ಶುಕ್ರವಾರ, ಫೆಬ್ರವರಿ 13, 2015

Santhosh aggro industries; The cold storage with a difference


ಸಾಗರದ ಅಡಿಕೆ ಬೆಳೆಗಾರರಿಗೆ ಅನುಕೂಲಕರ ಕೋಲ್ಡ್ ಸ್ಟೋರೇಜ್‍ಗೆ ಚಾಲನೆ
ಆನಂದಪುರದ ಮಲಂದೂರಿನಲ್ಲಿ ಕಾರ್ಯಾಚರಣೆ

ಮಾ.ವೆಂ.ಸ.ಪ್ರಸಾದ್

ಒಂದು ಲಕ್ಷ ಚೀಲ ಸಾಮಥ್ರ್ಯದ ಕೋಲ್ಡ್ ಸ್ಟೋರೇಜ್
ಸಂಪೂರ್ಣ ಅತ್ಯಾಧುನಿಕ ವ್ಯವಸ್ಥೆ
ಜಿಲ್ಲೆಯ 5 ತಾಲೂಕುಗಳಿಗೆ ಸುಲಭ ಸಂಪರ್ಕ
ಚಾಲಿ ಅಡಿಕೆ ಸಂಗ್ರಹ ಸಮಸ್ಯೆಗೆ ಉತ್ತರ



ಸಾಗರ: ಯಶಸ್ವಿ ಕೃಷಿ ಎಂಬುದು ಕೇವಲ ಅತ್ಯಧಿಕ ಬೆಳೆ ಬೆಳೆಯುವುದಲ್ಲ ಎಂದು ಒಂದು ಚಿಂತಕ ವರ್ಗ ಪ್ರತಿಪಾದಿಸುತ್ತಲೇ ಬಂದಿದೆ. ಅವರ ಪ್ರಕಾರ, ಅಡಿಕೆ ತೋಟದಲ್ಲಿ ಕಳೆದ ವರ್ಷ 10 ಕ್ವಿಂಟಾಲ್ ಚಾಲಿ ಅಡಿಕೆ ಬೆಳೆದವನ ಎದುರು ಅಷ್ಟೇ ವಿಸ್ತೀರ್ಣದಲ್ಲಿ 7 ಕ್ವಿಂಟಾಲ್ ಬೆಳೆದವನ ಎದುರು ಯಶಸ್ವಿ ಎಂದು ಸಾರುವುದು ಸಮರ್ಪಕ ಅಲ್ಲ. ಬೆಳೆದವ ಅದನ್ನು ಯಾವ ರೀತಿಯಲ್ಲಿ ಮಾರುಕಟ್ಟೆ ಮಾಡಿ ಆದಾಯ ಪಡೆದ ಎಂಬುದೂ ಮುಖ್ಯ ಅಂಶವಾಗುತ್ತದೆ. 10 ಕ್ವಿಂಟಾಲ್ ಬೆಳೆದ ರೈತ ಒಮ್ಮೆಗೇ ಆರಂಭಿಕ ದಿನಗಳ 16 ಸಾವಿರ ರೂ. ಕ್ವಿಂಟಾಲ್‍ನಂತೆ ಮಾರಿದ್ದಾನೆ ಎಂತಾದರೆ ಅವನಿಗೆ 1.60 ಲಕ್ಷ ರೂ. ಲಭ್ಯವಾಗಿದೆ. 7 ಕ್ವಿಂಟಾಲ್ ಅಡಿಕೆಯಾತ ಹಂತಹಂತವಾಗಿ ಮಾರಿ ಕ್ವಿಂಟಾಲ್‍ಗೆ ಸರಾಸರಿ 28 ಸಾವಿರ ರೂ.ಗೆ ಮಾರಿದರೆ ಅವನಿಗೆ 1.96 ಲಕ್ಷ ರೂ. ಬಂದಿದೆ. ಯಶಸ್ಸನ್ನು ಅಳೆಯಲು ಅವನು ಮಾಡಿದ ವೆಚ್ಚ, ಗಳಿಸಿದ ಆದಾಯಗಳ ನಂತರದ ನಿವ್ವಳ ಹಣ ಮಾನದಂಡವಾಗಬೇಕು ಎಂದು ಹೇಳಲಾಗುತ್ತಿದೆ.
ತಾತ್ವರ್ಯ ಇಷ್ಟೇ, ಬೆಳೆಯನ್ನು ವಿಕ್ರಯ ಮಾಡುವಲ್ಲಿ ಬೆಳೆಗಾರ ಹೆಚ್ಚು ವೈಜ್ಞಾನಿಕವಾಗಿ ಚಿಂತಿಸಬೇಕು ಎಂಬುದು. ಅಡಿಕೆ ಬೆಳೆಗಾರನಿಗೆ ಕೆಲವು ತಾಪತ್ರಯಗಳೂ ಇವೆ. ಚಾಲಿ ಅಡಿಕೆಯನ್ನು ಸುಲಿಸಿದ ನಂತರ ಮೂರು ತಿಂಗಳಿಗೂ ಹೆಚ್ಚು ಕಾಲ ಇರಿಸುವುದು ಕಷ್ಟ. ಇಂದಿನ ಕೂಲಿ ಕಾರ್ಮಿಕರ ಕೊರತೆಯ ಕಾರಣ ಕಂತು ಕಂತುಗಳಲ್ಲಿ ಸುಲಿಸಿ ವಿಕ್ರಯಿಸುವ ಕ್ರಮ ಅನುಸರಿಸುವುದೂ ಕಷ್ಟ. ಅಷ್ಟಕ್ಕೂ ಸುಲಿ ಕೆಲಸಕ್ಕೆ ಮಿಷನ್ ಬಳಸಿದರೆ ಒಮ್ಮೆಗೇ ಸುಲಿಸುವುದು ಅನಿವಾರ್ಯವಾಗುತ್ತದೆ. ಹಾಗಿದ್ದರೆ ವೈಜ್ಞಾನಿಕವಾಗಿ ಮಾರಾಟ ಮಾಡುವುದಕ್ಕಿಂತ ಬೆಳೆಯ ತಾಜಾತನ ಉಳಿಸಿಕೊಳ್ಳುವುದು ಹೇಗೆ?
