ಶುಕ್ರವಾರ, ಅಕ್ಟೋಬರ್ 30, 2009

ಅನಪೇಕ್ಷಿತ ಕರೆ ತಡೆಗೆ ‘ಡು ನಾಟ್ ಕಾಲ್’




ನಿಜ, ಟ್ರಾಯ್ ಬರುವ ದಿನಗಳಲ್ಲಿ ‘ಡು ಕಾಲ್’ ಎಂಬ ನೂತನ ಪದ್ಧತಿಯನ್ನು ಜಾರಿಗೆ ತರಲಿಕ್ಕಿದೆ. ಮೊಬೈಲ್‌ನಲ್ಲಿ ನಮಗೆ ಬೇಕಾದ ಜಾಹೀರಾತು ಕರೆಯನ್ನು ನಮಗೆ ಅನುಕೂಲವಾದ ಸಮಯದಲ್ಲಿ ಆಲಿಸಲು ಅವಕಾಶವಾಗುತ್ತದೆ. ಆದರೆ ಆ ನಿಯಮ ಬರಲು ತುಸು ಸಮಯ ಬೇಕು. ಟ್ರಾಯ್ ಕಚ್ಚಾ ನಿಯಮವನ್ನು ರೂಪಿಸಿ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಕೇಳಬೇಕು, ಮೊಬೈಲ್ ಸೇವಾದಾತರು - ಜಾಹಿರಾತುದಾರರು ಮತ್ತು ಗ್ರಾಹಕರಾರಿಗೂ ಅನ್ಯಾಯವಾಗದ ವ್ಯವಸ್ಥೆಯನ್ನು ರೂಪಿಸಬೇಕು. ಆವರೆಗೆ ಮೊಬೈಲ್ ಚಂದಾದಾರನಿಗೆ ಕಿರಿಕಿರಿ ಕರೆಗಳಿಂದ ಮುಕ್ತಿ ಇಲ್ಲವೇ? ಆಮಟ್ಟಿಗೆ ಪರಿಣಾಮಕಾರಿಯಾದ ಟ್ರಾಯ್ ನಿಯಮ ಈಗಾಗಲೇ ಜಾರಿಯಲ್ಲಿದೆ. ಕೈಹಿಡಿದು ನಡೆಸುವ ಮಾದರಿಯಲ್ಲಿ ವಿವರ ಇಲ್ಲಿವೆ.
ಬರ್ರ್ ಎಂದು ಬೈಕ್‌ನಲ್ಲಿ ಹೋಗುತ್ತಿರುವಿರಿ. ಜೇಬಿನಲ್ಲಿರುವ ಮೊಬೈಲ್ ರಿಂಗಾಗತೊಡಗಿದೆ. ಏನು ಅಜೆಂಟೋ ಎಂದು ರಸ್ತೆ ಬದಿಗೆ ಬಂದು ಮೊಬೈಲ್ ಎತ್ತಿದರೆ ‘ನಿಮಗೆ ಈ ಹಾಡು ಬೇಕಿದ್ದರೆ ಸ್ಟಾರ್ ಒತ್ತಿ.....’ ಎಂಬ ಕಾಲರ್‌ಟ್ಯೂನ್ ಜಾಹೀರಾತು! ಮಹತ್ವದ ಸಭೆ ನಡೆಯುತ್ತಿದೆ. ಗಂಭೀರ ಚರ್ಚೆಯಲ್ಲಿ ಭಾಗವಹಿಸಿದ್ದೀರಿ. ಮೊಬೈಲ್‌ನ ವೈಬ್ರೇಟರ್ ಮೋಡ್ ನಿಮ್ಮನ್ನು ಎಚ್ಚರಿಸುತ್ತಿದೆ. ಕರೆ ಬಂತು, ಕರೆಬಂತು... ನಂಬರ್ ನೋಡಿದರೆ ಅಪರಿಚಿತ. ವಿಷಯ ಏನಿದ್ದೀತೋ ಎಂದು ಕರೆ ಸ್ವೀಕರಿಸಿದರೆ " ನಿಮಗೆ ನಮ್ಮ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಬೇಕೆ?...." ಎಂಬ ನುಲಿಯುವ ಯುವತಿಯ ಬಲವಂತದ ಒತ್ತಾಯ!!
ಈ ಸಂಬಂಧ ಕಿರಿಕಿರಿಗೊಳಗಾದ ಮೊಬೈಲ್ ಗ್ರಾಹಕರ ದೂರು ಇಂದು ನಿನ್ನೆಯದಲ್ಲ. ಆದರೆ ಅದರ ತಡೆಗೆ ಯಾವುದೇ ನಿರ್ದಿಷ್ಟ ಕಾನೂನುಗಳಿರಲಿಲ್ಲ. ಈ ಮುನ್ನ ಒಳಬರುವ ಕರೆಗಳಿಗೂ ವೆಚ್ಚ ವಿಧಿಸುತ್ತಿದ್ದ ಕಾಲದಲ್ಲಂತೂ ಈ ಅಪರಿಚಿತ ಕರೆಗಳು ಭಯವನ್ನೇ ಹುಟ್ಟಿಸುತ್ತಿದ್ದವು. ಪ್ರಸ್ತುತ ಕೇಂದ್ರ ಸರ್ಕಾರ ಕೂಡ ತನ್ನ ಜವಾಬ್ದಾರಿಗಳನ್ನು ಟ್ರಾಯ್‌ಗೆ ವಹಿಸಿದೆ. ಟ್ರಾಯ್ ಕಾನೂನು ಬಂದು ಹತ್ತು ವರ್ಷಗಳು ಸಂದಿವೆ. ಬಹುಪಾಲು ಗ್ರಾಹಕ ಪರ ವಹಿಸಿರುವ ಟ್ರಾಯ್ ಕಿರಿಕಿರಿ ಜಾಹೀರಾತು ಕರೆಯ ವಿಚಾರದಲ್ಲೂ ಪರಿಹಾರಕ್ಕೆ ಹೆಜ್ಜೆ ಇರಿಸಿದೆ. ಸ್ವತಃ ಟೆಲಿಕಾಂ ರೆಗ್ಯುಲೇಟರಿ ಆಥಾರಿಟಿ ಆಫ್ ಇಂಡಿಯಾ (ಟ್ರಾಯ್) ಪೋಷಿಸಿಕೊಂಡಂತೆ ಅನಗತ್ಯ ಜಾಹಿರಾತು ಕರೆ, ಸಂದೇಶಗಳನ್ನು ನಿರ್ಬಂಧಿಸುವ ಅದರ ಮಹಾತ್ವಾಕಾಂಕ್ಷೆಯ ಯೋಜನೆಯೇ ಈ ‘ಡು ನಾಟ್ ಕಾಲ್’ ನೊಂದಣಿ. (ಎನ್‌ಡಿಎನ್‌ಸಿ)
ತಡೆಗೆ ಹಲವು ಒತ್ತಾಯ
ಒಂದು ಚೂರು ಫ್ಲಾಶ್ ಬ್ಯಾಕ್‌ಗೆ ಹೋಗಿಬರುವುದು ರುಚಿಕರ. ೨೦೦೫ರಷ್ಟು ಹಿಂದೆಯೇ ಸುಪ್ರೀಂಕೋರ್ಟ್‌ನ ಮುಂದೆ ಅನಪೇಕ್ಷಿತ ಜಾಹಿರಾತು ಕರೆ, ಎಸ್‌ಎಂಎಸ್ ಸಂಬಂಧವಾಗಿ ಒಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿ (wp 35/2005) ದಾಖಲಾಗಿತ್ತು. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಎಂಬ ಸ್ವಯಂಸೇವಾ ಸಂಸ್ಥೆಯಿಂದ ‘ಮೊಬೈಲ್ ಸೇವಾದಾತರು ತಾವು ನೀಡಿದ ವೈಯುಕ್ತಿಕ ದಾಖಲೆಗಳನ್ನು ಜಾಹಿರಾತು - ವೃತ್ತಿಪರ ಉದ್ದೇಶಗಳಿಗೆ ಬಳಸುತ್ತಿವೆ. ಭಾರತೀಯ ಟೆಲಿಗ್ರಾಫ್ ಕಾಯ್ದೆ ೧೯೫೧ರ ಸೆಕ್ಷನ್ ೪೨೭ ಮತ್ತು ೫೧೩ರ ಪ್ರಕಾರ ಇದು ಉಲ್ಲಂಘನೆ’ ಎಂದು ಕೇಂದ್ರ ಸರ್ಕಾರದ ವಿರುದ್ಧ ಆ ಅರ್ಜಿಯಲ್ಲಿ ವಾದ ಮಾಡಲಾಗಿತ್ತು. ಆ ದಿನಗಳಲ್ಲಿ ಇಂತಹ ಕರೆಗಳನ್ನು ಬಲುಮುಖ್ಯವಾಗಿ ಮಾಡುತ್ತಿದ್ದುದು ಬ್ಯಾಂಕ್, ಫೈನಾನ್ಸ್‌ನಂತ ಹಣಕಾಸು ವ್ಯವಹಾರದ ಸಂಸ್ಥೆಗಳು. ಹಾಗಾಗಿ ಕೋರ್ಟ್ ಆರ್‌ಬಿಐಗೆ ಸೂಚನೆ ನೀಡಿ, ಇನ್ನು ಮುಂದೆ ಈ ಅನಗತ್ಯ ಕರೆ ತಡೆಯಲೇಬೇಕು ಎಂದು ಆದೇಶಿಸಿತು. ಪಿಎಲ್‌ಐ ಅರ್ಜಿಗೆ ಗೆಲುವು ಸಿಕ್ಕಿತ್ತು!
ಚುರುಕಾಗಿ ಕೆಲಸ ಮಾಡಿದ ಆರ್‌ಬಿಐ ಏಪ್ರಿಲ್ ವೇಳೆಗಾಗಲೇ ತನ್ನ ವರದಿಯನ್ನು ಸಲ್ಲಿಸಿಯಾಗಿತ್ತು. ಅದರ ಪ್ರಕಾರ, ಒಮ್ಮಿಂದೊಮ್ಮೆಗೆ ಈ ಕರೆ ಮಾದರಿಯನ್ನೇ ನಿಷೇಧಿಸುವಂತಾಗಬಾರದು, ವೃತ್ತಿಪರ ಉದ್ದೇಶಗಳಿಗೆ ಇದನ್ನು ಬಳಸುವಂತ ಅತ್ಯಪರೂಪದ ಸಂಪರ್ಕ ಮಾಧ್ಯಮವನ್ನು ಬಿಟ್ಟುಕೊಡುವುದು ಸರಿಯಲ್ಲ. ಪ್ರಚಾರಕ್ಕೆ ಹಾಗೂ ಮಾಹಿತಿಗೆ ಇದು ಅತ್ಯಗತ್ಯ’ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿಯೇ ಆರ್‌ಬಿಐ ೨೦೦೫ರ ನವೆಂಬರ್‌ನಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿತು. ಅದರ ಪ್ರಕಾರ ಇನ್ನು ಮುಂದೆ ತಮಗೆ ಕಿರುಕುಳ ಕೊಡದಿರಿ ಎಂದು ಸೂಚಿಸಿದ ಗ್ರಾಹಕರಿಗೆ ಯಾವುದೇ ಬ್ಯಾಂಕ್ ಕರೆ ಮಾಡುವಂತಿರಲಿಲ್ಲ. ಆದರೆ ಇದು ಅಂತಹ ಪರಿಣಾಮವನ್ನೇನೂ ಬೀರಲಿಲ್ಲ. ಆರ್‌ಬಿಐ ಬ್ಯಾಂಕ್‌ಗಳ ಹಿತ ಕಾಪಾಡಿತು!
೨೦೦೬ರ ಮೇನಲ್ಲಿ ಒರಿಸ್ಸಾದ ಬಿ.ಜೆ.ಪಾಂಡಾ ರಾಜ್ಯಸಭೆಯಲ್ಲಿ ಖಾಸಗಿ ಮಸೂದೆಯನ್ನು ಮಂಡಿಸಿದ್ದುಂಟು. ಅದು ‘ಪ್ರಿವೆನ್ಶನ್ ಆಫ್ ಅನ್‌ಸಾಲಿಸಿಟೆಡ್ ಟೆಲಿಫೋನಿಕ್ ಆಕ್ಟ್ ಎಂಡ್ ಪ್ರೊಟೆಕ್ಷನ್ ಆಫ್ ಪ್ರೈವೆಸಿ’ ಎಂಬ ಹೆಸರಿನಲ್ಲಿ ಮಂಡನೆಯಾಗಿತ್ತು. ಈ ಮಸೂದೆ ಅನಪೇಕ್ಷಿತವಾದ ವ್ಯಾಪಾರಿ ಜಾಹಿರಾತನ್ನು ನಿಷೇಧಿಸಲು ಸೂಚಿಸಿತ್ತು. ಉಲ್ಲಂಘನೆಗೆ ಎರಡು ವರ್ಷದ ಜೈಲು ಶಿಕ್ಷೆಯಿಂದ ಗರಿಷ್ಟ ನಾಲ್ಕು ವರ್ಷದವರೆಗೆ ಎಂದು ನಿಗದಿಪಡಿಸಲಾಗಿತ್ತು. ಎರಡು ಲಕ್ಷದವರೆಗೆ ದಂಡ ವಿಧಿಸಲೂ ಆ ಬಿಲ್‌ನಲ್ಲಿ ಪ್ರಾವಿಧಾನವನ್ನು ಇರಿಸಲಾಗಿತ್ತು. ಇತರ ರಾಜಕಾರಣಿಗಳ ಕೃಪಾ ಪೋಷಣೆಯಿಲ್ಲದ ಕಾಯ್ದೆ ಬರಕಾತ್ತಾಗಲಿಲ್ಲ.
ಅಷ್ಟಕ್ಕೆ ಮುಗಿಯಲೂ ಇಲ್ಲ. ಭಾರತಿ ಟೆಲಿ ವೆಂಚರ್ ವಿರುದ್ಧ ಶರ್ಮ ಎಂಬಾತ ದೆಹಲಿಯ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅನಪೇಕ್ಷಿತ ಕರೆಯ ಕಿರಿಕಿರಿಯನ್ನು ವಿರೋಧಿಸಿ ದೂರು ಸಲ್ಲಿಸಿದ. ಈ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿತು. ಅದು ತನ್ನ ತೀರ್ಪಿನಲ್ಲಿ, ಈ ಕುರಿತು ಅಗತ್ಯ ನಿಯಮ ರೂಪಿಸಲು ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಟ್ರಾಯ್‌ಗೆ ಆದೇಶ ನೀಡಿತು. ಇದರ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಹೋಗಲಾಗಿತ್ತಾದರೂ ಅದೂ ಮೇಲಿನ ಆದೇಶವನ್ನೇ ಎತ್ತಿಹಿಡಿಯಿತು. ಒಟ್ಟಾರೆಯಾಗಿ ಟ್ರಾಯ್‌ಗೆ ಈ ಸಂಬಂಧ ವ್ಯವಸ್ಥೆಯೊಂದನ್ನು ಸ್ಥಾಪಿಸಲು ಸಮಯ ಪಕ್ವವಾಗಿತ್ತು. ಹಾಗೆಂದು ಈ ಸೌಲಭ್ಯ ನೀಡಿದ ದೇಶಗಳಲ್ಲಿ ಭಾರತ ಮೊದಲನೆಯದೇನೂ ಆಗಿರಲಿಲ್ಲ. ಅಮೆರಿಕ, ಕೆನಡಾ, ಇಂಗ್ಲೆಂಡ್ ಹಾಗೂ ಐರ್ಲೆಂಡ್‌ಗಳಲ್ಲಿ ಹಿಂದಿನಿಂದಲೇ ಡು ನಾಟ್ ಕಾಲ್ ನೊಂದಣಿ ವ್ಯವಸ್ಥೆ ಜಾರಿಗೆ ಬಂದಿತ್ತು. ಹಾಂಗ್‌ಕಾಂಗ್‌ನಲ್ಲಿ ಯಾವುದೇ ಟೆಲಿ ಮಾರ್ಕೆಟಿಂಗ್ ಕಂಪನಿ ಮೊಬೈಲ್ ಗ್ರಾಹಕನ ಒಪ್ಪಿಗೆ ಪಡೆದ ನಂತರವಷ್ಟೇ ಟೆಲಿ ಮಾರ್ಕೆಟಿಂಗ್ ಮಾಡಬಹುದು ಎಂಬ ನಿಯಮವಿತ್ತು.
