ಞೂ, ಬರಲಿಲ್ಲ, ಬಂದಿದ್ದು ನನ್ನ ಸ್ನೇಹಿತರೊಬ್ಬರ ಫೋನ್ ಕರೆ, `ಥ್ಯಾಂಕ್ಸ್ ಕಣೋ, ನಿನ್ನ ಮೈಲ್‌ನ ನನ್ನ ದೋಸ್ತ್‌ಗಳಿಗೆ ಫಾರ್‌ವರ್ಡ್ ಮಾಡಿದೆ. ನಿನ್ನೆ ೩೦೦ರೂ. ಚೆಕ್‌ನ್ನೇ ಕಳಿಸಿದ್ದಾರೆ. ಮಜಬೂತಾಗಿದೆ ಕಣೋ ಈ ಆಫರ್!'
ಬಿಡಿ, ಕೊನೆಗೆ ನಾನು ಈ ಕುರಿತು ವಿಜಯ ಕರ್ನಾಟಕಕ್ಕೆ ಲೇಖನ ಬರೆದು ೩೦೦ರೂ. ಗಳಿಸುವ ಪ್ಲಾನ್ ಮಾಡಿದೆ. ಲೇಖನವೂ ಬಂತು, ಅವರ ಆಗಿನ ಒಪೆಡ್ ಪುಟದಲ್ಲಿ. ೨೦೦ ಅಥವಾ ೩೦೦ ಗಿಟ್ಟುತ್ತದೆಂದುಕೊಂಡೆ. ಪಾಪಿಗಳು, ಇವತ್ತಿನ ತನಕ ಗೌರವಧನ ಕಳಿಸಿಲ್ಲ!!
ಇಷ್ಟೆಲ್ಲ ದೀರ್ಘವಾಗಿ ಪೀಠಿಕೆ ಬೆಳೆಸಲು ಏಕೈಕ ಕಾರಣವಿದೆ. ಇಂದಿನ ಕಾಲಮಾನದಲ್ಲಿ ಮೊಬೈಲ್ ಹಾಗೂ ಅಂತರ್ಜಾಲಗಳನ್ನು ಬಳಸಿ ನಾವು ಜಾಹೀರಾತು ಗ್ರಾಹಕರಾಗಬಹುದು ಮತ್ತು ಅದಕ್ಕೆ ಶುಲ್ಕ ವಸೂಲಿ ಮಾಡಿಕೊಳ್ಳಬಹುದು. ಹಣ ಗಳಿಸಿಕೊಡುವ ಅವಕಾಶವೊಂದನ್ನು `ಹಾಗೆ ಸುಮ್ಮನೆ' ಬಿಡಬೇಡಿ. ವಾಸ್ತವವಾಗಿ, ಡು ನಾಟ್ ಕಾಲ್ ದಿನಗಳಲ್ಲಿ ನಾವು, ಚಂದಾದಾರರು ಜಾಹೀರಾತು ಓದುವುದಕ್ಕೆ ಶುಲ್ಕ ಪಡೆಯಲೇಬೇಕು!
ಇನ್ನೊಂದು ಹೊಸ ತಂತ್ರವೆಂದರೆ, ವೆಬ್ ಜಾಹೀರಾತು ಓದಲೂ ನಾವು ಹಣ ಪಡೆಯಬಹುದು! ಈ ಅನುಭವ ನನಗೆ ಖುಷಿ ಕೊಟ್ಟಿದೆ. ಮೈಲ್ ಸ್ನೇಹಿತರಾಗಲಿ ಅಥವಾ ವಿಕ ತರದ ಪತ್ರಿಕೆಯಾಗಲಿ ನನಗೆ ಕೈಕೊಟ್ಟಿಲ್ಲ. ನಿಮ್ಮ ಮೊಬೈಲ್‌ನ್ನು ಉಚಿತವಾಗಿ ರೀಚಾರ್ಜ್ ಮಾಡಿಸುವ ಅವಕಾಶವಿರುವುದು ಖಚಿತ. ಅದೇ Invitation to join Amulyam-Free Prepaid Mobile Recharge and Movie Tickets
">ಅಮೂಲ್ಯಂ
ವೆಬ್‌ಸೈಟ್. ಇಲ್ಲಿ ನೊಂದಣಿ ಮಾಡಿಸಿಕೊಂಡ ನಂತರ ಮೈಲ್‌ಗೆ ಬರುವ ಸೈಟ್ ಪ್ರವೇಶಿಸಿದರೆ ಮತ್ತು ಸರ್ವೆಗಳಿಗೆ ಉತ್ತರಿಸಿದರೆ ಹಾಗೂ ಈ ನೊಂದಣಿಗಳ ಮೂಲಕ ವ್ಯವಹರಿಸಿದರೆ ಕಮಿಷನ್ ಸಿಕ್ಕೀತು!
ವಿವರಗಳಿಗೆ Invitation to join Amulyam-Free Prepaid Mobile Recharge and Movie Tickets
">ಅಮೂಲ್ಯಂ
ವೆಬ್‌ಸೈಟ್ ಪ್ರವೇಶಿಸಿ. ನಾನು ನೀಡಿರುವ ಈ ಲಿಂಕ್ ಮೂಲಕವೇ ಪ್ರವೇಶಿಸಿ ಎನ್ನುವುದು ನನ್ನ ವಿನಂತಿಯಷ್ಟೇ. ಯು ಮಿಂಟ್, ಅಮೂಲ್ಯಂ ತರದವನ್ನು ನಾನು ಹೆಸರಿಸಿರುವುದು ಕೇವಲ ಪ್ರಾತಿನಿಧಿಕವಷ್ಟೇ. ನಿಮಗೆ ಇನ್ನಷ್ಟು ಇದೇ ಮಾದರಿಯ ವೆಬ್ ಗೊತ್ತಿದ್ದೀತು. ನಾನು ಹೇಳುವುದು, ಇವನ್ನು ನಿಮ್ಮ ಉಪಯೋಗಕ್ಕೆ ಬಳಸಿಕೊಳ್ಳಿ ಎಂದು ಮಾತ್ರ. ನಾನು ಅಮೂಲ್ಯಂ ಕಾರಣದಿಂದ ಹಲವು ಬಾರಿ ಮೊಬೈಲ್ ರೀಚಾರ್ಜ ಮಾಡಿಸಿಕೊಂಡಿರುವುದರಿಂದ ಅತ್ತ ವಿಶ್ವಾಸ ಬೆಳೆದಿದೆಯಷ್ಟೇ.
ಏನು ಮಾಡುವಿರಿ?
- ಮಾವೆಂಸ