ಶೀತಲ ಗೃಹಗಳೇ ಉತ್ತರ!
ಅದಕ್ಕೆ ಶೀತಲ ಗೃಹಗಳೇ ಉತ್ತರ. ಇದರಲ್ಲಿ ಇರಿಸಿದ ಬೆಳೆ ವರ್ಷಾನುಗಟ್ಟಲೆ ಏನೂ ಆಗದೆ ಉಳಿಯುತ್ತದೆ. ಒಮ್ಮೆಗೇ ಬೆಳೆ ಬಂದು ಬೆಲೆ ಇಲ್ಲದೆ ರಸ್ತೆಗೆ ಚೆಲ್ಲುವ ಟೊಮ್ಯಾಟೋ, ಮೆಣಸಿನಕಾಯಿಯಿಂದ ಹಿಡಿದು ಅಡಿಕೆ, ಕಾಳುಮೆಣಸು, ಹುಣಿಸೆಹಣ್ಣು, ಅರಿಸಿನ, ಶುಂಠಿ, ಆಲೂಗಡ್ಡೆ ಮೊದಲಾದ ಹಲವು ಬೆಳೆಗಳ ಕಾಪಿಡಲು ಕೋಲ್ಡ್ ಸ್ಟೋರೇಜ್ ಸೂಕ್ತವಾದುದು. ಅದೃಷ್ಟಕ್ಕೆ, ಶಿವಮೊಗ್ಗ ಜಿಲ್ಲೆಯ ರೈತರಿಗೆ ಆನಂದಪುರ ಸಮೀಪದ ಮಲಂದೂರಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಯೋಜನೆಯಡಿ ಸಿದ್ಧಗೊಂಡಿರುವ ಸಂತೋಷ್ ಆಗ್ರೋ ಇಂಡಸ್ಟ್ರೀಸ್ ಒಂದು ಆಶಾಕಿರಣವಾಗಿದೆ.
ಭಾರತದ ಎಲ್ಲ ಅತ್ಯಾಧುನಿಕ ಕೋಲ್ಡ್ ಸ್ಟೋರೇಜ್ ಸೌಕರ್ಯಗಳನ್ನು ಒಳಗೊಂಡಿರುವ ಸುಮಾರು 10 ಕೋಟಿ ರೂ. ವೆಚ್ಚದ ಈ ಶೀತಲ ಗೃಹ ನಾಲ್ಕು ಅಂತಸ್ತುಗಳನ್ನು ಹೊಂದಿದ್ದು 5 ಸಾವಿರ ಮೆಟ್ರಿಕ್ ಟನ್ ತೂಕದ ಸಾಮಥ್ರ್ಯ ಹೊಂದಿದೆ. ಹಾಗೆ ಹೇಳುವುದಕ್ಕಿಂತ, ಸುಮಾರು ಒಂದು ಲಕ್ಷ ಬ್ಯಾಗ್‍ಗಳನ್ನು ಸಂಗ್ರಹಿಸಬಹುದು ಎಂದರೆ ಅದರ ವಿಶಾಲತೆಯನ್ನು ಗ್ರಹಿಸಬಹುದು.
ಎಲ್ಲಿದೆ ಇದು?
ಆನಂದಪುರದ ಬಸ್ ನಿಲ್ದಾಣದಿಂದ ಸುಮಾರು 2-3 ಕಿಮೀ ದೂರದಲ್ಲಿ ಶಿಕಾರಿಪುರ ರಾಜ್ಯ ಹೆದ್ದಾರಿ 77ರ ಪಕ್ಕದಲ್ಲಿಯೇ ಇರುವ ಈ ಕೋಲ್ಡ್ ಸ್ಟೋರೇಜ್ ಯೂನಿಟ್‍ಗೆ ಎಪಿಎಂಸಿಯಿಂದ ಮಾನ್ಯತೆ ಇದೆ. ಗಮನಿಸಬೇಕಾದ ಅಂಶವೆಂದರೆ, ಶಿವಮೊಗ್ಗ, ತೀರ್ಥಹಳ್ಳಿ, ಹೊಸನಗರ, ಶಿಕಾರಿಪುರ, ಸಾಗರ ತಾಲೂಕು ಕೇಂದ್ರಗಳಿಂದ ಸಾಕಷ್ಟು ಕಡಿಮೆ ಅಂತರದಲ್ಲಿದೆ. ಜೊತೆಗೆ ಅತ್ಯುತ್ತಮ ರಸ್ತೆ ಸಂಪರ್ಕವನ್ನು ಹೊಂದಿರುವುದು ರೈತರ ಪಾಲಿಗೆ ಹೆಚ್ಚಿನ ಅನುಕೂಲವೆನಿಸುತ್ತದೆ.