ಅಳೆದೂ ಸುರಿದು ೨೦೦೮ರ ಮಾರ್ಚ್‌ನಲ್ಲಿ ಟ್ರಾಯ್ ಜಾರಿಗೆ ತಂದ ಎನ್‌ಡಿಎನ್‌ಸಿ ಪದ್ಧತಿಯಲ್ಲಿ ಹಲವು ಕ್ಲಿಷ್ಟತೆಗಳಿತ್ತು. ಪ್ರತಿಯೊಂದು ಮೊಬೈಲ್ ಸೇವಾದಾರರು ವಿಭಿನ್ನ ವಿಭಿನ್ನ ಕರೆ ಸಂಖ್ಯೆ, ಎಸ್‌ಎಂಎಸ್ ಮಾದರಿಯಿಂದ ಈ ಡು ನಾಟ್ ಕಾಲ್ ನೊಂದಣಿಯನ್ನು ತಮ್ಮ ತಮ್ಮ ಮೊಬೈಲ್ ಕಂಪನಿಗಳಲ್ಲಿ ಮಾಡಿಕೊಳ್ಳಬೇಕಿತ್ತು. ಬಹುಪಾಲು ಗ್ರಾಹಕರಿಗೆ ಇದು ಗೊಂದಲವಾಗಿ ಪರಿಣಮಿಸುತ್ತಿದ್ದ ಪರಿಣಾಮವಾಗಿ ಅಗತ್ಯವಿದ್ದರೂ ಎನ್‌ಡಿಎನ್‌ಸಿ ನೊಂದಣಿ ಮಾಡಿಸಿಕೊಳ್ಳದೆ ಸುಮ್ಮನುಳಿಯುತ್ತಿದ್ದರು. ಇದನ್ನು ಮನಗಂಡ ಟ್ರಾಯ್ ಈ ವ್ಯವಸ್ಥೆಯನ್ನು ಸರಳೀಕೃತಗೊಳಿಸಿದೆ. ಈಗ ಡು ನಾಟ್ ಕಾಲ್ ನೊಂದಣಿ ಎಲ್ಲ ಕಂಪನಿಯ ಮೊಬೈಲ್ ಗ್ರಾಹಕರಿಗೂ, ಸ್ಥಿರ ದೂರವಾಣಿ ಚಂದಾದಾರರಿಗೂ ಏಕ ಪ್ರಕಾರ.
ನೀವೂ ನೊಂದಾಯಿಸಿ
ಹೇಗೆ? ಪ್ರಥಮ ಹೆಜ್ಜೆ ಈ ಮುಂದಿನಂತೆ. ೧೯೦೯ಕ್ಕೆ ಕರೆಮಾಡಿ. ಇದು ಸಂಪೂರ್ಣ ಉಚಿತ ಕರೆ. ಇಲ್ಲಿ ಸೂಚನೆಗಳನ್ನು ಪಾಲಿಸುತ್ತ ಬಂದರೆ ಎನ್‌ಡಿಎನ್‌ಸಿಯಲ್ಲಿ ನೊಂದಣಿಯಾಗುತ್ತದೆ. ಚಂದಾದಾರರು ಎಸ್‌ಎಂಎಸ್ ಮೂಲಕವೂ ನೊಂದಾಯಿಸಿಕೊಳ್ಳಬಹುದು. ಕ್ಯಾಪಿಟಲ್ ಅಕ್ಷರಗಳಲ್ಲಿ STARTಎಂದು ಟೈಪ್ ಮಾಡಿ ಒಂದು ಸ್ಪೇಸ್ ಕೊಟ್ಟುDNDಎಂದು ಟೈಪ್ ಮಾಡಬೇಕು. (ಮಾದರಿ - START DND) ಇದನ್ನು ಕೂಡ ೧೯೦೯ಗೆ ಕಳುಹಿಸಬೇಕು. ಈ ಸಂಖ್ಯೆಗೆ ಮಾಡುವ ಎಸ್‌ಎಂಎಸ್ ಸಹ ಉಚಿತ. ಇಂದು ಹೊಸದಾಗಿ ಚಂದಾದಾರರಾಗುವವರಿಗೆ ಅರ್ಜಿ ಫಾರಂನಲ್ಲಿಯೇ ಎನ್‌ಡಿಎನ್‌ಸಿಯಲ್ಲಿ ನೊಂದಾಯಿಸಿಕೊಳ್ಳುವ ಆಯ್ಕೆಯನ್ನು ಕೊಡಲಾಗುತ್ತಿದೆ.
ಮುಂದಿನ ಹೆಜ್ಜೆಯಲ್ಲಿ ನಿಮ್ಮ ಎಸ್‌ಎಂಎಸ್ ಯಾ ಕರೆ ಮೂಲಕ ನೊಂದಾವಣೆ ಮಾಡಿಕೊಂಡ ನಂತರ ಸೇವಾದಾರರು ನಿಮಗೊಂದು ‘ದಾಖಲಾತಿ ಸಂಖ್ಯೆ’ಯನ್ನು ನೀಡುತ್ತಾರೆ. ಇದನ್ನು ಕಾಪಿಟ್ಟುಕೊಳ್ಳಬೇಕು, ಮುಂದಿನ ಯಾವುದೇ ವ್ಯವಹಾರಕ್ಕೆ ಈ ಸಂಖ್ಯೆ ಬೇಕೇಬೇಕು. ಗ್ರಾಹಕ ಡು ನಾಟ್ ಕಾಲ್‌ಗೆ ವಿನಂತಿ ಸಲ್ಲಿಸಿದ ೪೫ ದಿನಗಳ ಅವಧಿಯಲ್ಲಿ ಚಾಲ್ತಿಗೆ ಬರುತ್ತದೆ. ಅಂದರೆ ನೊಂದಾಯಿಸಿದ ಒಂದೂವರೆ ತಿಂಗಳ ನಂತರದಿಂದಷ್ಟೆ ಈ ಜಾಹಿರಾತು ಕರೆ - ಎಸ್‌ಎಂಎಸ್ ನಿಲ್ಲುತ್ತದೆ. ಇದೇ ೧೯೦೯ಗೆ ಕರೆ ಮಾಡಿ ಅಥವಾ STOP DND ಎಂಬ ಎಸ್‌ಎಂಎಸ್ ಮಾಡಿ ನೊಂದಣಿಯನ್ನು ರದ್ದುಗೊಳಿಸಲು ಅವಕಾಶವಿದೆ.
ನೊಂದಾವಣೆಯಾದ ೪೫ ದಿನಗಳ ತದ ನಂತರವೂ ವಾಣಿಜ್ಯ ಕರೆ ಸಂದೇಶ ಬರುತ್ತಿದ್ದರೆ ನೀವು ದೂರು ದಾಖಲಿಸಬೇಕಾಗುತ್ತದೆ. ಇಂತಹ ಕರೆ ಸಂದೇಶ ಬಂದ ೧೫ ದಿನಗಳೊಳಗೆ ಗ್ರಾಹಕ ದೂರು ಕೊಡಬೇಕು. ಮೊತ್ತ ಮೊದಲು ಸೇವಾದಾತರ ಕಾಲ್ ಸೆಂಟರ್‌ಗೆ ಕರೆಮಾಡಿ ದೂರು ದಾಖಲಿಸಬೇಕು. ದಾಖಲಿಸುವ ವೇಳೆ ಇವನ್ನು ಗಮನಿಸಿ; ೧) ನಿಮ್ಮ ದೂರವಾಣಿ ಸಂಖ್ಯೆ, ೨) ಟೆಲಿ ಮಾರ್ಕೆಂಟಿಂಗ್ ಮಾಡಿದ ದೂರವಾಣಿ ಸಂಖ್ಯೆ, ೩) ಕರೆಯ ದಿನಾಂಕ ಮತ್ತು ಸಮಯ, ೪) ಈ ಕರೆ ಅಥವಾ ಎಸ್‌ಎಂಎಸ್‌ನ ವಿಷಯ - ಈ ನಾಲ್ಕು ಅಂಶಗಳನ್ನು ನೀವು ಉಲ್ಲೇಖಿಸಬೇಕು. ದೂರು ದಾಖಲಿಸಿದ್ದಕ್ಕೆ ಕಾಲ್ ಸೆಂಟರ್‌ನಿಂದ ಡಾಕೆಟ್ ಸಂಖ್ಯೆಯನ್ನು ಗ್ರಾಹಕ ಮುದ್ದಾಂ ಪಡೆಯಬೇಕು. ಇಂತಹ ಚಂದಾದಾರ ೫೦೦ ರೂ. ಪರಿಹಾರಕ್ಕೆ ಸೇವಾದಾತರನ್ನು ಒತ್ತಾಯಿಸಬೇಕು. ಮುಂದಿನ ೩೦ ದಿನಗಳಲ್ಲಿಯೂ ನಿಮ್ಮ ದೂರನ್ನು ಪರಿಹರಿಸದಿದ್ದರೆ, ಇನ್ನೂ ಅನಪೇಕ್ಷಿತ ವಾಣಿಜ್ಯ ಕರೆ- ಸಂದೇಶ ಹಿಂದಿನ ಟೆಲಿ ಮಾರ್ಕೆಂಟಿಂಗ್ ಕಂಪನಿಯಿಂದಲೇ ಬರುತ್ತಿದ್ದರೆ ನೀವು ಟ್ರಾಯ್‌ನಲ್ಲಿಯೇ ದೂರು ದಾಖಲಿಸಬಹುದು. ಅವರ ಇ-ಮೇಲ್ ಐಡಿucccomplaints@ndncregistry.gov.in
ಇದೀಗ ಟ್ರಾಯ್ ‘ಟೆಲಿಕಾಂ ಅನ್‌ಸಾಲಿಸಿಟೆಡ್ ಕಮರ್ಷಿಯಲ್ ಕಮ್ಯುನಿಕೇಷನ್(ಯುಸಿಸಿ) ಎರಡನೇ ತಿದ್ದುಪಡಿ - ೨೦೦೮’ ನಿಯಮಗಳನ್ನು ಜಾರಿಗೊಳಿಸಿದೆ. ಇನ್ನು ಮುಂದೆ ಮೊಬೈಲ್ ಕಂಪನಿ ದೂರು ಸ್ವೀಕರಿಸಿದ ೨೮ ದಿನಗಳಲ್ಲಿ ತನ್ನ ತನಿಖೆಯನ್ನು ಪೂರ್ಣಗೊಳಿಸಲೇಬೇಕು. ಒಂದೊಮ್ಮೆ ಈ ಗಡುವಿನಲ್ಲಿ ದೂರನ್ನು ನಿರ್ವಹಿಸದಿದ್ದರೆ, ಮೊದಲ ಸಂದರ್ಭದಲ್ಲಿ ಗರಿಷ್ಟ ೫ ಸಾವಿರ ರೂ. ದಂಡವನ್ನು ಸೇವಾದಾತ ಅರ್ಜಿದಾರನಿಗೆ ಕೊಡಬೇಕಾಗುತ್ತದೆ. ನಿರ್ಲಕ್ಷ್ಯ ಮುಂದುವರಿದಲ್ಲಿ ದಂಡದ ಮೊತ್ತ ೨೦ ಸಾವಿರದವರೆಗೆ ಹೆಚ್ಚಬಹುದು. ಅಷ್ಟೇ ಅಲ್ಲ, ಇನ್ನು ಮುಂದೆ ಪ್ರತಿ ಹೊಸ ಚಂದಾದಾರನಿಗೆ ಆಕ್ಟಿವೇಷನ್ ವೇಳೆಯಲ್ಲಿಯೇ ‘ಡು ನಾಟ್ ಕಾಲ್ ರಿಜಿಸ್ಟ್ರಿ’ಗೆ ನೊಂದಣಿ ಆಗಬೇಕೆ ಎಂಬ ವಿಚಾರಣೆಯನ್ನು ಸಿಮ್‌ದಾತರು ಮಾಡಲೇಬೇಕು. ಗಮನದಲ್ಲಿರಲಿ, ಈ ಯೋಜನೆ ೨೦೦೮ರ ಮಾರ್ಚ್ ಒಂದರಿಂದ ಜಾರಿಗೆ ಬಂದಿದೆ. ಚಂದಾದಾರರು ತಮ್ಮ ಸೇವಾದಾತರ ಅಧಿಕೃತ ವೆಬ್‌ಸೈಟ್‌ಗೆ ಹೋಗಿಯೂ ತಮ್ಮನ್ನು ಎನ್‌ಡಿಎನ್‌ಸಿ ವ್ಯವಸ್ಥೆಯಲ್ಲಿ ನೊಂದಾಯಿಸಿಕೊಳ್ಳಬಹುದು.
ಕಿರಿಕಿರಿ ಕರೆ ಹಿಂದೆ ಕರುಣೆಯ ಕತೆ
ಭಾರತದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಜಾರಿಗೆ ತಂದಿರುವ ಒಂದು ಕ್ರಾಂತಿಕಾರಕ ಕ್ರಮವೆಂದರೆ, ಅದು ನ್ಯಾಷನಲ್ ಡು ನಾಟ್ ಕಾಲ್ ರಿಜಿಸ್ಟ್ರಿ ಎಂದು ತಮ್ಮ ಭಾಷಣಗಳಲ್ಲಿ ಖುದ್ದು ಮ್ಯಾಥ್ಯೂ ಫಾಲಮಟ್ಟಮ್ ಹೇಳದಿರರು. ‘ಈ ವ್ಯವಸ್ಥೆಯಲ್ಲಿ ತಮ್ಮ ಮೊಬೈಲ್ ಸಂಖ್ಯೆಯನ್ನು ದಾಖಲಿಸಿದವರಿಗೆ ಯಾವುದೇ ಕಮರ್ಷಿಯಲ್ ಕರೆ ಬರುವುದಿಲ್ಲ.’ ಅವರ ವಿವರಣೆ ಕೇಳಿ ಪ್ರೇರಿತರಾಗುವವರು ಹೆಚ್ಚು ಜನರಿದ್ದಾರು. ತನ್ನ ನಿಬಿಡ ಕೆಲಸ ಕಾರ್ಯಗಳ ನಡುವೆ ಈ ಕಮರ್ಷಿಯಲ್ ಕರೆ, ಸಂದೇಶಗಳ ಕಿರಿ ಕಿರಿ ಬೇಡವೆಂದು ನಮ್ಮಲ್ಲಿನ ಬಹುಸಂಖ್ಯಾತ ಗಣ್ಯರು, ಅಧಿಕಾರಿಗಳು ತಮ್ಮ ಮೊಬೈಲ್ ನಂಬರ್‌ನ್ನು ನೊಂದಾಯಿಸಿಬಿಟ್ಟಿರುತ್ತಾರೆ. ಆಶ್ಚರ್ಯ, ಸ್ವತಃ ಟ್ರಾಯ್‌ನ ಗ್ರಾಹಕ ವ್ಯವಹಾರಗಳ ಉಪ ಆಯುಕ್ತ ಈ ಮ್ಯಾಥ್ಯೂ ಫಾಲಮಟ್ಟಮ್ ತಮ್ಮ ನಂಬರ್ ನೊಂದಾಯಿಸಿಲ್ಲ!
ಮ್ಯಾಥ್ಯೂ ಹೇಳುತ್ತಾರೆ, “ಭಾರತದಲ್ಲಿ ಇಂತಹ ವ್ಯಾಪಾರೀ ಕರೆ ವ್ಯವಸ್ಥೆಗಳ ಕಾರಣದಿಂದಾಗಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಒಂದೊಮ್ಮೆ ನಾವೆಲ್ಲರೂ ಎನ್‌ಡಿಸಿಯಲ್ಲಿ ಹೆಸರು ನೊಂದಾಯಿಸಿದರೆ ನಮ್ಮಲ್ಲಿನ ಯುವ ಜನರ ಉದ್ಯೋಗಾವಕಾಶವನ್ನೇ ಕಸಿದಂತಾಗುತ್ತದೆ. ಹಾಗಾಗಿ ನಾನು ...”
ಕಮರ್ಷಿಯಲ್ ಕರೆಯ ಕಿರಿಕಿರಿಯ ಇನ್ನೊಂದು ಮಗ್ಗುಲಿನಲ್ಲಿ ಮಾನವೀಯ ಆಶಯ!