ಮಂಗಳವಾರ, ಜುಲೈ 6, 2010

ಎಸ್‌ಎಂಎಸ್ ಓದಿದ್ದಕ್ಕೆ ಸಂಭಾವನೆ !



ಜಗತ್ತಿನ ಪ್ರತಿಯೊಬ್ಬನೂ ಬಳಕೆದಾರ. ಈ ಜನರ ಗ್ರಾಹಕ ಶಕ್ತಿಯ ಅಗಾಧತೆಯ ಬಗ್ಗೆ ಯಾರಿಗೂ ಸಂಶಯ ಇರಲಿಕ್ಕಿಲ್ಲ. ಅದನ್ನು ಅರ್ಥ ಮಾಡಿಸುವಲ್ಲಿ ಬಳಕೆದಾರರ ಚಳುವಳಿಯ ಪಾತ್ರ ದೊಡ್ಡದು. ಯಾರೋ ಹೇಳಿದ್ದು ನೆನಪಾಗುತ್ತದೆ. ಜಾಹಿರಾತುಗಳನ್ನು ನೋಡುವ, ಓದುವ ಮಂದಿಗೇ ಶುಲ್ಕ ಪಾವತಿಸುವಂತಾಗಬೇಕು. ಅಂತಹ ಕಾಲ ಬಂದಿದೆ!