ಬೆಳೆಗಾರರು ಏನು ಮಾಡಬಹುದು?
ಮತ್ತೆ ಅಡಿಕೆಯನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಮನೆಯಲ್ಲಿರುವ ಅಷ್ಟೂ ಒಣಗೋಟನ್ನು ಒಮ್ಮೆಗೇ  ಸುಲಿಸಿ ಸಿದ್ಧವಾದ ಚಾಲಿ ಅಡಿಕೆಯನ್ನು ಇಲ್ಲಿ ಸಂಗ್ರಹಿಸಬಹುದು. 11 ತಿಂಗಳ ಕಾಲ ಇಲ್ಲಿ ಇರಿಸುವ 50 ಕೆಜಿಯ ಒಂದು ಬ್ಯಾಗ್‍ಗೆ ಈ ಅವಧಿಗೆ 110 ರೂ. ಶುಲ್ಕ ವಿಧಿಸಲಾಗುತ್ತದೆ. ಜೂನ್‍ನಿಂದ ಸೆಪ್ಟೆಂಬರ್‍ವರೆಗಿನ 4 ತಿಂಗಳ ಅವಧಿಗೆ ಮಾತ್ರ ಇಡುವುದಾದರೆ 80 ರೂ. ಇಲ್ಲಿ ಇರಿಸುವ ಪ್ರತಿ ಬ್ಯಾಗ್ ವಿಮಾ ಯೋಜನೆಯಡಿ ಬರುತ್ತದೆ.
ಒಬ್ಬ ಅಡಿಕೆ ಬೆಳೆಗಾರ ತನ್ನ ಕೆಂಪು ಹಾಗೂ ಚಾಲಿ ಅಡಿಕೆಯನ್ನು ಇಲ್ಲಿ ತಂದಿರಿಸಿ ಕಳ್ಳತನದ ಭಯದಿಂದ ಮುಕ್ತನಾಗಬಹುದು. ಇಂದಿನ ಬೆಲೆ ಯುಗದಲ್ಲಿ ಮಾಲು ಸುರಕ್ಷಿತವಾಗಿದ್ದರೆ ನೆಮ್ಮದಿಯಿಂದ ಮನೆಯಲ್ಲಿ ಮಲಗಬಹುದು! ಬೆಳೆಗಾರ ಮಾಲನ್ನು ತನ್ನ ನಿಯಂತ್ರಣದಲ್ಲಿ ಇಡುವ ಪರಿಸ್ಥಿತಿ ಬಂದಾಗ ಅನಿವಾರ್ಯವಾಗಿ ಖರೀದಿದಾರ ದರ ಏರಿಕೆ ಕ್ರಮ ಅನುಸರಿಸಿ ಮಾಲು ವಿಕ್ರಯಿಸುವುದು ಅನಿವಾರ್ಯವಾಗುತ್ತದೆ.
ಬೆಳೆಗಾರನಿಗೆ ಇನ್ನೂ ಹಲವು ಅನುಕೂಲಗಳಿವೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಮಾನ್ಯತೆಯಿರುವುದರಿಂದ ಇಲ್ಲಿ ಸಂಗ್ರಹಿಸಿಟ್ಟ ಮಾಲಿಗೂ ಕೂಡ ಸಾಲ ಸೌಲಭ್ಯ ಪಡೆಯಬಹುದು. ಆನಂದಪುರದ ಎಸ್‍ಬಿಎಂ ಹಾಗೂ ಸಾಗರದ ಕಾರ್ಪೊರೇಶನ್ ಬ್ಯಾಂಕ್ ಈಗಾಗಲೇ ಆ ಮಾನ್ಯತೆ ನೀಡಿವೆ. ಇದೇ ಅನುಕೂಲವನ್ನು ಮುಂದಿನ ದಿನಗಳಲ್ಲಿ ಎಪಿಎಂಸಿ ಸಾಲ ಸೌಲಭ್ಯಕ್ಕೂ ಅನ್ವಯಿಸುವಂತಾದರೆ ರೈತರಿಗೆ ದೊಡ್ಡ ಪ್ರಮಾಣದ ಪ್ರಯೋಜನವಾಗಲಿದೆ.