-ಮಾವೆಂಸ

ಬುಧವಾರ, ಅಕ್ಟೋಬರ್ 21, 2009

ಹಳ್ಳಿ ಮೂಲೆಯ ಗಟ್ಟಿ ಪ್ರಯತ್ನ - ಮಾವಿನಮನೆ ವಾಚನಾಲಯ






‘ಉದಯವಾಣಿ’ಯ ಉಪಸಂಪಾದಕ ನಾಗರಾಜ ಮತ್ತೀಗಾರ ‘ತರಂಗ’ ಸಾಪ್ತಾಹಿಕದ ಅಕ್ಟೋಬರ್ ೨೯ರ ಸಂಚಿಕೆಯಲ್ಲಿ ಬರೆದ ಲೇಖನ ಕೆಳಗಿದೆ. ಓದಿ. ಅದನ್ನು ಇಲ್ಲಿ ಅಪ್‌ಲೋಡ್ ಮಾಡಲು ಕಾರಣ, ಅದರ ವಿಷಯ ನಾನು ನಿರ್ವಹಿಸುತ್ತಿರುವ ಒಂದು ಪುಟ್ಟ, ಸಾಹಿತ್ಯಿಕ ಪ್ರಯತ್ನ ಎಂಬುದು. ಇನ್ನೂ ಒಂದು ಆಸೆಯೆಂದರೆ, ಓದಿದ ನೀವೂ ನನ್ನೊಂದಿಗೆ ಈ ಪ್ರಯತ್ನದಲ್ಲಿ ಕೈಜೋಡಿಸುವ ಮನಸ್ಸು ಮಾಡಬಹುದು ಎಂಬುದು. ಅದು ದುರಾಸೆ ಅಲ್ಲ ಎಂದುಕೊಳ್ಳುವೆ!
ನಿಜಕ್ಕೂ ಸಹಾಯಕ್ಕೆ ವಿನಂತಿಸುತ್ತೇನೆ. ತುಸು ದೊಡ್ಡ ಮೊತ್ತದ ಧನ ಬೆಂಬಲ ಕೊಡುವವರಿಗೆ ಒಂದು ಮಾತು ಸ್ಪಷ್ಟೀಕರಿಸಲು ಬಯಸುತ್ತೇನೆ, ‘ಒಂದೊಮ್ಮೆ ಈ ವಾಚನಾಲಯ ಯಾವುದೇ ವರ್ಷ ಬಾಗಿಲು ಹಾಕಿದರೆ ನಿಮ್ಮ ಪಾವತಿಯನ್ನು ಪೂರ್ತಿ ನಿಮಗೆ ಮರಳಿಸುತ್ತೇವೆ"
ಆನ್‌ಲೈನ್‌ನಲ್ಲಿ ಸಹಾಯ ಮಾಡುವವರಿಗೆ ವಾಚನಾಲಯದ ಬ್ಯಾಕ್ ಖಾತೆ ವಿವರ
ಕರ್ನಾಟಕ ಬ್ಯಾಂಕ್, ಸಾಗರ ಶಾಖೆ ೫೭೭೪೦೧ ಶಿವಮೊಗ. ಕರ್ನಾಟಕ
ಖಾತೆ ನಂಬರ್ -7122500101304001 ಬ್ಯಾಂಕ್ ಕೋಡ್ - KARB0000712
ಸಹಾಯ ಮಾಡಿದವರ ವಿವರವನ್ನು ಬರುವ ದಿನದಲ್ಲಿ ಇದೇ ಬ್ಲಾಗ್‌ನಲ್ಲೂ ಒದಗಿಸುವೆ. ನಿಮ್ಮ ಯಾವುದೇ ಸಲಹೆ ಸೂಚನೆಗೂ ಸ್ವಾಗತ.
-ಮಾವೆಂಸ
================
ನಿಮಗೂ ಗೊತ್ತು, ಶಿವಮೊಗ್ಗ ಜಿಲ್ಲೆಯ ಸಾಗರದ ವರದಪುರ ಕ್ಷೇತ್ರಕ್ಕೆ ರಾಜ್ಯದ ನಕ್ಷೆಯಲ್ಲಿ ಒಂದು ಗುರುತರ ಸ್ಥಾನವಿದೆ. ಶ್ರೀಧರ ಸ್ವಾಮಿಗಳು ನೆಲೆಸಿದ ಈ ಸ್ಥಳ ಪ್ರೇಕ್ಷಣೀಯವಾಗಿಯೂ, ಧಾರ್ಮಿಕವಾಗಿಯೂ ಪ್ರವಾಸಿ ತಾಣ. ಹಾಗೆಂದು ಅಲ್ಲಿಗೆ ಹೋಗಲು ಸಾಗರದಲ್ಲಿ ಬಸ್ ಹತ್ತಿ ವರದಪುರದ ‘ದ್ವಾರಬಾಗಿಲು’ ಬಳಿ ಇಳಿದವರಿಗೆ ಮೊದಲು ಕಾಣಿಸುವುದು ಮಾತ್ರ ವಿಚಿತ್ರ ಹೆಸರಿನ ನಾಮಫಲಕ, ‘ವೀಣಾ ಸ್ಮಾರಕ ಮಾವಿನಮನೆ ವಾಚನಾಲಯ’. ಒಳಹೊಕ್ಕು ನೋಡಿದರೆ, ಇದರ ಬಗ್ಗೆ ಹೇಳಬೇಕಾದುದು ತುಂಬಾ ಇದೆ!
ಎಡಜಿಗಳೇಮನೆ ಮಾವಿನಸರ ಊರಿಗೆ ಸೇರಿದ್ದು ಉಮಾಮಹೇಶ್ವರ ದೇವಸ್ಥಾನ. ಇದರ ಬೆನ್ನಿಗೆ ಅರ್ಚಕರ ಮನೆ. ಮನೆಯ ಒಂದು ಭಾಗದಲ್ಲಿ ಮಾವಿನಮನೆ ವಾಚನಾಲಯ. ಈ ಎರಡೂ ಊರುಗಳ ಆದಿ - ಅಂತ್ಯಗಳ ಕಸಿಯೇ ಮಾವಿನಮನೆ! ಇಲ್ಲಿ ಬರೋಬ್ಬರಿ ೫೯ ನಿಯತಕಾಲಿಕಗಳು ಓದಲು ಸಿಗುತ್ತದೆ. ಎಲ್ಲವೂ ತಾಜಾ ತಾಜ! ಬಹುಷಃ ಎಂತಹ ಸರ್ಕಾರಿ ನಗರ ಗ್ರಂಥಾಲಯದಲ್ಲೂ ಇಷ್ಟು, ಕಷ್ಟ ಕಷ್ಟ.
ಮಾವಿನಮನೆ ವಾಚನಾಲಯ ಇಲ್ಲಿನ ಗ್ರಾಮಸ್ಥರ ಸಂಘಟನೆಯ ಫಲ. ಊರಿನ ಶ್ರೇಯೋಭಿಲಾಷೆಗೆಂದು ಅವರು ಗ್ರಾಮಾಭಿವೃದ್ಧಿ ಸಂಘವನ್ನು ಮಾಡಿಕೊಂಡಿದ್ದಾರೆ. ದೇವಸ್ಥಾನದ ನಿರ್ವಹಣೆಯ ಜೊತೆಗೆ ಗ್ರಾಮದ ಇನ್ನಿತರ ಚಟುವಟಿಕೆ ಇದರ ಗುರಿ. ಅದರ ಈಡೇರಿಕೆಗೆ ಪ್ರಪ್ರತ್ಯೇಕ ಸಮಿತಿಗಳಿವೆ. ಕೃಷಿ ವಿಚಾರಕ್ಕೊಂದು, ಮಹಿಳಾ ಚಿಂತನೆ ಚಟುವಟಿಕೆಗೊಂದು ಇದ್ದಂತೆ ಸ್ವತಂತ್ರ ವಾಚನಾಲಯ ಸಮಿತಿಯಿದೆ. ಮೂರು ಸದಸ್ಯರ ಸಮಿತಿಗೆ ಮಾ.ವೆಂ.ಸ.ಪ್ರಸಾದ್ ಸಂಚಾಲಕರು. ಗ್ರಾಮಾಭಿವೃದ್ಧಿ ಸಮಿತಿ ವಾರ್ಷಿಕ ಕೊಡುವ ೧,೪೦೦ ರೂ.ಗಳ ಜೊತೆಗೆ ಅಗತ್ಯಬೀಳುವ ಹೆಚ್ಚಿನ ಹಣಕಾಸು ಸಂಗ್ರಹಿಸುವ ಮೂಲಕ ಲೈಬ್ರರಿ ನಡೆಸುವ ಜವಾಬ್ದಾರಿ ಈ ವಾಚನಾಲಯ ಸಮಿತಿಯದ್ದು.
ಅಂಕಿಅಂಶಗಳತ್ತ ಗಮನಿಸಿದರೆ, ಪ್ರತಿ ತಿಂಗಳೂ ಸರಿಸುಮಾರು ೭೦೦ ರೂ.ಗಳನ್ನು ಪ್ರಯೋಜಕರು, ಚಂದಾದಾರರಿಂದ ಸಂಗ್ರಹಿಸಲಾಗುತ್ತದೆ. ಅದರಲ್ಲಿ ಎಂಟು ಸಾಪ್ತಾಹಿಕ, ಏಳು ಪಾಕ್ಷಿಕ, ೨೦ ಮಾಸಿಕಗಳನ್ನು ಖರೀದಿಸಿ ಓದುಗರಿಗೆ ಒದಗಿಸಲಾಗುತ್ತದೆ. ಇದರ ಜೊತೆಗೆ ೨೪ ಪತ್ರಿಕೆಗಳು ಖುದ್ದು ತಾವೇ ಉಚಿತವಾಗಿ ಸಂಚಿಕೆಗಳನ್ನು ಕಳಿಸಿಕೊಡುತ್ತವೆ. ಅದರಲ್ಲಿ ಸುಜಾತ ಸಂಚಿಕೆ, ಹವ್ಯಕ, ಆಯುರ್ವೇದ ಮತ್ತು ಯೋಗ...... ಹೆಸರಿಸ ಹೊರಟರೆ ಸಾಲು ದೀರ್ಘ. ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳು ಇಲ್ಲಿ ಲಭ್ಯವಾಗುವುದು ಗಮನಾರ್ಹ. ಓದಲು ಬರುವವರಿಗೆ ಒಂದು ತಾಪತ್ರಯವಿದೆ! ಇದು ಪ್ರತಿ ದಿನ ಸಂಜೆ ನಾಲ್ಕರಿಂದ ಎರಡು ಘಂಟೆ ಕಾಲ ಮಾತ್ರ ತೆರೆದಿರುತ್ತದೆ. ಹಾಗೆಂದು ವರ್ಷದ ಯಾವುದೇ ದಿನ ರಜೆ ಇಲ್ಲ. ಊರಿನವರಲ್ಲೇ ಪ್ರತಿ ದಿನಕ್ಕೆ ಇಬ್ಬರಂತೆ ಕಾರ್ಯಕರ್ತರನ್ನು ಆಯ್ದುಕೊಳ್ಳಲಾಗಿದೆ. ಕಾರ್ಯ ನಿರ್ವಹಿಸುವ ದಿನ ನಿಗದಿಪಟ್ಟಿರುತ್ತದೆ. ಆ ಕಾರ್ಯಕರ್ತರಲ್ಲೊಬ್ಬರು ಬಾಗಿಲು ತೆರೆಯುತ್ತಾರೆ. ಊಹ್ಞೂ, ಯಾರಿಗೂ ಸಂಬಳ, ಗೌರವಧನದ ಮಾತಿಲ್ಲ.