ಒಂದರ್ಥದಲ್ಲಿ, ಜಾಹಿರಾತುಗಳಿಂದ ಆದಾಯ ಗಳಿಸುವುದರಿಂದಲೇ ಕೈಗೆಟುಕುವ ಬೆಲೆಯಲ್ಲಿ ದೈನಿಕ ಪತ್ರಿಕೆಗಳನ್ನು ಮಾರಾಟ ಮಾಡಲಾಗುತ್ತಿದೆ. ಅಸಲಿ ಬೆಲೆಗೆ ಮಾರುವುದಾದರೆ ಪ್ರತಿ ದಿನ ಅವನ್ನು ೧೭-೧೮ ರೂ.ಗೆ ಮಾರಬೇಕು! ಖರೀದಿಸುವವರಿಗೆ ಸಿಗುವ ಈ ಸಬ್ಸಿಡಿಗೆ `ಗ್ರಾಹಕ ಶಕ್ತಿ' ಕಾರಣ ಎಂದರೆ ಅರ್ಧಸತ್ಯ ಹೇಳಿದಂತೆ. ನೀವೇ ನೋಡಿ, ಅತಿ ಹೆಚ್ಚಿನ ಜಾಹೀರಾತು ಆದಾಯ ಗಳಿಸುವ ಪತ್ರಿಕೆ ಈ ಲಾಭದ ಒಂದಂಶವನ್ನು ಬಳಕೆದಾರರಿಗೆ ವರ್ಗ ಮಾಡಿದ್ದಾದರೆ ಆ ಪತ್ರಿಕೆಗೆ ಉಳಿದ ಪತ್ರಿಕೆಗಳಿಗಿಂತ ಕಡಿಮೆ ಬೆಲೆ ಇರಬೇಕಿತ್ತು!

ಇದೇ ರೀತಿ ಬಳಕೆದಾರರಿಗೆ ಉಚಿತವಾಗಿ ಇ-ಮೇಲ್ ಸ್ಥಳಾವಕಾಶ ಕೊಡುವ ವೆಬ್‌ಸೈಟ್‌ಗಳನ್ನು ಅಥವಾ ಶುಲ್ಕವಿಲ್ಲದೆ ನಾನಾ ಮಾದರಿಯ ಎಸ್‌ಎಂಎಸ್ ಕಳಿಸುವ ಇತ್ತೀಚಿನ ಮೈ ಟುಡೇ ಡಾಟ್ ಕಾಂಗಳನ್ನು ಉದಾಹರಿಸಬಹುದು. ಇವೆಲ್ಲ ಬಳಕೆದಾರರಿಗೆ ನೇರವಾಗಿ ಶುಲ್ಕ ನೀಡದಿದ್ದರೂ ಅವರ ಶಕ್ತಿಯನ್ನು ಗೌರವಿಸುವ ಯತ್ನಗಳು. ಆದರೆ ಮೊಬೈಲ್‌ಗೆ ಓತಪ್ರೋತವಾಗಿ ಬರುವ ಕಮರ್ಷಿಯಲ್ ಎಸ್‌ಎಂಎಸ್ ಓದಲು ನಮಗೇ ಕಾಸು ಕೊಡುವ ಕಾಲ ಬರುತ್ತದೆಯೇ?