ತಾಂತ್ರಿಕತೆಯಲ್ಲಿ ಈ ವ್ಯವಸ್ಥೆ ತನ್ನ ಅಡಿ ಟಿಪ್ಪಣಿಯಂತೆ `ದಿ ಕೋಲ್ಡ್ ಸ್ಟೋರೇಜ್ ವಿತ್ ಎ ಡಿಫರೆನ್ಸ್’ ಎಂಬುದಕ್ಕೆ ಅನ್ವರ್ಥವಾಗಿದೆ. ಪತ್ರಿಕೆಯೊಂದಿಗೆ ಮಾತನಾಡಿದ ಸ್ಥಾಪಕ ಟಿ.ಎನ್.ಸುಬ್ಬರಾವ್ ಮಾತನಾಡಿ, ಮಾಲು ಯಾವುದೇ ಸಂದರ್ಭದಲ್ಲಿ ಹಾಳಾಗದಿರುವಂತೆ 15 ಡಿಗ್ರಿ ತಾಪಮಾನವನ್ನು ಇಲ್ಲಿ ಕಾಯ್ದುಕೊಳ್ಳಲಾಗುತ್ತದೆ.  ಕಂಪ್ಯೂಟರೈಸ್ಡ್ ಸೆಂಟ್ರಲ್ ಮಾನಿಟರಿಂಗ್ ಹಾಗೂ ಕಂಟ್ರೋಲ್ ವ್ಯವಸ್ಥೆಯಿಂದ ಆಹಾರ ಸಂಗ್ರಹ ತಾಪಮಾನದಲ್ಲಿ ವ್ಯತ್ಯಯವಾಗುವುದಿಲ್ಲ. ಡು ಹ್ಯುಮಿಡಿಫಿಕೇಶನ್ ವ್ಯವಸ್ಥೆ ತಂಪು ವಾತಾವರಣದಲ್ಲೂ ಮಾಯಿಸ್ಚರ್ ಉಂಟಾಗದಂತೆ ನೋಡಿಕೊಳ್ಳುತ್ತದೆ. ತೂಕ ಲೆಕ್ಕಾಚಾರದಲ್ಲಿ ವಂಚನೆ ಆಗದಿರುವಂತೆ ಕಂಪ್ಯೂಟರೈಸ್ಡ್ ವೇವ್ ಬ್ರಿಜ್, ಮಾಲನ್ನು ಸುಲಭವಾಗಿ ಬೇಕಾದ ಅಂತಸ್ತಿಗೆ ಕೊಂಡೊಯ್ಯುವ ವರ್ಟಿಕಲ್ ಕನ್ವೇಯರ್, ಮಾಲಿನ ಗುಣಮಟ್ಟಕ್ಕೆ ಧಕ್ಕೆ ಆಗದಿರುವಂತೆ ವಿದ್ಯುತ್‍ಗೆ ಪರ್ಯಾಯವಾಗಿ ಡೀಸೆಲ್ ಜನರೇಟರ್ ಮೊದಲಾದ ವ್ಯವಸ್ಥೆಗಳನ್ನು ಹೊಂದಿದೆ. ಇಂದಿನ ದಿನಮಾನದ ಎಲ್ಲ ಅತ್ಯುತ್ತಮ ಕಚ್ಚಾವಸ್ತುಗಳಿಂದ ನಿರ್ಮಿಸಿರುವುದು ಪರೋಕ್ಷವಾಗಿ ಮಾಲು ಸಂರಕ್ಷಣೆಯ ಬೆನ್ನಿಗೆ ನಿಲ್ಲುತ್ತದೆ. ಇದೇ ಕಾರಣದಿಂದ ಶೀತಲ ಗೃಹ ಇಡೀ ಶಿವಮೊಗ್ಗ ಜಿಲ್ಲೆಯಲ್ಲಿ ಇದು ಪ್ರತ್ಯೇಕವಾಗಿ ನಿಲ್ಲುತ್ತದೆ. ದೂರದ ಹಾವೇರಿ, ಬ್ಯಾಡಗಿ ಬಿಟ್ಟರೆ  ಈ ಭಾಗದಲ್ಲಿ ಇದೇ ಪ್ರಪ್ರಥಮ ಎಂದು ಪ್ರತಿಪಾದಿಸುತ್ತಾರೆ.

ಬಳಸಿಕೊಳ್ಳಲಿ ಬೆಳೆಗಾರ...
ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಶುಂಠಿ ಬೆಳೆಗಾರರು ಮತ್ತು ವ್ಯಾಪಾರಿಗಳು ಈ ಶೀತಲ ಗೃಹದ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಸ್ವತಃ ಅಡಿಕೆ ಬೆಳೆಗಾರರ ಕುಟುಂಬದಿಂದ ಬಂದಿರುವ ಸುಬ್ಬರಾವ್ ಹೇಳುವುದೇ ಬೇರೆ, ಈ ಭಾಗದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುವ ಅಡಿಕೆಯನ್ನು ನಾವು ಬೇಕಾಬಿಟ್ಟಿಯಾಗಿ ಮಾರುತ್ತಿರುವುದರಿಂದಲೇ ಬೆಲೆ ಸೂತ್ರ ಖರೀದಿದಾರರಲ್ಲಿದೆ. ಬೆಳೆಗಾರನ ಸಂಗ್ರಹ ಸಂಕಷ್ಟಕ್ಕಂತೂ ಈ ಕೋಲ್ಡ್ ಸ್ಟೋರೇಜ್ ಉತ್ತರವಾಗಿದೆ. ಹಲವು ಸಣ್ಣ ಹಿಡುವಳಿದಾರರು ಸೇರಿ ದೊಡ್ಡ ರಖಂ ಮಾಡಿಕೊಂಡು ಇಲ್ಲಿ ತಂದಿಟ್ಟರೆ ಅವರಿಗೆ ಲಭಿಸುವ ಮಾಲಿನ ಬೆಲೆಯಲ್ಲಿ  ಇಲ್ಲಿನ ಬಾಡಿಗೆ, ಹಮಾಲಿ, ವಿಮಾ ಪ್ರೀಮಿಯಂ ನಗಣ್ಯ ಎನ್ನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ನಿಜ, ಬೆಳೆಗಾರರು ಹೊಸ ವ್ಯವಸ್ಥೆಗಳನ್ನು ತಮ್ಮ ಅನುಕೂಲಕ್ಕೆ ಬಗ್ಗಿಸಿಕೊಳ್ಳಬೇಕಾಗಿದೆ!