೨೦೦೪ರ ಗಾಂಧಿ ಜಯಂತಿಯ ದಿನ ಆರಂಭವಾದ ಈ ವಾಚನಾಲಯಕ್ಕೆ ಈಗ ಐದನೇ ವರ್ಷ. ಹಿಂತಿರುಗಿ ನೋಡಿದರೆ ಸಮಾಧಾನ ಸಂಖ್ಯೆಯ ದೃಷ್ಟಿಯಿಂದ ಮಾತ್ರ ಸಿಕ್ಕಿದೆ ಎನ್ನುತ್ತಾರೆ ಸಂಚಾಲಕ ಮಾವೆಂಸ, "ಇವತ್ತು ಪತ್ರಿಕೆಗಳಲ್ಲದೆ ೧೩೬೦ ಸಾಹಿತ್ಯಿಕ, ಸಾಹಿತ್ಯೇತರ ಕೃತಿಗಳು ನಮ್ಮಲ್ಲಿ ಲಭ್ಯ. ಎಲ್ಲ ಪತ್ರಿಕೆಗಳ ಯುಗಾದಿ, ದೀಪಾವಳಿ ವಿಶೇಷಾಂಕಗಳೂ ಬರುತ್ತವೆ. ಓದುವವರಿಗೆ ಆಸನ ವ್ಯವಸ್ಥೆ, ಅಲ್ಮೆರಾ ಸೌಲಭ್ಯ ತಕ್ಕಮಟ್ಟಿಗಿದೆ. ಆದರೆ ನಮ್ಮ ಬಹುಪಾಲು ಗುರಿಗಳು ಇನ್ನೂ ಬಾಕಿ ಬಾಕಿ. ವಾಚನಾಲಯಕ್ಕೆ ಪೂರಕವಾದ ಒಳಾಂಗಣ ಇರುವ ಸ್ವತಂತ್ರ ಕಟ್ಟಡ ಆಗಬೇಕಿದೆ. ಪತ್ರಿಕೆಗಳ ಹಾಗೂ ಗ್ರಾಮದ ಕುರಿತ ಡಾಟಾ ಸಂಗ್ರಹ ಯೋಜನೆ ಇನ್ನೂ ಪ್ರಾಥಮಿಕ ಹಂತದಲ್ಲೇ ಇದೆ. ಕಂಪ್ಯೂಟರ್ ಅಳವಡಿಸಿ ಗ್ರಾಮಸ್ಥರನ್ನು ಇ ಸಾಕ್ಷರರನ್ನಾಗಿಸುವ ಆಕಾಂಕ್ಷೆಯೂ ಸಾಧನೆಯಾಗಿಲ್ಲ
.
ಮಾವಿನಮನೆ ವಾಚನಾಲಯದ ಹೆಸರಿನ ಜೊತೆಗಿರುವ ವೀಣಾ ನೆನಪಿಗೆ ವಿಶೇಷ ಅರ್ಥವಿದೆ. ಈ ಊರಿನ ಮಗಳಾದ ವೀಣಾ ಎಂಬ ಸಾಹಿತ್ಯಾಸಕ್ತೆ ಹಾವು ಕಚ್ಚಿ ಅಕಾಲಿಕ ಸಾವು ಕಂಡಿದ್ದಾರೆ. ಅವರನ್ನು ಸದಾ ಸ್ಮರಿಸಿಕೊಳ್ಳಲು ಊರವರು ಬಳಸಿಕೊಂಡ ಮಾರ್ಗವೇ ಈ ‘ವೀಣಾ ಸ್ಮಾರಕ....’ ವಾಚನಾಲಯ ಇಟ್ಟ ಪ್ರತಿ ಯಶಸ್ವಿ ಹೆಜ್ಜೆಯೂ ವೀಣಾ ನೆನಪಿಗೆ ಅರ್ಪಿತ. ಹಾಗಿರುವುದರಿಂದಲೇ ನಮಗೆ ಇದು ನಾವು ಮಾಡಿದ್ದು ಎಂಬ ಯಾವುದೇ ಅಹಂಕಾರ ತಾಕುವುದಿಲ್ಲ ಎನ್ನುತ್ತಾರೆ ವಾಚನಾಲಯ ಸಮಿತಿ ಸದಸ್ಯೆ ಲಲಿತಾ ಜಿ.ಭಟ್.
ಪ್ರಗತಿಯ ಹಿಂದಿರುವ ಪ್ರಾಯೋಜಕರ ಪಾತ್ರವನ್ನು ಇನ್ನೋರ್ವ ಸದಸ್ಯೆ ಮಮತಾ ದಿನೇಶ್ ಉಲ್ಲೇಖಿಸುತ್ತಾರೆ. ಇಂದು ಮಾಸಿಕ ಹತ್ತು ರೂಪಾಯಿಯಿಂದ ವಾರ್ಷಿಕ ೫೦೦ ರೂ.ವರೆಗೆ ದೇಣಿಗೆ ನೀಡುವ ಸಹೃದಯಿಗಳಿದ್ದಾರೆ. ರಾಜ್ಯದ ಎಲ್ಲ ಭಾಗಗಳ ಸಾಹಿತ್ಯ ಪ್ರೇಮಿಗಳು ಧನಸಹಾಯಕ್ಕೆ ನಿಂತಿದ್ದಾರೆ. ಬೆಳಗಾಂನ ಪಾರ್ಥ ಸಾನು, ಲಿಂಗಸಗೂರಿನ ಲಕ್ಷೀಕಾಂತ್ ಕೊಂಪಲ್, ಬೆಂಗಳೂರಿನ ಸುರಭಿ ಸೂರ್ಯ.... ಹೀಗೆ ಪ್ರಾಯೋಜಕರಾಗಿರುವವರ ಸಂಖ್ಯೆ ಒಟ್ಟು ೩೨. ಇದರಲ್ಲಿ ಗ್ರಾಮಸ್ಥರು, ಊರ ಹೆಣ್ಣು ಮಕ್ಕಳೂ ಸೇರಿದ್ದಾರೆ. ಊರವರಲ್ಲದೆ ಅಕ್ಕ ಪಕ್ಕದ ಹಳ್ಳಿಗರು ಚಂದಾದಾರರಾಗಿ ಮನೆಗೆ ಪುಸ್ತಕ ಒಯ್ದು ಓದುತ್ತಿದ್ದಾರೆ. ಆದರೆ ವಾಚನಾಲಯದಲ್ಲಿಯೇ ಓದುವಿಕೆ ಉಚಿತ!
ಏನಿದರ ವೈಶಿಷ್ಟ್ಯ?
ಹಳ್ಳಿಯ ಮೂಲೆಯೊಂದರಲ್ಲಿ , ಕೇವಲ ೧೫ ಮನೆಗಳಿರುವ ಗ್ರಾಮದಲ್ಲಿ ಈ ಪ್ರಮಾಣದ ವಾಚನಾಲಯ ಚಾಲನೆಯಲ್ಲಿರುವುದು ಅಪರೂಪ. ಇಲ್ಲಿ ಓದಲು ಸಿಗುವಷ್ಟು ಪತ್ರಿಕೆಗಳು ಸರ್ಕಾರಿ ಗ್ರಂಥಾಲಯದಲ್ಲೂ ಕೈಗೆಟುಕಲ್ಲ ಎಂಬುದು ಕಠೋರ ಸತ್ಯ. ಈ ಸಾಧನೆಯ ಹಿಂದಿರುವವರು ಕೇವಲ ಕೃಷಿಕರು ಎನ್ನುವುದು ಇನ್ನೊಂದು ವಿಶೇಷ. ಇವುಗಳಲ್ಲದೆ ವಾಚನಾಲಯ ನಡೆಸುತ್ತಿರುವ ಹಲವು ಜಾಗೃತಿ ಕಾರ್ಯಕ್ರಮಗಳಲ್ಲಿ ಬ್ಯಾಂಕ್ ಮ್ಯಾನೇಜರ್ ಜೊತೆ ಚರ್ಚೆ, ಡಾ.ವಸುಂಧರಾ ಭೂಪತಿಯವರ ಪುಸ್ತಕಗಳ ವಿಮರ್ಶೆಯನ್ನು ಇಲ್ಲಿನ ಮಹಿಳೆಯರು ಮಾಡಿದ ವಿನೂತನ ಪ್ರಯೋಗದಂತವು ನೆನಪಿಡುವಂತದು.
ಈ ನಡುವೆ ವಾಚನಾಲಯ ಇನ್ನೊಂದು ಮಗ್ಗುಲಿನತ್ತ ತೆರೆದುಕೊಳ್ಳುವ ಸಾಧ್ಯತೆಗಳಿವೆ. ಈ ವಾಚನಾಲಯಕ್ಕೆ ಸದಾ ಧನಸಹಾಯ ಒದಗಿಸುತ್ತ ಬಂದಿರುವ ಕೆನರಾ ಬ್ಯಾಂಕ್ ಜ್ಯುಬಿಲಿ ಎಜುಕೇಷನ್ ಫಂಡ್ ಬೆಂಗಳೂರಿನಲ್ಲಿ ಸ್ಟಡಿ ಸೆಂಟರ್‌ನ್ನು ನಡೆಸುತ್ತಿದೆ. ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯ ಪುಸ್ತಕಗಳನ್ನು ಒದಗಿಸುವ ಕೆಲಸ ಅಲ್ಲಿ ನಡೆಯುತ್ತಿದೆ. ದುಬಾರಿ ಬೆಲೆಯ ಪಠ್ಯ ಪುಸ್ತಕ ಕೊಳ್ಳಲಾಗದವರಿಗೆ ಇದು ಸಂಜೀವಿನಿ. ಅಂತದ್ದೇ ಒಂದು ಸೌಲಭ್ಯವನ್ನು ಮಲೆನಾಡಿನಲ್ಲಿ ಸ್ಥಾಪಿಸಲು ಜ್ಯುಬಿಲಿ ಫಂಡ್ ಯೋಜಿಸಿದ್ದು ಇದೇ ಮಾವಿನಮನೆ ವಾಚನಾಲಯದಲ್ಲಿ ಜಾರಿಗೊಳಿಸಲು ಚಿಂತಿಸುತ್ತಿದೆ.
ಈ ವಾಚನಾಲಯಕ್ಕೆ ಶಿವಮೊಗ್ಗದ ಅಡಿಕೆ ದಲ್ಲಾಳಿ ಸಹಕಾರ ಸಂಸ್ಥೆ ಮ್ಯಾಮ್ಕೋಸ್, ಸಾಗರದ ವೆನಿಲ್ಲಾ ಬೆಳೆಗಾರರ ಸಂಘ, ಧರ್ಮಸ್ಥಳ ಹೊರನಾಡು ಕ್ಷೇತ್ರ ಪ್ರಮುಖರು ಸೇರಿದಂತೆ ಹಲವರು ಧನಸಹಾಯ ನೀಡಿರುವುದು ಈ ಪರಿ ಬೆಳವಣಿಗೆ ತೋರಿಸಲು ಕಾರಣವಾಗಿದೆ ಎಂಬ ಅಭಿಪ್ರಾಯ ಊರಿನ ಹಿರಿಯ ಜೀವ ಎಂ.ಜಿ.ಚಂದ್ರಶೇಖರ್‌ರಾವ್‌ರದ್ದು. ಬಹುಷಃ ಅವರ ಗುರಿ ಈಡೇರಿಕೆಗೆ ರಾಜ್ಯದ ಎಲ್ಲೆಡೆಯಿಂದ ಇನ್ನಷ್ಟು ಸಹಾಯಹಸ್ತ ಒದಗಬೇಕು, ಪ್ರಾಯೋಜಕರು ಮುಂದೆಬರಬೇಕು. ಹಾಗಾದರೆ ಇದು ರಾಷ್ಟ್ರದಲ್ಲಿಯೇ ಗುರ್ತಿಸುವಂತ ಸಾಧನೆ ಆದೀತು. ರಾಜ್ಯದಲ್ಲಿ ಏಕೈಕ ಎಂತಾದರೆ, ಹೆಗ್ಗೋಡಿನ ನಿನಾಸಂ ಇದ್ದಂತೆ ಇನ್ನೊಂದು ವಿನೂತನ ಪ್ರಯತ್ನ ಇದಾಗಲಿ ಅಲ್ಲವೇ?
ಇಂದು ವರದಪುರಕ್ಕೆ ಸಾವಿರ ಸಂಖ್ಯೆಯಲ್ಲಿ ಜನ ಭೇಟಿ ನೀಡುತ್ತಿದ್ದಾರೆ. ಹಲವರು ೨-೩ ದಿನ ಕಾಲ ತಂಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಾಚನಾಲಯಕ್ಕೆ ಓದುಗರ ಕೊರತೆ ಬೀಳಲಿಕ್ಕಿಲ್ಲ. ಶ್ರೀಧರಾಶ್ರಮದತ್ತ ಬರುವವರಿಗೆ ವೀಣಾ ಸ್ಮಾರಕ ವಾಚನಾಲಯ ಒಂದು ಬೋನಸ್. ಸಹಾಯಹಸ್ತ ಚಾಚಲು ಬಯಸುವವರು ಸಂಚಾಲಕರನ್ನು, ಎಡಜಿಗಳೇಮನೆ, ಸಾಗರ - ೫೭೭೪೦೧ ಈ ವಿಳಾಸದಲ್ಲಿ ಅಥವಾ ೦೮೧೮೩-೨೩೬೦೬೮, ೯೮೮೬೪೦೭೫೯೨ ದೂರವಾಣಿಯಲ್ಲಿ ಸಂಪರ್ಕಿಸಬಹುದು.