ಆಗಲೇ ಆ ದಿನ ಬಂದಿದೆ! ಮೂರ್‍ನಾಲ್ಕು ಅಂತಹ ಹೊಸ ವ್ಯವಸ್ಥೆಗಳು ಜಾರಿಗೆ ಬಂದಿದೆ. ಇವುಗಳ ಕಾರ್ಯ ಮಾದರಿ ಬಹುಪಾಲು ಒಂದೇ ತರ. ಇವು ವೆಬ್‌ಸೈಟ್‌ಗಳು. ಎಂ-ಅರ್ನ್, ಎಂ-ಜಿಂಜರ್. ಯು ಮಿಂಟ್‌ಗಳನ್ನು ಉದಾಹರಿಸಬಹುದು.
(ಕೆಳಗಿನ ವೆಬ್‌ಸೈಟ್‌ಗಳ ಲಿಂಕ್‌ಗೆ ಕ್ಲಿಕ್ ಮಾಡಿ - ದುಡಿಮೆ ಆರಂಭಿಸಿ!)
mginger.com ಅಥವಾ you mint.com ಹೆಸರಿನ ವೆಬ್‌ಸೈಟ್‌ನೊಳಗೆ ಪ್ರವೇಶಿಸಬೇಕು. ಅಲ್ಲಿ ನಮ್ಮನ್ನು ನೋಂದಾಯಿಸಿಕೊಳ್ಳಲು ಅವಕಾಶವಿದೆ. ನಮ್ಮ ವಿವರಗಳ ಜೊತೆಗೆ ನಮ್ಮ ಮೊಬೈಲ್ ನಂಬರ್‌ನ್ನು ದಾಖಲಿಸಬೇಕು. ಹತ್ತಾರು ವಿಷಯಗಳ ಆಯ್ಕೆಗಳಿವೆ. ಬೇಕಾದ ವಿಷಯದ ಎಸ್‌ಎಂಎಸ್, ಸ್ವೀಕರಿಸಲು ಬಯಸುವ ನಿರ್ದಿಷ್ಟ ಸಮಯವನ್ನೂ ಆಯ್ದುಕೊಳ್ಳಬಹುದು. ಇನ್ನು ಮುಂದೆ ಇವುಗಳಿಂದ ಬರುವ ಪ್ರತಿ ಎಸ್‌ಎಂಎಸ್ ಜೊತೆಗೆ ನಿಮ್ಮ ಖಾತೆಗೆ ೨೦ ಪೈಸೆ ಜಮಾ !
ಹಿನ್ನೆಲೆ ಸಾಕಷ್ಟು ಸರಳ, ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಅನಪೇಕ್ಷಿತ ಕರೆ, ಎಸ್‌ಎಂಎಸ್‌ನ್ನು ನಿಷೇಧಿಸುವ ಎನ್‌ಡಿಎನ್‌ಸಿ ಎಂಬ ವ್ಯವಸ್ಥೆಯನ್ನು `ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್, ೨೦೦೭'ನ ಹೆಸರಿನಲ್ಲಿ ಜಾರಿಗೆ ತಂದಿದೆ. ಟ್ರಾಯ್ ಗಮನಿಸಿದಂತೆ, ಮೊಬೈಲ್ ಬಳಕೆದಾರರನ್ನು ಅನಪೇಕ್ಷಿತ ಟೆಲಿ ಮಾರ್ಕೆಟಿಂಗ್ ಕರೆಗಳು, ಸಂದೇಶಗಳು ಅಯಾಚಿತ ವೇಳೆಗಳಲ್ಲಿ ಕಿರಿಕಿರಿಗೆ ಒಳಪಡಿಸುವುದು ಕಂಡುಬಂದಿತ್ತು. ಮೊಬೈಲ್ ಕಂಪನಿಯ ಚಂದಾದಾರರು ಈ ಪ್ರಚಾರ ತಂತ್ರಗಳಿಂದ ತೊಂದರೆಗೊಳಗಾಗುವುದು ನ್ಯಾಯಸಮ್ಮತವಲ್ಲ ಎಂದು ಅಭಿಪ್ರಾಯಪಟ್ಟ ಟ್ರಾಯ್ ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

ಅದರ ನಿಯಮದ ಪ್ರಕಾರ, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಎಂಬ ಸರ್ಕಾರಿ ಏಜೆನ್ಸಿ ಸ್ಥಾಪನೆಯಾಗಿದೆ. ಇದರಲ್ಲಿ `ನ್ಯಾಷನಲ್ ಡು ನಾಟ್ ಕಾಲ್' ಎಂಬ ನೊಂದಣಿ ಸೌಲಭ್ಯವಿರುತ್ತದೆ. ಈ ಅನಪೇಕ್ಷಿತ ಕರೆ, ಎಸ್‌ಎಮ್‌ಎಸ್ ಬೇಡ ಎನ್ನುವವರು ಈ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಬಹುದು. ಅದಕ್ಕೆ ಅಗತ್ಯ ವ್ಯವಸ್ಥೆಗಳನ್ನು ಸಂಬಂಧಿತ ಸೇವಾದಾತರು ಒದಗಿಸಬೇಕು. ಸ್ವಾರಸ್ಯವೆಂದರೆ, ಈ ಸೌಲಭ್ಯ ಮೊಬೈಲ್ ಚಂದಾದಾರರಲ್ಲದೆ ಸ್ಥಿರ ದೂರವಾಣಿ ಬಳಕೆದಾರರಿಗೂ ಲಭ್ಯ.