ಗುರುವಾರ, ಏಪ್ರಿಲ್ 12, 2012

ಸಾಗರದ ಜನಕ್ಕೆ ಹಳೆ ಸಮುದ್ರದ ನೆನಪು!



ಬದಲಾದರೂ ಬದಲಾಗದ ಬದುಕು
ಬದಲಾವಣೆ ಜಗದ ನಿಯಮ. ಹಾಗಂತ ವಾದ ಮಂಡಿಸಿ, ಬಿಡಿ, ನಮ್ಮೂರು ಬದಲಾಗುವುದು ಖಚಿತ. ಏರುತ್ತಲೇ ಇರುವ ಜನಸಂಖ್ಯೆ ಮಾರ್ಪಾಡುಗಳನ್ನು ತೀರಾ ಅನಿವಾರ್ಯ ಎನ್ನುವಂತೆ ಮಾಡಿದೆ. ಆದರೆ ಸಾಗರದಂತ ಮಲೆನಾಡಿನ ಊರಲ್ಲಿ ಕೆಲವು ವಿಷಯಗಳು ಮೇಲ್ನೋಟಕ್ಕೆ ಬದಲಾಗಿವೆ. ಜನರ ಅಂತರ್ಯದಲ್ಲಿ ಚೂರೇ ಚೂರು ಬದಲಾಗಿಲ್ಲ. ಹೀಗಂದುಬಿಟ್ಟರೆ ಒಪ್ಪುವುದಿಲ್ಲ. ಮಾತಿಗೆ ತಕ್ಕ ಪುಷ್ಟಿ ಬೇಕು ಎನ್ನುತ್ತೀರೇನೋ.... ತಕಳ್ಳಿ, ಉದಾಹರಣೆಯನ್ನು.
ಈಗಿನ ಸಾಗರದ ಹೃದಯಭಾಗದಲ್ಲಿ ಮಾರಿಕಾಂಬಾ ದೇವಸ್ಥಾನವಿದೆ. ಇದಕ್ಕಿಂತ ಮಾರು ಮೇಲೆ ಇರುವುದು ಮಾರಿಕಾಂಬಾ ರಸ್ತೆ, ಅಶೋಕ ರಸ್ತೆ, ಜೆ.ಸಿ.ರಸ್ತೆಗಳು ಕೂಡುವ ಸ್ಥಳ,  ಸಾಗರ ಹೋಟೆಲ್ ವೃತ್ತ. ಇಲ್ಲಿಗೆ ಹೊಸಬರಾದವರು ಇಷ್ಟು ಪ್ರಸಿದ್ಧಿ ಪಡೆದ ಸಾಗರ ಹೋಟೆಲ್‌ನ್ನು ಹುಡುಕಿಕೊಂಡು ಹೋದರೆ ದಾರಿ ತಪ್ಪಿದಂತೆಯೇ! ಸಾಗರದಲ್ಲಿ ಸಾಗರ ಹೋಟೆಲ್ ಕಣ್ಣುಮುಚ್ಚಿ ಎರಡು ದಶಕಗಳೇ ಕಳೆದುಹೋಗಿದೆ. ಅವತ್ತು ಜನ ಈ ಹೋಟೆಲ್ ಮುಂದಿನ ನಾಲ್ಕು ರಸ್ತೆ ಕೂಡುವ ಜಾಗವನ್ನು ಹೋಟೆಲ್ ಹೆಸರಿನಿಂದಲೇ ಕರೆದರು. ವರ್ಷಗಳುರುಳಿದರೂ ಆ ವೃತ್ತಕ್ಕೆ ಬೇರೆ ಹೆಸರು ಕರೆಯಲು ಮಾತ್ರ ಸಾಧ್ಯವಾಗಿಲ್ಲ.
ಸ್ವಾರಸ್ಯವೆಂದರೆ, ಬಿಜೆಪಿಗಳನ್ನು ಅದಕ್ಕೆ ವಾಜಪೇಯಿಯವರ ಹೆಸರನ್ನು ಇರಿಸಿ ಅವರನ್ನು ಅಜರಾಮರರನ್ನಾಗಿಸಲು ಪ್ರಯತ್ನಿಸಿದರು. ದಲಿತ ಸಂಘರ್ಷ ಸಮಿತಿಯವರೇನು ಕಡಿಮೆ, ಅಕ್ಷರಶಃ ಅಂಬೇಡ್ಕರ್‌ರ ಹೆಸರಿನ ನಾಮಫಲಕವನ್ನೇ ತಂದು ಊರಿದರು. ಸಮಾಜವಾದಿಗಳ ಲೋಹಿಯಾ, ಶಾಂತವೇರಿ ಗೋಪಾಲಗೌಡರ ಹೆಸರುಗಳೂ ಈ ವೃತ್ತದ ಸುತ್ತ ಸುಳಿದಾಡಿದ್ದು ನಿಜ. ಜನ ಮಾತ್ರ ಸಾಗರ ಹೋಟೆಲ್‌ನ್ನು ಬಿಡಲಿಲ್ಲ. ಹಳೆ ತಲೆಗಳನ್ನು ಕೇಳಿ, ಈ ಹೋಟೆಲ್‌ನ ಬೆಂಚ್ ಮೇಲೆ ಕೂತು ಬೈಟು ಕಾಫಿ ಕುಡಿಯುತ್ತ ಹೊರಗಡೆ ಕಣ್ಣಿಟ್ಟರೆ ಪೇಟೆಗೆ ಬಂದ ಅಸಾಮಿಗಳೆಲ್ಲ ಅವತ್ತು ಸಿಕ್ಕಿಬಿಡುತ್ತಿದ್ದರು. ಸೆಂಟಿಮೆಂಟ್ ನೋಡಿ, ಇವತ್ತಿಗೂ ಸಾಗರದಲ್ಲಿ ಮತ್ತೊಂದು ‘ಸಾಗರ ಹೋಟೆಲ್’ ತಲೆಯೆತ್ತಿಲ್ಲ!