-ನಾಗರಾಜ ಮತ್ತೀಗಾರ
ಸ್ನೇಹಿತ ಮತ್ತೀಗಾರರಿಗೆ ಹೃತ್ಪೂರ್ವಕ ವಂದನೆಗಳು.....

ಸೋಮವಾರ, ಅಕ್ಟೋಬರ್ 19, 2009

ಸೆಕೆಂಡ್ ಕರೆ, ಡೂ ಕಾಲ್, ಬ್ಲಾಕ್ ಔಟ್ - ಏನಿದು ?


ಇದು ಈ ಹಿಂದೆ ವಿಜಯ ಕರ್ನಾಟಕದಲ್ಲಿ ಪ್ರಕಟಗೊಂಡ ಲೇಖನ. ಈಗ ನೀವೂ ಓದಿ.......

ಟೆಲಿಕಾಂ ರೆಗ್ಯುಲೇಟರಿ ಆಧಾರದ ಆಥಾರಿಟಿ ಆಫ್ ಇಂಡಿಯಾ- ಟ್ರಾಯ್‌ನಲ್ಲಿ ನೊಂದಾಯಿತವಾಗಿರುವ ಗ್ರಾಹಕಪರ ಸಂಘಟನೆಗಳ ಸಂಖ್ಯೆ ಒಟ್ಟು ೪೧. ಅದರಲ್ಲಿ ರಾಜ್ಯದಿಂದ ದಾಖಲಾಗಿರುವುದು ಮೂರು ಎನ್.ಜಿ.ಓ. ಮಾತ್ರ. ಇವುಗಳಲ್ಲಿ ಎರಡು ಬೆಂಗಳೂರಿನಿಂದ ಕೆಲಸ ಮಾಡುವುದಾದರೆ ಅಕ್ಷರಶಃ ಹಳ್ಳಿಮೂಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಾ ರಾಜಧಾನಿ ದೆಹಲಿಗೆ ಬಳಕೆದಾರರ ಕೂಗನ್ನು ಒಯ್ಯುವ ಜವಾಬ್ದಾರಿ ನಿರ್ವಹಿಸುತ್ತಿರುವ ಸಾಗರದ ಬಳಕೆದಾರರ ವೇದಿಕೆ ಇನ್ನೊಂದು. ಇವುಗಳ ಜೊತೆ ಟ್ರಾಯ್ ವರ್ಷಕ್ಕೆ ಎರಡು ಬಾರಿ ಸಭೆ ನಡೆಸುತ್ತದೆ. ಅಂತಹ ಒಂದು ಸಭೆ ಇತ್ತೀಚೆಗೆ ದೆಹಲಿಯಲ್ಲಿ ನಡೆದಿತ್ತು. ಅದರಲ್ಲಿ ಪ್ರಸ್ತಾಪಿಸಲ್ಪಟ್ಟ ಹಲವು ವಿಚಾರಗಳು ದೂರವಾಣಿ ಗ್ರಾಹಕರಿಗೆ ಆಪ್ತವಾಗುವಂತದು.
ದೂರವಾಣಿ ನಿಯಂತ್ರಣ ಪ್ರಾಧಿಕಾರಕ್ಕೆ ಈಗ ಹೊಸ ಅಧ್ಯಕ್ಷರು. ಈ ಹಿಂದೆ ಟಿಡಿಸ್ಯಾಟ್‌ನಲ್ಲಿ ಸೇವೆ ಸಲ್ಲಿಸಿ ಬಂದಿರುವ ಎಸ್.ಕೆ.ಶರ್ಮ ಟ್ರಾಯ್‌ನ ಹೊಸ ಚಿಂತನೆ ಗುರಿಗಳನ್ನು ಪ್ರಸ್ತುತಪಡಿಸುತ್ತಾರೆ. ಡು ನಾಟ್ ಕಾಲ್ ನೊಂದಣಿಯ ಕ್ರಾಂತಿಕಾರಕ ಯೋಜನೆ ಪೂರ್ಣ ಫಲಪ್ರದವಾಗದೇ ಇರುವುದು ಟ್ರಾಯ್‌ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ಘೊಷಿಸಿದ ಹೊಸ ಯೋಜನೆ ‘ಡು ಕಾಲ್ ರಿಜಿಸ್ಟ್ರಿ’
ವಾಸ್ತವವಾಗಿ ಟ್ರಾಯ್‌ಗೆ ಡು ನಾಟ್ ಕಾಲ್ ವ್ಯವಸ್ಥೆ ಜಾರಿಯ ಬಗ್ಗೆ ಪೂರ್ಣ ಪ್ರಮಾಣದ ಒಪ್ಪಿಗೆ ಇರಲಿಲ್ಲ. ಅದರ ಗ್ರಾಹಕ ವ್ಯವಹಾರಗಳ ವಿಭಾಗದ ಮ್ಯಾಥ್ಯೂ ಫಾಲಮಟ್ಟಮ್, ‘ಈ ನೊಂದಣಿ ಮಾಡಿಸಿಕೊಂಡು ಕಾಲ್‌ಸೆಂಟರ್‌ನಲ್ಲಿ ಕೆಲಸ ಮಾಡುವ ನಮ್ಮ ದೇಶದ ಯುವಕರ ಹೊಟ್ಟೆಯ ಮೇಲೆ ಕಲ್ಲು ಹಾಕದಿರಿ’ ಎಂದು ಅಭಿಪ್ರಾಯ ಪಟ್ಟಿರುವುದು ಗಮನಾರ್ಹ. ಅದೆಷ್ಟೇ ಕಠಿಣ ಕಾನೂನು ರೂಪಿಸಿದರೂ ಅದರ ಕಬಂಧ ಬಾಹುಗಳಿಂದ ಟೆಲಿಮಾರ್ಕೆಟಿಂಗ್ ಕಂಪನಿಗಳು ನುಸುಳಿ ತಪ್ಪಿಸಿಕೊಳ್ಳುತ್ತಿರುವುದು ಹಾಗೂ ಒಂದು ವ್ಯಾಪಾರಿ ಮಾಧ್ಯಮಕ್ಕೆ ಧಕ್ಕೆಯುಂಟಾಗುವ ಹಿನ್ನೆಲೆಯಲ್ಲಿ ಈ ವ್ಯವಸ್ಥೆಯನ್ನು ಪುನರ್ರ‍ೂಪಿಸಲು ಟ್ರಾಯ್ ನಿರ್ಧರಿಸಿದೆ.
ಹೇಳಿ ಕೇಳಿ ಟೆಲಿಮಾರ್ಕೆಟಿಂಗ್ ಪ್ರಭಾವಯುತ ಸಂಪರ್ಕ ಮಾಧ್ಯಮ. ಈ ಜಾಹಿರಾತು ಯುಗದಲ್ಲಿ ಅದಕ್ಕೆ ಸಂಪೂರ್ಣ ನಿಷೇಧ ಹೇರುವುದು ಸಾಧ್ಯವೇ ಇಲ್ಲ. ಡು ನಾಟ್ ಕಾಲ್ ವ್ಯವಸ್ಥೆಯಿಂದ ಮೊಬೈಲ್ ಸೇವಾದಾತರಿಗೂ ನಷ್ಟ. ಅವರಿಗೆ ಕರೆಗಳಿಂದ ಎಸ್.ಎಂ.ಎಸ್.ನಿಂದ ಹುಟ್ಟುತ್ತಿದ್ದ ಆದಾಯಕ್ಕೆ ಸಂಚಕಾರವಾದಂತೆ. ಪತ್ರಿಕೆಗಳೊಂದಿಗೆ ಬರುವ ‘ವರ್ಗೀಕೃತ ಜಾಹಿರಾತು’ಗಳ ಕ್ಲಾಸಿಫೈಡ್ ಪುರವಣಿಯನ್ನು ಯಾರೂ ಓದುವುದಿಲ್ಲ! ಆದರೆ ಬಾಡಿಗೆ ಮನೆಯ ಅಗತ್ಯಬಿದ್ದಾಗ, ಉದ್ಯೋಗಾಕಾಂಕ್ಷಿಯಾದಾಗ ಆ ಪುಟಗಳೇ ಪರಮಾಪ್ತವಾಗುತ್ತವೆ. ಸಾರಾಂಶ ಇಷ್ಟೇ, ಅಗತ್ಯತೆಯ ಆಧಾರದ ಮೇಲೆ ಇಷ್ಟಾನಿಷ್ಟಗಳು ನಿಂತಿರುತ್ತವೆ.
ಇದು ದೂರವಾಣಿಯ ಟೆಲಿಮಾರ್ಕೆಟಿಂಗ್ ಕರೆಗಳಿಗೂ ಅನ್ವಯಿಸುತ್ತದೆ. ಡು ನಾಟ್ ಕಾಲ್‌ನಲ್ಲಿ ನೋಂದಾಯಿಸಿಕೊಂಡ ಚಂದಾದಾರರಿಗೆ ಪೂರಾ ಪೂರಾ ಜಾಹಿರಾತು ಕರೆಗಳು ನಿಂತುಹೋದರೆ ಆ ಗ್ರಾಹಕರಿಗೂ ನಷ್ಟ. ಅವರಿಗೆ ಬೇಕಾದ, ಅಗತ್ಯವಾದ ‘ವರ್ಗೀಕೃತ ಜಾಹಿರಾತು’ ಬೇಕೆಂದರೂ ಸಿಗದು. ಅಂದರೆ ಎಲ್ಲ ಕೆಲಸಗಳಿಂದಲೂ ಡಿ.ಎನ್.ಸಿ ವ್ಯವಸ್ಥೆ ಪೂರಕವಲ್ಲ. ಹಾಗೆಂದು ಯೋಚಿಸಿರುವ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ‘ ಡು ಕಾಲ್’ ನೊಂದಣಿಯ ವ್ಯವಸ್ಥೆ ಜಾರಿಗೆ ಸನ್ನದ್ಧವಾಗಿದೆ.
ಏನಿದು ಡು ಕಾಲ್ ?
ಈ ದಾಖಲಾತಿ ವ್ಯವಸ್ಥೆಯಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರ ಇನ್ನೂ ಮುಂದೆ ಟೆಲಿಮಾರ್ಕೆಟಿಂಗ್ ಕರೆಗಳು ಬರುತ್ತವೆ. ಈ ವ್ಯವಸ್ಥೆಯಲ್ಲಿ ದೂರವಾಣಿ ಗ್ರಾಹಕ ತನ್ನ ಆಸಕ್ತಿಯ ಕ್ಷೇತ್ರಗಳನ್ನು ದಾಖಲಿಸಬೇಕು. ಇದರಿಂದ ಆ ವಿಭಾಗದ ಜಾಹಿರಾತು ಕರೆಗಳು ಮಾತ್ರ ಬರುತ್ತವೆ. ಗ್ರಾಹಕನಿಗೆ ದಿನದ ಯಾವ ವೇಳೆಯಲ್ಲಿ ಜಾಹಿರಾತು ಕೇಳಲು ಸಮಯವಿದೆ ಎನ್ನುವುದನ್ನೂ ಸೂಚಿಸಲು ಅವಕಾಶವಿದೆ. ಅಷ್ಟೇಕೆ, ನಿರ್ದಿಷ್ಟ ಕ್ಷೇತ್ರದ ಜಾಹಿರಾತು ಯಾವ ಅವಧಿಯವರೆಗೆ ಆಲಿಸುವ ಆಸಕ್ತಿಯಿದೆ ಎಂಬುದನ್ನೂ ನಿರ್ದೇಶಿಸಬಹುದು. ಉದಾಹರಣೆಗೆ ಓರ್ವ ಗ್ರಾಹಕನಿಗೆ ಬ್ಯಾಂಕ್‌ಸಾಲದ ಬಗ್ಗೆ ಈ ತಿಂಗಳು ಮಾತ್ರ ಮಾಹಿತಿ ಬೇಕು ಎಂದರೆ ಅದೂ ಸಾಧ್ಯ. ಇದನ್ನು ಟೆಲಿ ಮಾರ್ಕೆಟಿಂಗ್ ಕಂಪನಿಗಳು ಗಮನಿಸಿ ಅನುಸರಿಸುತ್ತವೆ. ಟ್ರಾಯ್ ಬರುವ ದಿನಗಳಲ್ಲಿ ಡು ಕಾಲ್ ವ್ಯವಸ್ಥೆಯನ್ನು ಚಾಲ್ತಿಗೆ ತರುವುದು ಖಚಿತ.
ಟ್ರಾಯ್‌ನ ಅಧಿಕೃತ ವೆಬ್‌ಸೈಟ್ www.trai.gov.inನಲ್ಲಿ ಗ್ರಾಹಕರ ದೂರು ದಾಖಲಿಸಲೆಂದೇ ಒಂದು ಪೋರ್ಟಲ್ ಇದೆ. ದುರಂತವೆಂದರೆ ಈ ಕ್ರಮ ಕೇವಲ ಔಪಚಾರಿಕವಾಗಷ್ಟೇ ಇದೆ ಎಂದು ಆರೋಪಿಸುವಂತಾಗಿದೆ. ಗ್ರಾಹಕರು ಈ ಪೋರ್ಟ್‌ಲ್‌ನಲ್ಲಿ ದೂರು ದಾಖಲಿಸಿದರೆ, ಮಾಹಿತಿ ಕೇಳಿದರೆ ಮಾರುತ್ತರವಾಗಲಿ, ಪರಿಹಾರವಾಗಲೀ ಸಿಕ್ಕುವ ಸಂಭಾವ್ಯತೆ ಇಲ್ಲ. ಇದು ಹಲವರ ಗಮನಕ್ಕೆ ಬಂದಿದೆ. ನಿಜಕ್ಕೂ ಟ್ರಾಯ್ ಇದಕ್ಕೊಂದು ವ್ಯವಸ್ಥಿತ ರೂಪ ಕೊಡುವುದು ಅಪೇಕ್ಷಣೀಯ.ಹಾಗಾದರೆ ಇಲ್ಲಿ ದಾಖಲಾಗುವ ದೂರುಗಳನ್ನು ಟ್ರಾಯ್ ಸ್ವತಃ ಗಮನಿಸುವುದರಿಂದ ದೂರವಾಣಿ ಸೇವಾದಾತರು ಟ್ರಾಯ್ ನಿರ್ದೇಶನ, ನಿಯಮಗಳನ್ನು ಯಾವ ಪರಿಯಲ್ಲಿ ಉಲ್ಲಂಘಿಸುತ್ತಿದ್ದಾರೆ ಎಂಬ ಅರಿವು ದಕ್ಕುತ್ತದೆ. ಹೊಸದಾದ ತಿದ್ದುಪಡಿಗಳನ್ನು ರೂಪಿಸಲು ಸಹಕಾರಿಯಾಗುತ್ತದೆ. ಒಂದರ್ಥದಲ್ಲಿ ಸಮರ್ಪಕ ನಿರ್ವಹಣೆ ತೋರಿದರೆ ಈ ಪೋರ್ಟಲ್ ಟ್ರಾಯ್‌ಗೆ ಅತ್ಯುತ್ತಮ. ‘ಫೀಡ್ ಬ್ಯಾಕ್’ ಸಾಧನವೇ ಆಗಬಲ್ಲದು. ಮುಖ್ಯವಾಗಿ ಇದು ಸಾಮಾನ್ಯ ಬಳಕೆದಾರೊಂದಿಗೆ ಟ್ರಾಯ್ ಹೊಂದಿರುವ ಏಕೈಕ ಸಂಪರ್ಕ ಮಾಧ್ಯಮ .ಇನ್ನಾದರೂ ಇದನ್ನು ಗಂಭೀರವಾಗಿ ಪರಿಗಣಿಸುವ ಕೆಲಸ ಆಗಬೇಕು.
ಈ ಮಧ್ಯೆ ಟ್ರಾಯ್ ಅಧ್ಯಕ್ಷ ಶರ್ಮರ ತಲೆಯಲ್ಲಿ ಹೊಸದೊಂದು ವಿಚಾರವೇ ಸುಳಿದಾಡುತ್ತಿದೆ. ಬರುವ ದಿನಗಳಲ್ಲಿ ನೊಂದಾಯಿತ ಗ್ರಾಹಕ ಸಂಘಟನೆಗಳಿಗೆಂದೇ ಒಂದು ಪ್ರತ್ಯೇಕ ವಿಭಾಗವನ್ನು ತನ್ನ ವೆಬ್‌ಸೈಟ್‌ನಲ್ಲಿ ಆರಂಭಿಸಲಿದೆ. ಇದು ಟ್ರಾಯ್‌ನೊಂದಿಗೆ ಈ ಸಂಘಟನೆಗಳಿಗೆ ನೇರ ಸಂಪರ್ಕ ಮಾಧ್ಯಮ. ಸಂಘಟನೆಗಳಿಗೆ ಪ್ರತ್ಯೇಕ ಪಾಸ್‌ವರ್ಡ್‌ಗಳನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ಬೇರೆಯವರಿಗೆ ಪ್ರವೇಶವಿಲ್ಲ. ವಾಸ್ತವವಾಗಿ ತಳ ಮಟ್ಟದ ದೂರವಾಣಿ ಚಂದಾದಾರರ ಸಮಸ್ಯೆಗಳ ಅರಿವಿರುವ ಬಳಕೆದಾರರ ವೇದಿಕೆಗಳಿಗೆ ಈ ಪೋರ್ಟಲ್ ಹೆಚ್ಚಿನ ಅನುಕೂಲ ಒದಗಿಸುತ್ತದೆ. ಪ್ರತಿ ಸಂಘಟನೆಗಳಿಂದ ಜಿಲ್ಲಾ ಮಟ್ಟದ ದೂರು ದಾಖಲಾತಿ ಕೇಂದ್ರಗಳನ್ನು ರೂಪಿಸಲೂ ಟ್ರಾಯ್ ಯೋಚಿಸಿದೆ. ಇದರಿಂದ ಪ್ರಾದೇಶಿಕ ಭಾಷೆಯ ಚಂದಾದಾರರಿಗೆ ಹೆಚ್ಚಿನ ಅನುಕೂಲವಾದೀತು.
ಇನ್ನೆಷ್ಟು ದಿನ ಬ್ಲಾಕ್‌ಔಟ್?