ಒಮ್ಮೆ ನೊಂದಾಯಿಸಿಕೊಂಡರೆ, ಮತ್ತೆ ಆ ಚಂದಾದಾರರಿಗೆ ಟೆಲಿ ಮಾರ್ಕೆಟಿಂಗ್ ಕಂಪನಿಗಳು ಕರೆ - ಸಂದೇಶಗಳನ್ನು ಕಳಿಸುವಂತಿಲ್ಲ. ಒಂದೊಮ್ಮೆ ಈ ನಿಯಮ ಉಲ್ಲಂಘಿಸಿದರೆ, ಪ್ರತಿ ಅನಪೇಕ್ಷಿತ ಕರೆ - ಸಂದೇಶಕ್ಕೆ ೫೦೦ ರೂ.ಗಳ ದಂಡವನ್ನು ವಿಧಿಸಲಾಗುತ್ತದೆ. ಅಷ್ಟೇಕೆ, ಟೆಲಿ ಮಾರ್ಕೆಟಿಂಗ್ ಕಂಪನಿಯ ಸೇವಾ ಪರವಾನಗಿಯನ್ನೇ ರದ್ದುಗೊಳಿಸುವುದು ಸಾಧ್ಯ.

ಎಲ್ಲ ಅಥವಾ ಬಹುಪಾಲು ಚಂದಾದಾರರು ಎನ್‌ಡಿಎನ್‌ಸಿಯಲ್ಲಿ ನೊದಾಯಿಸಿಬಿಟ್ಟರೆ ಕೋಟಿಗಟ್ಟಲೆ ಬಂಡವಾಳ ತೊಡಗಿಸಿರುವ ಕಂಪನಿಗಳು ತಮ್ಮ ಪ್ರಚಾರಕ್ಕೆ ಪರದಾಡಬೇಕು. ರಿಂಗ್ ಟೋನ್, ವಾಲ್ ಪೇಪರ್ ಒದಗಿಸುವ ಕಂಪನಿಗಳು, ಇನ್ಸೂರೆನ್ಸ್ ಕ್ಷೇತ್ರದ ಪ್ರಚಾರ ಸರಕುಗಳು, ಎಸ್‌ಎಮ್‌ಎಸ್ ಜಾಹೀರಾತುಗಳನ್ನು ನೆಚ್ಚಿಕೊಳ್ಳುವ ಬ್ಯಾಂಕ್‌ಗಳು.... ಎಲ್ಲವೂ ಜಾಗೃತರಾಗಲೇಬೇಕಾದ ಸಂದರ್ಭವಿದು. ತಪ್ಪಾಗಿ ಎನ್‌ಡಿಎನ್‌ಸಿ ನೊಂದಾಯಿತ ಗ್ರಾಹಕನನ್ನು ಸಂಪರ್ಕಿಸಿದರೆ ಅದಕ್ಕೆ ದಂಡವನ್ನು ತೆರಬೇಕಾಗಿರುವುದರಿಂದ ಪರಿಸ್ಥಿತಿ ಗಂಭೀರವೇ.

ಈ ಕಾಲಘಟ್ಟದಲ್ಲಿ ಜನ್ಮ ತಾಳಿದ್ದೇ ಎಂ ಜಿಂಜರ್, ಎಂ ಅರ್ನ್‌ನಂತ ಕಂಪನಿಗಳು. ಇವು ಎಸ್‌ಎಮ್‌ಎಸ್ ಓದಿದ್ದಕ್ಕೆ ಸಂಭಾವನೆ ಎಂಬ ಸೂತ್ರದಡಿ ಕೆಲಸ ಮಾಡುತ್ತವೆ. ತಮ್ಮ ವೆಬ್‌ಸೈಟ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಮೊಬೈಲ್ ಚಂದಾದಾರರನ್ನು ನೊಂದಾಯಿಸಿಕೊಳ್ಳುತ್ತವೆ. ಮುಂದೆ ಜಾಹೀರಾತು ಕಂಪನಿಗಳು ಸಂಪರ್ಕಿಸಿದರೆ ಇವರಲ್ಲಿ ನೊಂದಾಯಿತ ಮೊಬೈಲ್ ಸಂಖ್ಯೆಗಳನ್ನು ಪಡೆಯಬಹುದು. ಈ ಚಂದಾದಾರರಿಗೆ ಎಸ್‌ಎಮ್‌ಎಸ್ ಕಳಿಸಿದರೆ ತಲೆಬಿಸಿಯಿಲ್ಲ.`ದಂಡ' ತೆರುವ ಮಾತಿಲ್ಲ. ಈ ವ್ಯವಸ್ಥೆಗೆ ವೆಬ್‌ಸೈಟ್ ಕಂಪನಿಗಳು ಶುಲ್ಕ ಪಡೆಯುತ್ತವೆ. ಅದರಲ್ಲೊಂದು ಭಾಗವನ್ನು ಮೊಬೈಲ್ ಗ್ರಾಹಕನಿಗೂ ವರ್ಗಾಯಿಸುತ್ತವೆ.