ಈ ದಿನಗಳಲ್ಲಿ ನೀವು ಸಾಗರಕ್ಕೆ ಬಂದರೆ ತಟಕ್ಕನೆ ಇದು ಮಲೆನಾಡು ಪ್ರದೇಶವೇ ಎಂದು ಅಚ್ಚರಿಪಡುತ್ತಿರಿ. ಆ ಪರಿ ಸೆಖೆ, ಬಿಸಿಲು. ಉಷ್ಣಾಂಶ ೪೦ ಪ್ಲಸ್ ಆಗಿರುವ ಜೊತೆಗೆ ಹೆಸರಿಗೆ ಸಾಗರವಾದರೂ ಸಾಗರದ ಜನತೆಗೆ ನೀರಿಗೆ ತತ್ವಾರ! ಪಕ್ಕದ ವರದಾ ನದಿಯಲ್ಲಿ ನೀರು ತಟ್ಟಮಟ್ಟ. ಇಂತಹ ಅಪಾಯಗಳಿಗೆ ಅಂಜದ, ಅಳುಕದ ಆಡಳಿತ ಊರಿನ ಬೃಹತ್ ಗಣಪತಿ ಕೆರೆಯನ್ನು ಮುಚ್ಚಿಹಾಕಲು ವಿಶೇಷ ಪ್ರಯತ್ನವನ್ನು ಮಾಡುತ್ತಲೇ ಇದೆ. ಜನ ಕೂಡ ತಮ್ಮ ಕಾಣಿಕೆ ಕೊಡಲು ಹಿಂಜರಿದಿಲ್ಲ. ಅವತ್ತು ಈ ಕೆರೆಯನ್ನು ಸೀಳಿ ರಾಷ್ಟ್ರೀಯ ಹೆದ್ದಾರಿ ೨೦೬ ಹೊನ್ನಾವರಕ್ಕೆ ಪಯಣಿಸಿತ್ತು. ಇವತ್ತು ರಸ್ತೆಯ  ಒಂದು ಪಕ್ಕದಲ್ಲಿ ಕೆರೆಯಿಲ್ಲ, ನೀರಿಲ್ಲ. ನಾವೀಗ ಆ ಜಾಗದಲ್ಲಿ ಮಣ್ಣು ತುಂಬಿ ಜಾತ್ರೆಯ ಅಮ್ಯೂಸ್ ಮೆಂಟ್ ಪಾರ್ಕ್ ಮಾಡಿದ್ದೇವೆ. ಜನರಿಗೆ ನಾಳಿನ ಸಮಸ್ಯೆಯ ಕುರಿತು ಮರೆತುಹೋಗುವಂತೆ ಮನರಂಜನೆಯ ವ್ಯವಸ್ಥೆ!
ಯಾರೋ ಹೇಳುತ್ತಿದ್ರು, ಹಳ್ಳಿಗಳು ಮಾಯವಾಗುತ್ತಿವೆ. ಇದನ್ನು ಪ್ರತ್ಯಕ್ಷವಾಗಿ ನೋಡಬೇಕಾದರೆ ನೀವು ನಮ್ಮೂರಿಗೆ ಬರಲೇಬೇಕು. ಇಲ್ಲಿನ ಬಹುಸಂಖ್ಯಾತ ಹವ್ಯಕ ಸಮುದಾಯ ಮತ್ತು ಉಳಿದ ಜನಾಂಗದವರು ಓದಿ ಕೆಲಸದ ಕಾರಣಕ್ಕೆ ಬೆಂಗಳೂರು ಸೇರುತ್ತಿದ್ದಾರೆ. ಈಗೀಗ ಗ್ರಾಮಾಂತರ ಪ್ರದೇಶದಲ್ಲಿ ಮುದುಕರು, ಬಿಟ್ಟರೆ ಮಧ್ಯವಯಸ್ಕರು. ಅತ್ತ ಓದೂ ಹತ್ತದೆ ಮನೆ ಬಿಡಲಾಗದ ಸಂಕಟದ ಸ್ಕ್ರಾಪ್ ಯುವಕರು ಸ್ವಲ್ಪ ಮಂದಿ. ಆಳಿಲ್ಲ, ಕೈಯಲ್ಲಾಗದಿರುವುದರಿಂದ ಕೊಟ್ಟಿಗೆ ಜಾನುವಾರು ಇಲ್ಲ. ಹಾಗಿದ್ದೂ ಹುಲ್ಲಿನ ಬೆಲೆ ಮಾತ್ರ ಗಗನಕ್ಕೇರಿದ್ದೇಕೆ ಎಂದರೆ ಹುಲ್ಲಿನ ವ್ಯಾಪಾರಿ ನನಗೊತ್ತಿಲ್ಲಪ್ಪ ಎಂದ. ಈ ವರ್ಷ ಅಡಿಕೆ ಫಲ ಗುತ್ತಿಗೆ ಕೊಡೋಣವೆಂದರೆ ಗುತ್ತಿಗೆದಾರರೂ ಇಲ್ಲ. ಅವರಿಗೂ ಆಳು ಸಮಸ್ಯೆಯಂತೆ!