ಮೊಬೈಲ್ ಕಂಪನಿಗಳಿಗೆ ಟ್ರಾಯ್ ಒದಗಿಸಿರುವ ಒಂದು ವಿಶೇಷ ರಿಯಾಯ್ತಿಯೆಂದರೆ ಬ್ಲಾಕ್‌ಔಟ್ ಡೇ ಸೌಲಭ್ಯ. ಈ ಪ್ರಕಾರ ವರ್ಷದ ಗರಿಷ್ಠ ಐದು ದಿನಗಳಲ್ಲಿ ಮೊಬೈಲ್ ಸೇವಾದಾತರು ತಾವು ಕೊಡುತ್ತಿರುವ ಉಚಿತ ಅಥವಾ ರಿಯಾಯ್ತಿಯ ಎಸ್‌ಎಂಎಸ್‌ನ ಸೇವೆಯನ್ನು ರದ್ದುಗೊಳಿಸಬಹುದು. ನಿಜಕ್ಕಾದರೆ ಟ್ರಾಯ್ ಈ ರಿಯಾಯತಿಗೆ ಒಂದು ಸಮಯ ಮಿತಿಯನ್ನು ನಿಗದಿಪಡಿಸಬೇಕಾಗಿತ್ತು. ಒಂದು ಅಥವಾ ಎರಡು ವರ್ಷಗಳೊಳಗೆ ಈ ರಿಯಾಯತಿಯನ್ನು ಹಿಂಪಡೆಯುವ ಷರತ್ತು ನಿಗದಿಪಡಿಸಬೇಕಿತ್ತು. ಈವರೆಗೆ ಟ್ರಾಯ್ ಅವಧಿಯನ್ನು ನಿಗದಿಪಡಿಸಿಲ್ಲ. ನಿರ್ದಿಷ್ಟ ಕಾಲದ ಅಂತರದಲ್ಲಿ ಮೊಬೈಲ್ ಸೇವಾದಾತರು ತಮ್ಮ ತಾಂತ್ರಿಕತೆಯನ್ನು ಉನ್ನತೀಕರಿಸಿ ತನ್ನೆಲ್ಲ ಚಂದಾದಾರರು ಒಮ್ಮೆಗೆ ಎಸ್‌ಎಂಎಸ್ ಮಾಡಿದರೂ ಗುಣಮಟ್ಟ ಕುಸಿಯದಂತೆ ನೋಡಿಕೊಳ್ಳುವ ಹಂತಕ್ಕೆ ಬರಬೇಕಿತ್ತು. ಈ ಬ್ಲಾಕ್‌ಔಟ್ ನಿಯಮದಿಂದಾಗಿ ಎಸ್‌ಎಂಎಸ್ ಪ್ಯಾಕೇಜ್ ಅಳವಡಿಸಿಕೊಂಡು ಹೆಚ್ಚುವರಿ ಶುಲ್ಕ ಪಾವತಿಸಿದ ಗ್ರಾಹಕರಿಗೆ ನಷ್ಟವಾಗುವುದು ವಿಪರ್ಯಾಸ. ದೃಷ್ಟಾಂತ ಬೇಕೆಂದರೆ ಮುಂದೆ ಓದಿ. ವಡಾಫೋನಿನ ಮಣಿಪಾಲ್ ಪ್ಲಾನಿನಲ್ಲಿ ದಿನಕ್ಕೆ ಒಂದು ರೂಪಾಯಿ ಬಾಡಿಗೆ. ಆ ದಿನಕ್ಕೆ ೧೦೦ ಎಸ್‌ಎಂಎಸ್ ಉಚಿತ! ವರ್ಷದ ೩೬೦ ದಿನವೂ ಬಾಡಿಗೆ ತೆರುವ ಗ್ರಾಹಕ ಹೊಸ ವರ್ಷ ದೀಪಾವಳಿ, ವ್ಯಾಲಂಟೈನ್ಸ್ ಡೇಗಳಂತ ಸಂದರ್ಭದಲ್ಲಿ ಮಾತ್ರ ದುಬಾರಿ ಶುಲ್ಕದ ಎಸ್‌ಎಂಎಸ್ ಮಾಡಬೇಕು. ಉಚಿತ ಇಲ್ಲ. ಕಾರಣ ಬ್ಲಾಕ್‌ಔಟ್ ಡೇ! ನ್ಯಾಯವೇ?
ಈ ಹಿನ್ನೆಲೆಯಲ್ಲಿ ಟ್ರಾಯ್ ಈ ನಿಮಯವನ್ನು ಪುನರ್ವಿಮರ್ಶಿಸಬೇಕು ಹಾಗೂ ತಿದ್ದುಪಡಿಗಳನ್ನು ಅಳವಡಿಸಬೇಕೆಂದು ದೆಹಲಿ ಸಭೆಯಲ್ಲಿ ಒತ್ತಾಯಿಸಲಾಗಿದೆ. ತಕ್ಷಣಕ್ಕೆ ನಿಯಮದ ರದ್ದು ಸಾಧ್ಯವಿಲ್ಲವೆಂದಾದರೆ ೨೦೧೦ರಿಂದ ಇದಕ್ಕೆ ಕೆಲವು ಷರತ್ತುಗಳನ್ನು ವಿಧಿಸಲು ಟ್ರಾಯ್‌ಗೆ ಸೂಚಿಸಲಾಗಿದೆ.
ಅವುಗಳೆಂದರೆ (೧) ಗರಿಷ್ಠ ಐದು ಬ್ಲಾಕ್‌ಔಟ್ ದಿನಗಳಲ್ಲಿ ಸತತ ಎರಡು ದಿನ ಬ್ಲಾಕ್‌ಔಟ್ ಮಾಡದಿರಲು ನಿರ್ಬಂಧ. ಪ್ರಸ್ತುತ ಡಿಸೆಂಬರ್ ೩೧ ಹಾಗೂ ಜನವರಿ ಒಂದು, ಫೆಬ್ರುವರಿ ೧೩, ೧೪ರ ದಿನ ಬ್ಲಾಕ್‌ಔಟ್ ಮಾಡುವ ಕ್ರಮ ಜಾರಿಯಲ್ಲಿದೆ.
(೨) ತಮ್ಮ ಪ್ಲಾನ್‌ನಲ್ಲಿಯೇ ಉಚಿತ ಯಾ ರಿಯಾಯ್ತಿ ಎಸ್‌ಎಂಎಸ್ ಪಡೆದವರಿಗೆ ಈ ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಾದರೂ ಉಚಿತ, ರಿಯಾಯ್ತಿ ಎಸ್‌ಎಂಎಸ್ ಕೊಡಬೇಕು. ಉದಾಹರಣೆಗೆ ದೈನಿಕ ೧೦೦ ಎಸ್‌ಎಂಎಸ್ ಇರುವವರಿಗೆ ಆ ದಿನದ ಮಟ್ಟಿಗೆ ಉಚಿತ ೨೦, ಶೇ.೨೦ರ ದರದಲ್ಲಿ.
(೩) ಬ್ಲಾಕ್‌ಔಟ್ ದಿನವನ್ನು ಅದರ ಹಿಂದಿನ ದಿನ ಎಲ್ಲಾ ಗ್ರಾಹಕರಿಗೆ ತಿಳಿಸಿ ಸೇವಾದಾತ ಎಸ್‌ಎಂಎಸ್ ಸೂಚನೆ ಒದಗಿಸಬೇಕು. ಪ್ರಸ್ತುತ ಪೂರ್ವ ಸೂಚನೆ ನೀಡಬೇಕೆಂಬ ನಿಯಮವಿದ್ದರೂ ಪಾಲನೆಯಾಗುತ್ತಿಲ್ಲ.
ಸೆಕೆಂಡ್ ಮಾತು!
ಈ ಹಿಂದೆ ಜೂನ್‌ನಲ್ಲಿ ಮೈಸೂರಿನಲ್ಲಿ ದಕ್ಷಿಣ ಭಾರತದ ಗ್ರಾಹಕ ಸಂಘಟನೆಗಳ ತರಬೇತಿ ಕಾರ್ಯಾಗಾರವನ್ನು ಟ್ರಾಯ್‌ನಿಂದ ಹಮ್ಮಿಕೊಳ್ಳಲಾಗಿತ್ತು. ಕಾರ‍್ಯಾಗಾರದಲ್ಲಿ ಕರೆಯ ಪಲ್ಸ್ ದರವನ್ನು ಸೆಕೆಂಡ್‌ಗಳಲ್ಲಿ ಜಾರಿಗೊಳಿಸಲು ಟ್ರಾಯ್‌ನ್ನು ಒತ್ತಾಯಿಲಾಗಿತ್ತು. ವಿಪರೀತ ಎನ್ನಿಸುವಷ್ಟು ಕಾಲ್ ಡ್ರಾಪ್ ಪ್ರಮಾಣವಿರುವುದರಿಂದ ಟ್ರಾಯ್ ಕೂಡ ತಾತ್ವಿಕವಾಗಿ ಒಪ್ಪಿತ್ತು. ಜೊತೆಗೆ ಅಡೆತಡೆಗಳನ್ನು ಪಟ್ಟಿ ಮಾಡಿತ್ತು. ಒಂದರ್ಥದಲ್ಲಿ ಅದೂ ಕೂಡ ಸಮರ್ಪಕವಾದುದು. ಟ್ರಾಯ್ ಎಂಬ ಈ ಸ್ವಾಯತ್ತ ಸಂಸ್ಥೆ ಗ್ರಾಹಕರ ಪರವಿರುವ ಪೂರಾಪೂರ ವ್ಯವಸ್ಥೆಯಲ್ಲ. ಅತ್ತ ಗ್ರಾಹಕರಿಗೆ, ಇತ್ತ ಸೇವಾದಾತರಿಗೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳುವ ಮತ್ತು ಅದೇ ಕಾಲದಲ್ಲಿ ಟೆಲಿಕಾಂ ಕ್ಷೇತ್ರದಲ್ಲಿ ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಯಾಗುವಂತಾಗಲೂ ನೋಡಿಕೊಳ್ಳುತ್ತದೆ. ಆ ಲೆಕ್ಕದಲ್ಲಿ ಟ್ರಾಯ್ ಒಮ್ಮೆಗೇ ಒಂದು ತೀರ್ಮಾನಕ್ಕೆ ಬರುವುದಿಲ್ಲ.
ಸ್ವಾರಸ್ಯವೆಂದರೆ, ಟ್ರಾಯ್ ಇನ್ನೂ ಮೀನಾಮೇಷ ಎಣಿಸುತ್ತಿರುವಾಗಲೇ ಟಾಟಾ ಡೊಕೋಮೋ, ಏರ್‌ಸೆಲ್ ಹಾಗೂ ಬಿಎಸ್‌ಎನ್‌ಎಲ್ ಸೆಕೆಂಡ್‌ಗಳ ಪಲ್ಸ್ ದರವನ್ನು ಜಾರಿಗೆ ತಂದಾಗಿತ್ತು! ಈಗ ಟ್ರಾಯ್ ಎಲ್ಲ ಮೊಬೈಲ್ ಸೇವಾದಾತರು ಗ್ರಾಹಕರಿಗೆ ಸೆಕೆಂಡ್‌ಗಳ ಪಲ್ಸ್ ದರದ ನಿಯಮವನ್ನು ಜಾರಿಗೆ ತರಲು ಸಿದ್ಧತೆಗಳನ್ನು ನಡೆಸಿದೆ. ಟ್ರಾಯ್ ನೇರವಾಗಿ ಸೆಕೆಂಡ್‌ಗಳ ಪಲ್ಸ್ ದರದ ಮಾದರಿಗೂ ಸಿದ್ಧವಿರಲಿಲ್ಲ. ಅದರ ಪ್ರಕಾರ, ಪ್ರತಿ ಕರೆ ‘ಏರ್ಪಡಿಸಲು’ ಕೆಲ ಖರ್ಚು ಇರುವುದರಿಂದ ಒಂದು ಕನಿಷ್ಟ ಶುಲ್ಕ ನಿಗದಿಪಡಿಸಿ ನಂತರದ ಪ್ರತಿ ಸೆಕೆಂಡ್‌ಗೆ ದರ ನಿಗದಿಪಡಿಸುವ ಯೋಚನೆಯಲ್ಲಿತ್ತು. ಒಂದು ರೀತಿಯಲ್ಲಿ ಆಟೋ ಮೀಟರ್ ವ್ಯವಸ್ಥೆಯ ಮಾದರಿಯಲ್ಲಿ. ಮೊಬೈಲ್ ಕಂಪನಿಗಳಿಗೆ ಗೊತ್ತು, ಈ ಭಾರತೀಯರು ಮಾತಿನ ಮಲ್ಲರು. ಸೆಕೆಂಡ್‌ಗಳು ನಿಮಿಷಗಳಾಗೇ ತೀರುತ್ತವೆ! ನಿಮಿಷಕ್ಕೆ ೬೦ ಪೈಸೆಯಾಗುವ ಸೆಕೆಂಡ್ ಪಲ್ಸ್ ದರ ಮೊಬೈಲ್ ಸೇವಾದಾತರು ಕರೆ ದರವನ್ನು ೩೦ - ೫೦ ಪೈಸೆಯಿಂದ ೬೦ ಪೈಸೆಗೆ ಹೆಚ್ಚಿಸಿದಂತೆಯೂ ಆದೀತು!! ಹಾಗಾಗಿ ಅವು ಮೊದಲ ಸೆಕೆಂಡ್‌ನಿಂದಲೇ ಪಲ್ಸ್ ದರ ನಿಗದಿಪಡಿಸಿವೆ. ಕನಿಷ್ಟ ಶುಲ್ಕದ ಗೋಜಿಗೆ ಹೋಗಿಲ್ಲ. ಈಗಾಗಲೇ ಟಾಟಾ ಡೊಕೋಮೋ ತನ್ನ ಯೋಜನೆಗಳು ಆರು ತಿಂಗಳ ನಂತರವೂ ಮುಂದುವರೆಯುವುದನ್ನು ಸ್ಪಷ್ಟಪಡಿಸಿದೆ. ಇದೀಗ ಏರ್‌ಸೆಲ್ ಸೆಕೆಂಡ್‌ಗಳ ಪಲ್ಸ್ ದರಕ್ಕೆ ಹೆಜ್ಜೆ ಹಾಕಿದೆ. ಇದು ಖುದ್ದು ಟ್ರಾಯ್ ಉಗುಳು ನುಂಗಬೇಕಾದ ಪರಿಸ್ಥಿತಿ!
ಸೆಕೆಂಡ್‌ಗಳ ಪಲ್ಸ್ ದರದ ಕೂಗಿಗೆ ಇನ್ನೊಂದು ಕಾರಣವಿದೆ. ಇಂದು ನಾವು ಖರೀದಿಸುವುದು ಟಾಕ್‌ಟೈಮ್. ನಿಮಿಷದ ಪಲ್ಸ್‌ನಲ್ಲಿ ೧೦ ಸೆಕೆಂಡ್ ಮಾತನಾಡಿದರೂ ಟಾಕ್‌ಟೈಮ್‌ನಲ್ಲಿ ಉಳಿದ ೯೦ ಪೈಸೆಯ ನಷ್ಟ. ಅಂದರೆ ಸೇವಾದಾತರಿಗೆ ಸೇವೆ ಒದಗಿಸದೆಯೂ ಅದೆಷ್ಟೋ ಕೋಟಿ ರೂಪಾಯಿ ಖಜಾನೆಗೆ ಬಂದಂತೆ. ಈ ಹಿನ್ನೆಲೆಯಲ್ಲಿಯೂ ಸೆಕೆಂಡ್ ಪಲ್ಸ್‌ನ್ನು ಗ್ರಾಹಕ ಸಂಘಟನೆಗಳು ಒತ್ತಾಯಿಸಿದ್ದವು.
ಇಂದು ಮೊಬೈಲ್ ನಂತರದಲ್ಲಿ ತೀವ್ರ ಬೆಳವಣಿಗೆ ಕಾಣುತ್ತಿರುವುದು ಡೈರೆಕ್ಟ್ ಟು ಹೋಂ ಸರ್ವೀಸ್. ಆದರೆ ಟ್ರಾಯ್‌ನ ನಿಯಮ, ನಿರ್ದೇಶನಗಳು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಅನುಸರಿಸಲಾಗಿರುವುದೂ ಇಲ್ಲಿಯೇ. ನಿಯಮ ಪ್ರಕಾರ ಅವು ಉಚಿತ ಗ್ರಾಹಕ ದೂರು ಸಂಖ್ಯೆ ಒದಗಿಸಬೇಕು. ಇವತ್ತಿಗೂ ಕೇವಲ ಎರಡು ಸೇವಾದಾತರು ಮಾತ್ರ ಉಚಿತ ಗ್ರಾಹಕ ಕರೆ ನಂಬರ್ ಒದಗಿಸಿದ್ದು, ಅವೆಂದರೆ ರಿಲಯನ್ಸ್ ಹಾಗೂ ಏರ್‌ಟೆಲ್. ಉಳಿದ ನಾಲ್ಕು ಸೇವಾದಾತರು ಈವರೆಗೆ ಉಚಿತ ಕರೆಸಂಖ್ಯೆಯನ್ನೇ ಒದಗಿಸಿಲ್ಲ. ಇನ್ನು ಗ್ರಾಹಕ ದೂರು ಪರಿಹಾರ ಕ್ರಮಗಳಾದ ನೋಡಲ್ ಆಫೀಸರ್, ಅಪಲೇಟ್ ಅಥಾರಿಟಿಗಳೆಲ್ಲ ದೂರದ ಮಾತು. ಟ್ರಾಯ್ ಇತ್ತ ಗಮನ ಹರಿಸದಿದ್ದರೆ ನಡೆಯುತ್ತಿರುವ ಹಗಲುದರೋಡೆ ಮಿತಿಮೀರೀತು ಎಂದು ಟ್ರಾಯ್‌ನ ದೆಹಲಿ ಸಭೆಯಲ್ಲಿ ಪಾಲ್ಗೊಂಡ ಸಾಗರದ ಬಳಕೆದಾರರ ವೇದಿಕೆ ಕಳವಳ ವ್ಯಕ್ತಪಡಿಸಿತು.
ಒಂದಂತೂ ನಿಜ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಸುಮ್ಮಸುಮ್ಮನೆ ನಿಯಮಗಳನ್ನು ಜಾರಿಗೆ ತರುವುದಿಲ್ಲ. ಪ್ರತಿ ನಿಯಮ ಜಾರಿಗೆ ಮುನ್ನ ಎಲ್ಲ ಸಂಬಂಧಪಟ್ಟ ವರ್ಗದ ಅಭಿಪ್ರಾಯ ಪಡೆದೇ ಮುಂದಿನ ಹೆಜ್ಜೆ ರೂಪಿಸುತ್ತದೆ. ಟೀಕೆಗಳ ಹೊರತಾಗಿಯೂ ಟ್ರಾಯ್ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಗಾಳಿ ತಂದಿರುವುದು ಎದ್ದು ಕಾಣುತ್ತದೆ.
-ಮಾವೆಂಸ