ಈ ಸಂಭಾವನೆಯನ್ನು ಸದಸ್ಯ ಪಡೆಯಲು ಹಲವು ಮಾರ್ಗಗಳಿವೆ. ನೇರವಾಗಿ ಒಂದು ನಿರ್ದಿಷ್ಟ ಮೊತ್ತ ತಲುಪಿದಾಕ್ಷಣ ಚೆಕ್ ಪಡೆಯಬಹುದು, ನಮ್ಮ ಬ್ಯಾಂಕ್ ಖಾತೆಗೇ ಹಣ ಬಂದು ಬೀಳುವಂತೆ ನಿರ್ದೇಶಿಸಬಹುದು. ಇದೀಗ ಮಾಡಿರುವ ಇನ್ನೊಂದು ಚಿಂತನೆಯೆಂದರೆ, ಈ ದುಡಿಮೆಯನ್ನು ಚಂದಾದಾರ ತನ್ನ ಮೊಬೈಲ್‌ಗೆ `ಟಾಕ್ ಟೈಮ್' ಆಗಿಯೂ ಬದಲಿಸಿಕೊಳ್ಳಬಹುದು! ಅಂದರೆ ಒಂದು ಎಸ್‌ಎಮ್‌ಎಸ್ ನಿಮ್ಮ ಮೊಬೈಲ್‌ಗೆ ಬಂತು ಎಂದಾದರೆ ನಿಮ್ಮ ಟಾಕ್‌ಟೈಮ್‌ಗೆ ೨೦ ಪೈಸೆ ಸೇರುತ್ತದೆ!

ಸದ್ಯಕ್ಕೆ ಇವೆಲ್ಲ ಹೊಸ ವ್ಯವಸ್ಥೆಗಳು, ಇನ್ನೂ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿಲ್ಲ. ಟೆಲಿ ಮಾಕೆಟಿಂಗ್ ಕಂಪನಿಗಳು ಯೋಚಿಸುವ ಸ್ಥಿತಿ ಬಂದಿಲ್ಲ. ಮುಖ್ಯವಾಗಿ, ಅವಿನ್ನೂ ದಂಡ ಕಟ್ಟುತ್ತಿಲ್ಲ! ಆದರೂ ಎಂ ಅರ್ನ್, ಎಂ ಜಿಂಜರ್‌ನಂತವು ಕಾರ್‍ಯಾರಂಭಗೊಂಡಿದ್ದು ಚಂದಾದಾರರು ಸಂಭಾವನೆ ಪಡೆಯುತ್ತಿದ್ದಾರೆ. ದೊಡ್ಡ ಪ್ರಮಾಣದ ಯಶಸ್ಸಿಗೆ ನಾವು ಇನ್ನೂ ಸ್ವಲ್ಪ ಕಾಲ ಕಾಯಬೇಕು.
ಎರಡು ವರ್ಷಗಳ ಹಿಂದಿನ ಲೇಖನವಿದು. ಆದರೂ ನಾವು ಈ ನಿಟ್ಟಿನಲ್ಲಿ ಹೆಚ್ಚು ದೂರ ಹೋಗಿಲ್ಲ. ಇವತ್ತಲ್ಲ ನಾಳೆ, ಈ ವೆಬ್‌ಗಳ ಕಾಲ ಬರುತ್ತದೆ. ಅಷ್ಟರೊಳಗೆ ನಾವು ಮೊದಲ ಸದಸ್ಯರಾಗಿ ಲಾಭ ಗಿಟ್ಟಿಸಲೇಬೇಕು. ಅಷ್ಟಕ್ಕೂ ಹೋದರೊಂದು ಕಲ್ಲು. ಬೀಸಲೇನು ಸಮಸ್ಯೆ?
ಬರುವ ದಿನಗಳಲ್ಲಿ ಇನ್ನು ಕೆಲವು ವೆಬ್ ಮಾಹಿತಿ ನೀಡುವ ಆಸೆಯಿದೆ. ತುಸು ನಿರೀಕ್ಷಿಸಿ.....


- ಮಾವೆಂಸ

 
200812023996