ಹಳ್ಳಿಗಳು ಇನ್ನೊಂದು ಅರ್ಥದಲ್ಲಿಯೂ ಛೂಮಂತರ್ ಆಗತೊಡಗಿದೆ. ಇಂದು ಹಳ್ಳಿಗರಿಗೂ ಟಾರಸಿ ಮನೆಯ ಶೋಕಿ, ಮನೆಗೊಂದು ಕಾರು, ಕಾಂಪೌಂಡ್. ಇದರಿಂದಾಗಿ ಯಾವುದೇ ಊರಿಗೆ ಹೋದರೂ ಅದು ಪೇಟೆಯ ಒಂದು ಮಿನಿಯೇಚರ್‌ನಂತೆ ಕಾಣಿಸುತ್ತಿದೆಯೇ ವಿನಃ ಆ ಹಿಂದಿನ ಹಂಚಿನ ಮನೆ, ಪಣತ, ಒಳಾಂಗಳ, ಕಡಿಮಾಡು, ಕೊಟ್ಟಿಗೆ ಮಂಗಮಾಯ. ಅಳಿದುಳಿದ ಹಿತ್ತಲುಗಳಲ್ಲಿಯೂ ಮಂಗದ ಕಾಟ. ಹಾಗಾಗಿ ನಮ್ಮ ಕಡೆ ಹಳ್ಳಿಯವ ತರಕಾರಿಯನ್ನು ಸೂಪರ್ ಮಾರ್ಕೆಟ್‌ನಿಂದ ತರುತ್ತಿದ್ದಾನೆ!
ನಾವು ಹೊಸದನ್ನು ಸವಿಯುತ್ತಲೇ ಕಣ್ಮರೆಯಾದುದರ ಬಗ್ಗೆ ಮೆಲುಕುಹಾಕುತ್ತೇವೆ. ಆ ಮಟ್ಟಿಗೆ ಕಳೆದುದೇ ಗ್ರೇಟ್. ಇಂತಿಪ್ಪ ಸಾಗರದಲ್ಲಿ ಇದ್ದದ್ದೇ ಮೂರು ಸಿನೆಮಾ ಟಾಕೀಸ್. ಸಾಗರ್, ಶ್ರೀ ಹಾಗೂ ಕೃಷ್ಣಾ. ಡಿಜಿಟಲ್ ಮಣ್ಣು ಮಸಿ ತಂತ್ರಜ್ಞಾನಗಳೆಲ್ಲ ಸಾಗರಕ್ಕೂ ಬಂದಿದೆ. ಇಂದು ಆ ಕೃಷ್ಣಾ ಟಾಕೀಸ್‌ನಲ್ಲಿ ಜೇಡರ ಬಲೆ, ಮುಚ್ಚಿದ ಬಾಗಿಲು ತರದ ಸಿನೆಮಾ ಮಾತ್ರ ಪ್ರದರ್ಶನಗೊಳ್ಳುತ್ತಿದೆ. ಏಪ್ರಿಲ್ ಫೂಲ್ ಮಾಡುತ್ತಿರುವುದಕ್ಕೆ ಕ್ಷಮೆ ಇರಲಿ, ಈ ಚಲನಚಿತ್ರ ಮಂದಿರ ನಿಲುಗಡೆಯಾಗಿ ೨೫ ವಸಂತಗಳೇ ಸಂದಿರಬೇಕು. ಹಾಗಾಗಿ ಜನ ಈ ಟಾಕೀಸ್‌ನಲ್ಲಿ ಈಗಲೂ ಮೇಲಿನ ಅನ್ವರ್ಥದ ಸಿನೆಮಾಗಳು ನಡೆಯುತ್ತಿದೆಯೆಂದು ಕುಶಾಲು ಮಾಡುತ್ತಿರುತ್ತಾರೆ.