ಗುರುವಾರ, ಅಕ್ಟೋಬರ್ 8, 2009

ತೀರ್ಪು ಕೊಡುವವರು ಬೇಕಾಗಿದ್ದಾರೆ!

======
ಬಿಸಿಸಿಐ ಸಂಸ್ಥೆ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ನಲ್ಲಿ ವಿಶೇಷ ಪ್ರಭಾವ ಹೊಂದಿರುವ ದಿನಗಳಿವು. ಇಂತಹ ವೇಳೆ ಬಿಸಿಸಿಐನ ಅತಿ ಹಿರಿಯ ಅಧಿಕಾರಿಯೋರ್ವರ ಮನೆಯಲ್ಲಿ ಅವರ ಪುತ್ರನ ಮದುವೆ. ಖುದ್ದು ಬಿಸಿಸಿಐ ಕೂಡ ಆ ದಿನದ ತನ್ನ ಕಾರ್ಯಕಾರಿ ಸಭೆಯನ್ನು ಮದುವೆ ನಡೆವ ನಗರಕ್ಕೆ ಸ್ಥಳಾಂತರಿಸಲಾಗಿತ್ತು! ಅವತ್ತು ಮದುವೆಯ ಆರತಕ್ಷತೆಯಲ್ಲಿ ಭಾರತದ ಪ್ರಥಮ ದರ್ಜೆ ಅಂಪೈರ್‌ಗಳಲ್ಲಿ ಬಹುಸಂಖ್ಯಾತರು ಹಾಜರಿದ್ದರು. ಆಹ್ವಾನ ಪತ್ರಿಕೆ ಇಲ್ಲದ ಅಂಪೈರ್‌ಗಳೂ ಮುದ್ದಾಂ ಬಂದಿದ್ದರು ಎಂದರೆ?
ಆ ದಿನದ ಅಂಪೈರ್‌ಗಳ ಉಪಸ್ಥಿತಿ ನೋಡಿದವರು ಒಂದು ಮಾತು ಹೇಳಿದ್ದುಂಟು, ‘ಅಂಪೈರ್ ಸಮಾವೇಶ ನಡೆದಾಗಲೂ ಇಷ್ಟು ಮಂದಿ ಭಾರತೀಯ ಅಂಪೈರ್‌ಗಳು ಒಂದೆಡೆ ಸೇರಿದ್ದಿಲ್ಲ!’ ಹೆಸರು ಪ್ರಕಟಿಸಲಿಚ್ಛಿಸದ ಅಂಪೈರ್‌ರೋರ್ವರು ಹೇಳುವುದೇ ಬೇರೆ, "ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಟಾಪ್ ಬಿಸಿಸಿಐ ಅಧಿಕಾರಿಗಳಿಗೆ ಪರಿಚಿತರಾಗುವುದರಿಂದ ಕ್ಯಾರಿಯರ್‌ಗೆ ಅನುಕೂಲವಾಗುತ್ತದೆ. ಪಂದ್ಯಗಳಿಗೆ ಅವರು ವಶೀಲಿ ಮಾಡಿ ಪೋಸ್ಟಿಂಗ್ ಮಾಡುತ್ತಾರೆ ಗೊತ್ತೇ?"
ನಿಜ, ಅಂಪೈರ್‌ಗಳದು ಕೃತಜ್ಞತೆರಹಿತ ಉದ್ಯೋಗ. ಹನ್ನೊಂದು ಅತ್ಯುತ್ತಮ ನಿರ್ಣಯಗಳಿಗೆ ಸಲ್ಲಬೇಕಾದ ಶ್ಲಾಘನೆಯು ಒಂದೇ ಒಂದು ಪುಟ್ಟ ತಪ್ಪಿಗೆ ಕೊಚ್ಚಿ ಹೋಗಿಬಿಡುತ್ತದೆ. ಪಂದ್ಯದುದ್ದಕ್ಕೂ ಬಿಸಿಲಿನಲ್ಲಿ ಬಸವಳಿದು, ಏಕಾಗ್ರತೆ ಕಾಯ್ದುಕೊಂಡು ಪಂದ್ಯವನ್ನು ನಿರ್ವಹಿಸುವ ಅವರ ತಾಕತ್ತನ್ನು ಗಮನಿಸುವವರು ಕಡಿಮೆ. ನಿಜಕ್ಕಾದರೆ, ಆಟಗಾರರಿಗೆ ಇರುವಷ್ಟೇ ಅಥವಾ ಅದಕ್ಕಿಂತ ಹೆಚ್ಚಿನ ಫಿಟ್‌ನೆಸ್ ಅಂಪೈರ್‌ಗಳಿಗಿರಬೇಕು. ಅಲ್ವೆ ಮತ್ತೇ, ದಿನದ ೯೦-೧೦೦ ಓವರ್‌ಗಳುದ್ದಕ್ಕೂ ನಿಂತುಕೊಂಡೇ ಇರಬೇಕಾದ ಅಂಪೈರಿಂಗ್‌ನ ಆ ಒಂದು ಜವಾಬ್ದಾರಿಗೇ ಎಷ್ಟು ಸಾಮರ್ಥ್ಯವಿದ್ದರೂ ಬೇಕು.
ಆದರೆ ಭಾರತೀಯ ಅಂಪೈರ್‌ಗಳ ದುರಂತವೇ ಬೇರೆ. ಅವರು ತಮ್ಮ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ, ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವ ಕುರಿತು ವರದಿಗಳಿಲ್ಲ. ಅಂಪೈರಿಂಗ್‌ಗೆ ಬೇಕಾದ ಚಾಕಚಕ್ಯತೆಯನ್ನು ಮೈಗೂಡಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಭಾರತೀಯ ಅಂಪೈರ್‌ಗಳ ಗುಣಮಟ್ಟ ವಿಪರೀತವೆನ್ನಿಸುವಷ್ಟು ಕುಸಿದಿದೆ. ಇವತ್ತು ಐಸಿಸಿ ಎಲೈಟ್ ಪ್ಯಾನೆಲ್‌ನಲ್ಲಿ ಭಾರತದ ಒಬ್ಬಾನೊಬ್ಬ ಅಂಪೈರ್ ಕೂಡ ಇಲ್ಲ. ಅವಮಾನ!
ಏನಿದು ಎಲೈಟ್ ಪ್ಯಾನೆಲ್?
ಐಸಿಸಿಯ ಟೆಸ್ಟ್ ಮಾನ್ಯ ರಾಷ್ಟ್ರಗಳು ತಮ್ಮ ದೇಶದ ಅತ್ಯುತ್ತಮ ಅಂಪೈರ್‌ರ ಹೆಸರನ್ನು ಶೀಫಾರಸು ಮಾಡುತ್ತವೆ. ಆ ಅಂಪೈರ್‌ಗಳ ಹಿಂದಿನ ದಾಖಲೆ, ನಾಯಕ-ರೆಫ್ರಿಯರ ವರದಿಗಳನ್ನು ಪರಿಶೀಲಿಸಿ ಅವರನ್ನು ಒಂದು ವಿಶಿಷ್ಟ ಗುಂಪಿನೊಳಗೆ ಸೇರಿಸಿಕೊಳ್ಳಲು ಐಸಿಸಿ ತೀರ್ಮಾನಿಸುತ್ತದೆ. ಅದೇ ಎಮಿರೇಟ್ಸ್ ಎಲೈಟ್ ಪ್ಯಾನೆಲ್. ಈ ಅಂಪೈರ್‌ಗಳು ಮಾತ್ರ ಟೆಸ್ಟ್ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಲು ಅರ್ಹರಾಗಿರುತ್ತಾರೆ. ಪ್ರಸ್ತುತ ಬಿಲ್ಲಿ ಬೌಡೆನ್, ಸ್ಟೀವ್ ಬಕ್ನರ್, ಅಲೀಂ ಧರ್, ಡರೆಲ್ ಹೇರ್, ಡರೆಲ್ ಹಾರ್ಪರ್, ರುಡಿ ಕುರ್ಟಿಜೆನ್, ಸೈಮನ್ ಟಾಫೆಲ್ ಮಾತ್ರ ಈಗ ಈ ಎಲೈಟ್ ಪ್ಯಾನೆಲ್‌ನಲ್ಲಿದ್ದಾರೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಬಿಸಿಸಿಐಗೆ ಈ ಗುಂಪಿಗೆ ಸಮರ್ಥ ಶಿಫಾರಸು ಮಾಡಲೂ ಭಾರತದಲ್ಲೊಬ್ಬ ಅರ್ಹ ಅಂಪೈರ್ ಸಿಕ್ಕಿಲ್ಲ!
೨೦೦೪ರಲ್ಲಿ ಎಸ್.ವೆಂಕಟರಾಘವನ್ ಅಂಪೈರಿಂಗ್ ಹುದ್ದೆಯಿಂದ ನಿವೃತ್ತಿ ಹೊಂದಿದರು, ಅವರು ಎಲೈಟ್ ಗುಂಪಿನಲ್ಲಿದ್ದವರು. ಅಂಪೈರಿಂಗ್‌ನ ಕೊನೆಯ ದಿನಗಳಲ್ಲಿ ವೆಂಕಟ್‌ರ ತೋರುಬೆರಳಿನ ಬಗ್ಗೆ ಸಾಕಷ್ಟು ಅಸಮಾಧಾನ ಕೇಳಿಬಂದಿದ್ದು ಮತ್ತು ಎಲೈಟ್ ಗುಂಪಿನಿಂದ ಕೈಬಿಡುವುದರ ಬದಲು ಐಸಿಸಿ ಗೌರವಯುತವಾಗಿ ನಿವೃತ್ತರಾಗಲು ಸೂಚಿಸಿತ್ತೆನ್ನುವುದು ಬೇರೆಯದೇ ವಿಷಯ. ನಂತರದ ಈ ಐದು ವರ್ಷಗಳಲ್ಲಿ ಎಲೈಟ್ ಗುಂಪಿನಲ್ಲಿ ಭಾರತದ ಪ್ರತಿನಿಧಿಯಿಲ್ಲ. ಜೊತೆಗೆ ದಿನದಿಂದ ದಿನಕ್ಕೆ ದೇಶದೊಳಗಿನ ಅಂಪೈರ್‌ಗಳ ಗುಣಮಟ್ಟ ಕುಸಿಯುತ್ತಲೇ ಹೋಗುತ್ತಿದೆ.
ಬಿಸಿಸಿಐ ಈ ಕುರಿತು ಎಚ್ಚೆತ್ತುಕೊಳ್ಳಲೇಇಲ್ಲ ಎನ್ನುವಂತಿಲ್ಲ. ಜಗ್‌ಮೋಹನ್ ದಾಲ್ಮಿಯಾ ಬಿಸಿಸಿಐನ ಅಧ್ಯಕ್ಷರಾಗಿದ್ದಾಗಲೇ ಒಮ್ಮೆ ರಾಷ್ಟ್ರದ ಐದು ಟಾಪ್ ಅಂಪೈರ್‌ರನ್ನು ಒಳಗೊಂಡ ಎಂಟು ಜನರ ಸಮಿತಿ ಸಭೆಯನ್ನು ಆಯೋಜಿಸಿತ್ತು. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯ ಆವರಣದಲ್ಲಿಯೇ ಅಂಪೈರಿಂಗ್ ಅಕಾಡೆಮಿಯನ್ನೂ ಆರಂಭಿಸಲು ತೀರ್ಮಾನಿಸಲಾಯಿತು. ವಿಪರ್ಯಾಸವೆಂದರೆ, ಸದರಿ ಅಕಾಡೆಮಿಯೂ ನಿರೀಕ್ಷಿತ ಫಲಿತಾಂಶವನ್ನು ನೀಡಿಲ್ಲ. ದುರಂತ, ದುರಂತ.....ಅಂಪೈರ್‌ಗಳು ಈಗಲೂ ಬಿಸಿಸಿಐ ಅಧಿಕಾರಿಗಳ ಮನೆ ಮದುವೆಯ ಆಹ್ವಾನವನ್ನೇ ಆಶಿಸುತ್ತಿದ್ದಾರೆ!
ಆ ಸಮಯದಲ್ಲಿಯೂ ಭಾರತದಲ್ಲಿ ಅಂಪೈರ್‌ಗಳಿಗೆ ಸಂಖ್ಯೆಯಲ್ಲಿ ಕೊರತೆ ಇರಲಿಲ್ಲ. ಐದು ವಲಯಗಳಿಂದ ೧೪೬ ಅಂಪೈರ್‌ಗಳು ಬಿಸಿಸಿಐ ಪಟ್ಟಿಯಲ್ಲಿದ್ದರು. ರಣಜಿ ಪ್ಯಾನೆಲ್‌ನಲ್ಲಿ ೬೯ ಮತ್ತು ಇತರ ಸರ್ವರ ಗುಂಪಿನಲ್ಲಿ ೭೭ ಜನರಿದ್ದರು. ಎ.ವಿ.ಜಯಪ್ರಕಾಶ್, ಕೆ.ಹರಿಹರನ್, ಬಿ.ವಿ.ಜಮೂಲಾ, ಸುಶಾಂತ್ ನಾಥುರ್, ಆಸ್ವಾನಿಯರಂತ ಅಂಪೈರ್‌ಗಳು ದೇಶದ ಸೇವೆಯಲ್ಲಿದ್ದರು. ಊಹ್ಞೂ, ಅದಕ್ಕಿಂತ ಮುಂದೆ ಹೋಗಲು ಈ ಐದು ವರ್ಷಗಳಲ್ಲಿ ಒಬ್ಬರಿಗೂ ಸಾಧ್ಯವಾಗಿಲ್ಲ.
ಪುಟ್ಟ ಸಮಾಧಾನವೆಂದರೆ, ಐಸಿಸಿಯ ಎಮಿರೇಟ್ಸ್ ಇಂಟರ್‌ನ್ಯಾಷನಲ್ ಪ್ಯಾನೆಲ್‌ನಲ್ಲಿ ಭಾರತದ ಮೂವರು ಸ್ಥಾನ ಪಡೆದಿದ್ದಾರೆ. ಈ ಅಂಪೈರ್‌ಗಳು ಸ್ವದೇಶದ ಏಕದಿನ, ಟಿ೨೦ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಬಹುದು. ಒಂದೊಮ್ಮೆ ಎಲೈಟ್ ಪ್ಯಾನೆಲ್‌ನ ಅಷ್ಟೂ ಅಂಪೈರ್‌ಗಳು ಲಭ್ಯರಿರದಿದ್ದರೆ, ಅನಿವಾರ್ಯತೆ ಬಿದ್ದರೆ ಈ ಅಂಪೈರ್‌ಗಳೂ ಟೆಸ್ಟ್‌ನಲ್ಲಿ ತೀರ್ಪುಗಾರರಾಗಬಹುದು. ನೆನಪಿರಲಿ, ಇಂತಹ ಅವಕಾಶ ಅಪರೂಪದಲ್ಲಿ ಅಪರೂಪ. ಅಷ್ಟಕ್ಕೂ ಇದು ಯಾವ ದೇಶಕ್ಕೂ ಗೌರವ ಕೊಡುವ ವಿಚಾರವೇನಲ್ಲ. ಇರಲಿ, ಪ್ರಸ್ತುತ ಹರಿಹರನ್ ಕೃಷ್ಣನ್, ಎ.ವಿ.ಜಯಪ್ರಕಾಶ್, ಐ.ಶಿವರಾಂ ಭಾರತದ ಇಂಟರ್‌ನ್ಯಾಷನಲ್ ಅಂಪೈರ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿಜಕ್ಕಾದರೆ ಬಿಸಿಸಿಐನ ತಳಮಳ ಐಪಿಎಲ್ ಬಂದಮೇಲೆ ಹೆಚ್ಚಾಗಿದೆ!
ಪ್ರೀಮಿಯರ್ ಅಂಪೈರ್ ಪರಿಪಾಟಲು!
ಕಳೆದ ಎರಡು ವರ್ಷಗಳಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ ೨೦ ಕ್ರಿಕೆಟ್ ಟೂರ್ನಿ ನಡೆಯುತ್ತಿದೆ. ಇದು ಐಸಿಸಿಗೆ ಸಂಬಂಧಪಡದ ಸ್ಪರ್ಧೆ. ಭಾರತದ ಪ್ರಥಮ ದರ್ಜೆ ಕ್ರಿಕೆಟ್ ಕೂಡ ಅಲ್ಲ. ಆದರೆ ಬಿಸಿಸಿಐ ಆಮಿಷಕ್ಕಿಟ್ಟ ಹಣದ ಕಾರಣ ಇಲ್ಲಿ ದೊಡ್ಡ ಸಂಖ್ಯೆಯ ವಿದೇಶಿ ಆಟಗಾರರು ಪಾಲ್ಗೊಳ್ಳುತ್ತಿದ್ದಾರೆ. ಟಿವಿ ಪ್ರಸಾರ, ಕ್ರೀಡಾಂಗಣ, ಆಟಗಾರರುಗಳೆಲ್ಲ ವಿಶ್ವದರ್ಜೆಯಲ್ಲಿ ಇರುವುದರಿಂದ ಭಾರತದ ಹೊರಗೂ ಐಪಿಎಲ್ ಅದ್ಭುತವಾದ ಜನಪ್ರಿಯತೆಯನ್ನು ಪಡೆದಿದೆ. ಪಂದ್ಯಗಳ ವೇಳೆಯಲ್ಲಿ ಅಂಪೈರ್ ಕ್ಯಾಪ್ ಧರಿಸುವವರು ಮಾತ್ರ ಇದೇ ಭಾರತದ ಆಂತರಿಕ ಅಂಪೈರ್‌ಗಳು! ಬಿಸಿಸಿಐನ ತಲೆಬಿಸಿ ವೃದ್ಧಿಸಲು ಇವರು ಕೊಡುವ ತೀರ್ಪುಗಳು ಸಾಕಲ್ಲವೇ!?
ಕಳೆದ ಐಪಿಎಲ್ ವೇಳೆಯಲ್ಲಿಯೂ ಕಳಪೆ ಅಂಪೈರಿಂಗ್ ಪ್ರದರ್ಶನ ಬಟಾಬಯಲಾಗಿತ್ತು. ಒಂದು ಉದಾಹರಣೆ ಕೊಡುವುದಾದರೆ, ಪಂದ್ಯವೊಂದರಲ್ಲಿ ತಾವೇ ಇತ್ತ ಕ್ಯಾಚ್ ತೀರ್ಪಿನ ವಿರುದ್ಧ ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅಸಮಾಧಾನ ತೋರಿದ್ದನ್ನು ನೋಡಿ ಜಿ.ಎ.ಪಾರ್ಥಕುಮಾರ್ ಎಂಬ ಅಂಪೈರ್ ದಡಕ್ಕನೆ ಟಿವಿ ರಿಪ್ಲೆಗೆ ಮೂರನೇ ಅಂಪೈರ್‌ಗೆ ಸಂಜ್ಞೆ ಮಾಡಿಬಿಡುವುದೇ? ಈಗಾಗಲೆ ಬಿಸಿಸಿಐ ಕಾರ್ಯದರ್ಶಿ ನಿರಂಜನ್ ಶಾ ಅಂಪೈರ್‌ರ ಪರೀಕ್ಷಾ ವಿಧಾನವನ್ನು ಬದಲಿಸುವ ಸೂಚನೆ ನೀಡಿದ್ದಾರೆ. ಜಂಟಿ ಕಾರ್ಯದರ್ಶಿ ಎಂಡಿ ಪಾಂಡೋವೆ "ಸರಾಸರಿಗಿಂತ ಕೆಳಗಿನ ಅಂಪೈರ್‌ಗೆ ಇನ್ನುಮುಂದೆ ಸ್ಥಾನವಿಲ್ಲ. ಹೊಸದಾದ, ಯುವ ರಕ್ತವನ್ನು ಅಂಪೈರಿಂಗ್ ಕ್ಷೇತ್ರಕ್ಕೂ ತರುತ್ತೇವೆ. ಈಗಿರುವ ಅಂಪೈರ್‌ಗಳಿಗೆ ಮುಂಬೈನಲ್ಲಿ ಇನ್ನೊಂದು ಪರೀಕ್ಷೆ ನಡೆಸಲಾಗುತ್ತದೆ.ಅವರ ಸ್ಥಾನ ಇಲ್ಲಿನ ಫಲಿತಾಂಶವನ್ನು ಆಧರಿಸುತ್ತದೆ" ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟರಿಂದಲೇ ಅಂಪೈರಿಂಗ್ ಗುಣಮಟ್ಟ ಏರುತ್ತದೆಂಬ ಭ್ರಮೆಯಲ್ಲಿ ಬಿಸಿಸಿಐ ಇದ್ದರೆ ಅದಕ್ಕಿಂತ ಹಾಸ್ಯಾಸ್ಪದ ವಿಚಾರ ಇನ್ನೊಂದಿಲ್ಲ.
ಕುಲಕರ್ಣಿ ಅಧ್ಯಯನ
ಅಂಪೈರಿಂಗ್ ಕ್ಷೇತ್ರದ ಗೌರವಾನ್ವಿತ ವ್ಯಕ್ತಿ ವಿ.ಎಮ್.ಕುಲಕರ್ಣಿಯವರು ಪರಿಸ್ಥಿತಿಯನ್ನು ಸುಧಾರಿಸಲು ಒಂದು ಅಧ್ಯಯನ ವರದಿಯನ್ನೇ ನೀಡಿದ್ದಾರೆ. ಅದರ ಪ್ರಕಾರ, ಭಾರತೀಯ ಅಂಪೈರ್‌ಗಳನ್ನು ಎ ಪ್ಲಸ್, ಎ, ಬಿ ಮತ್ತು ಸಿ ಎಂದು ವರ್ಗೀಕರಿಸಬೇಕು. ಅಂಪೈರ್‌ಗಳ ಪ್ರದರ್ಶನದ ಮಟ್ಟವನ್ನು ಆಧರಿಸಿ ಇವರ ಸ್ಥಾನಮಾನದ ನಿರ್ಧಾರ, ಭಡ್ತಿ-ಹಿಂಭಡ್ತಿಗಳು ನಿಗದಿ ಪಡಿಸುವ ಅಂಶ ಆ ವರದಿಯಲ್ಲಿತ್ತು. ಎರಡು ವರ್ಷಗಳ ನಂತರ ಎ ವರ್ಗದಿಂದ ನಾಲ್ವರನ್ನು ಬಿಗೆ ಹಾಗೂ ಬಿನಿಂದ ಆರು ಜನರನ್ನು ಸಿಗೆ ಸ್ಥಾನಪಲ್ಲಟಗೊಳಿಸುವ ಸಲಹೆ ಅಲ್ಲಿತ್ತು. ಟೆಸ್ಟ, ಏಕದಿನಕ್ಕೆ ಎ ಅಂಪೈರ್, ಬಿ ವರ್ಗ ಪ್ರಥಮ ದರ್ಜೆಗೆ, ಎ ಪ್ಲಸ್ ಎಲೈಟ್ ಗುಂಪಿಗೆ. ಎ ಪ್ಲಸ್, ಎನಲ್ಲಿ ತಲಾ ೧೦, ಬಿನಲ್ಲಿ ೩೦ ಮತ್ತು ಸಿನಲ್ಲಿ ೮೦ ಅಂಪೈರ್‌ಗಳಿಗೆ ಅವಕಾಶ ನೀಡಬೇಕು ಮುಂತಾಗಿ ಕುಲಕರ್ಣಿ ಹಲವು ಗಮನೀಯ ಸಲಹೆಗಳನ್ನು ಪಟ್ಟಿ ಮಾಡಿದ್ದರು. ಕುಲಕರ್ಣಿ ವರದಿಯ ಪ್ರಸಂಗದಲ್ಲಿಯೂ ಬಿಸಿಸಿಐ ಗಂಭೀರವಾಗಿ ವರ್ತಿಸಲೇ ಇಲ್ಲ.
ಅದೃಷ್ಟಕ್ಕೆ, ಐಪಿಎಲ್ ಮುಖಭಂಗಗಳ ನಂತರ ಒಂದಿಷ್ಟು ಚುರುಕುತನ ಕಾಣಿಸಿದಂತಿದೆ. ಬಿಸಿಸಿಐನಲ್ಲಿಯೇ ಅಂಪೈರ್ ಕಮಿಟಿಯೊಂದಿದೆ. ಅದಕ್ಕೆ ಎಸ್.ವೆಂಕಟರಾಘವನ್ ಮುಖ್ಯಸ್ಥರು. ಅದರ ಸಭೆ ಇತ್ತೀಚೆಗೆ ನಡೆದಿದೆ. ಹಲವು ಸ್ವಾಗತಾರ್ಹ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಇನ್ನು ಮುಂದೆ ೩೦ ಉತ್ತಮ ಅಂಪೈರ್‌ಗಳ ಬಿಸಿಸಿಐ ಎಲೈಟ್ ಪ್ಯಾನೆಲ್ ಜಾರಿಗೆ ಬರುತ್ತದೆ. ವಲಯ ಮಟ್ಟದಲ್ಲಿ ಅಂಪೈರ್‌ಗಳಿಗೆ ತರಬೇತಿ ಇರುತ್ತದೆ. ಈ ೩೦ ಅಂಪೈರ್‌ಗಳನ್ನು ಕಳೆದ ವಷದ ಅಂಪೈರ್‌ಗಳ ‘ಆಟ’ದ ವಿಡಿಯೋ ನೋಡಿ ಆರಿಸಲಾಗುತ್ತದೆ. ಅಂಪೈರ್‌ಗಳಲ್ಲಿ ಐಸಿಸಿ ಎಲೈಟ್ ಗುಂಪಿಗೆ ಶಿಫಾರಸು ಮಾಡುವ ಮಟ್ಟಕ್ಕೆ ಬೆಳೆಸುವುದು ಗುರಿ.
ಮೇಲಿನ ತೀರ್ಮಾನಗಳಿಂದಲೇ ಪವಾಡಗಳನ್ನು ನಿರೀಕ್ಷಿಸುವುದು ಮೂರ್ಖತನ. ಕೊನೆಪಕ್ಷ ಸರಿಯಾದ ದಾರಿಯಲ್ಲಿ ನಡೆಯುತ್ತಿರುವ ಸಮಾಧಾನ ತಾಳಬಹುದು. ಮುಖ್ಯವಾಗಿ, ಮಾಜಿ ಕ್ರಿಕೆಟ್ ಆಟಗಾರರು ಹೆಚ್ಚಿನ ಸಂಖ್ಯೆಯಲ್ಲಿ ಅಂಪೈರಿಂಗ್‌ಗೆ ಬರುವಂತಾಗಬೇಕು. ಇಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಕುಮಾರ ಧರ್ಮಸೇನರ ಆಗಮನದಿಂದ ಅನುಭವದ ಲಾಭ ಆಟಕ್ಕೆ ಸಿಕ್ಕಿದ್ದು ರುಜುವಾತಾಗಿದೆ. ಇಂತದ್ದು ಭಾರತದಲ್ಲೂ ಆಗಬೇಕಿತ್ತು. ಜಯಪ್ರಕಾಶ್, ವೆಂಕಟರಾಘವನ್ ಮಾಜಿ ಕ್ರಿಕೆಟಿಗರೇ. ಆದರೆ ಮಣೀಂದರ್ ಸಿಂಗ್‌ರಂತವರು ಅಂಪೈರಿಂಗ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರೂ ಅಂತಿಮವಾಗಿ ಆರಿಸಿಕೊಂಡಿದ್ದು ಹೆಚ್ಚು ಗ್ಲಾಮರಸ್ ಆಗಿರುವ ಟಿವಿ ಕಾಮೆಂಟರೇಟರ್ ಕೆಲಸವನ್ನು. ಎಸಿ ರೂಮ್, ನಿರಾಯಾಸ ಕೆಲಸ, ಗರಿಷ್ಠ ಸಂಭಾವನೆಯ ಈ ಅವಕಾಶವಿರುವಾಗ ಶುಷ್ಕ ಅಂಪೈರಿಂಗ್ ಮಾಜಿ ಕ್ರಿಕೆಟಿಗರನ್ನು ಆಕರ್ಷಿಸುವ ಸಾಧ್ಯತೆ ಕಡಿಮೆ. ಹಾಗಾಗಿ ಪರಿಸ್ಥಿತಿ ಸುಧಾರಿಸುವುದು ಕಠಿಣ.
ಕೊನೆಮಾತು - ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಹಿಡಿತದಲ್ಲಿರುವುದು ನಿಚ್ಚಳ. ಅಂತಹ ಸುಪ್ರೀಂ ಸಂಸ್ಥೆಯೇ ಕೈಯಲ್ಲಿರುವಾಗ ಯಕಶ್ಚಿತ್ ಅಂಪೈರ್ ಎಲೈಟ್ ಪ್ಯಾನೆಲ್ ಬಗ್ಗೆ ಈವರೆಗೆ ಬಿಸಿಸಿಐ ತಲೆ ಕೆಡಿಸಿಕೊಂಡಿರಲಿಲ್ಲ. ಈಗ ಐಪಿಎಲ್ ಈ ವಾತಾವರಣವನ್ನು ಬದಲಿಸಿದೆ. ಆ ಮಟ್ಟಿಗಾದರೂ ನಾವು ಪ್ರೀಮಿಯರ್ ಲೀಗ್ ಹೊಡಿಬಡಿ ಕ್ರಿಕೆಟ್‌ಗೆ ಥ್ಯಾಂಕ್ಸ್ ಹೇಳಬೇಕಲ್ಲವೇ?

-ಮಾವೆಂಸ

 
200812023996