ಎಷ್ಟೇ ಟಿವಿ, ಕಂಪ್ಯೂಟರ್‌ನಲ್ಲಿ ಸಿನೆಮಾ ನೋಡುತ್ತೇನೆಂದರೂ ಸಿನೆಮಾ ಟಾಕೀಸ್‌ನ ಅನುಭವದ ಮುಂದೆ ಉಳಿದುದೆಲ್ಲವೂ ಶೂನ್ಯ. ಇದೇ ವಾಸ್ತವವಾದರೂ ಸಾಗರದಲ್ಲಿ ಇಂದು ಇರುವುದು ಮೊದಲಿನೆರಡೇ ಟಾಕೀಸು. ಕೃಷ್ಣಾ ಇಲ್ಲದ ಜಾಗವನ್ನು ತುಂಬಲು ಮತ್ತೊಂದು ಬಂದಿಲ್ಲ. ಇವತ್ತಿಗೂ ಇಲ್ಲಿನ ಜನ ಕೃಷ್ಣಾ ಟಾಕೀಸನ್ನು ನೋಡುತ್ತಲೇ ಪೇಟೆಯಲ್ಲಿ ಸಾಗುತ್ತಾರೆ. ಏಕೆಂದರೆ ಬೇರೆಡೆಗಳಲ್ಲಿ ಸಿನೆಮಾ ಮಂದಿರವನ್ನು ಕೆಡವಿ ಸಂಕೀರ್ಣ ಕಟ್ಟುವುದು ಬರೋಬ್ಬರಿ ವೇಗದಲ್ಲಿ ನಡೆದಿದ್ದರೆ ಸಾಗರದಲ್ಲಿ ಆ ಟಾಕೀಸ್‌ನ ಕಟ್ಟಡ ಹಾಗೆಯೇ ಇದೆ. ತನ್ನ ಬೋರ್ಡ್‌ನ್ನು ಈಗಲೂ ಮಸುಕುಮಸುಕಾಗಿ ಪ್ರದರ್ಶಿಸುತ್ತ ಅದು ಗತವೈಭವದ ಪಳೆಯುಳಿಕೆಯಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿಯೇ ರೈಲನ್ನು ಕಂಡ ವಿಶಿಷ್ಟ ಊರಿದು. ಲಿಂಗನಮಕ್ಕಿ ಆಣೆಕಟ್ಟೆಗೆ ಸಿಮೆಂಟ್, ಕಬ್ಬಿಣವನ್ನು  ಹೊತ್ತು ತಂದಿದ್ದು ನ್ಯಾರೋಗೇಜ್‌ನ ಉಗಿಬಂಡಿ. ಇದರಿಂದ ಭಡ್ತಿ ಪಡೆಯಬೇಕಾಗಿದ್ದ ಊರು ಇದ್ದಕ್ಕಿದ್ದಂತೆ ಸಂಪರ್ಕ ಮಾಧ್ಯಮಗಳಲ್ಲಿ ರೈಲಿನ ನಕ್ಷೆಯಿಂದಲೇ ಮಾಯವಾಗುವ ಸನ್ನಿವೇಶ ನಿರ್ಮಾಣವಾಯಿತು. ಒಂದು ಕಾಲದಲ್ಲಿ ಮುಂಬೈ ಜೊತೆಗೆಲ್ಲ ಸಂಪರ್ಕ ಕಂಡಿದ್ದ ಸಾಗರದ ರೈಲು ಪ್ರಯಾಣಿಕರು ಅಕ್ಷರಶಃ ರೈಲು ಸೇವೆಯಿಂದ ವಂಚಿತರಾದರು. ಮೀಟರ್‌ಗೇಜ್‌ಗೆ ಪರಿವರ್ತನೆ ಆಗದೆ ರೈಲು ಬರದು ಎಂಬ ಸರ್ಕಾರದ ನೀತಿಯಿಂದಾಗಿ ಬರುತ್ತಿದ್ದ ರೈಲು ನಿಲ್ಲಿಸಲ್ಪಟ್ಟಿತು. ಸಾಗರದ ಜಂಬಗಾರು ರೈಲ್ವೆ ಸ್ಟೇಷನ್ ಆರ್.ಕೆ.ನಾರಾಯಣ್‌ರ ಮಾಲ್ಗುಡಿ ದಿನಗಳ ಅನಾವರಣವಾಯಿತು. ಜನ ಮತ್ತೆ ಇನ್ನೊಂದು ಸ್ವಾತಂತ್ರ್ಯ ಹೋರಾಟವನ್ನೇ ಮಾಡಿ ಬ್ರಾಡ್‌ಗೇಜ್ ಹಳಿ ತಂದರು. ಕಳೆದ ವರ್ಷ ಮೈಸೂರು ಇಂಟರ್‌ಸಿಟಿ ರೈಲು ಬಂದಾಗ ಜನ ತೋರಿದ ಸಂಭ್ರಮ ನಮಗೆ ಬ್ರಿಟಿಷರು ಭಾರತ ಬಿಟ್ಟಾಗ ಜನ ಖುಷಿ ಪಟ್ಟಿರುವ ದೃಶ್ಯವನ್ನು ಕಟ್ಟಿಕೊಟ್ಟಿತು.
ಹಳಿ ಬಂತು, ರೈಲ್ವೆ ಸ್ಟೇಷನ್‌ಗೆ ಸುಣ್ಣ ಬಣ್ಣ ಆಯಿತು. ಜನರಿಗೆ ಹೋರಾಟ ಮಾಡುವುದು ನಿತ್ಯವಿಧಿಯಾಗಿದೆ. ಇವತ್ತಿಗೂ ಇಲ್ಲಿಗೆ ಬರುತ್ತಿರುವುದು ಒಂದೇ ರೈಲು. ಬೆಂಗಳೂರಿಗೆ ಹೋಗಲು ಹಿಂದಿದ್ದ ರೈಲು ವಾಪಾಸು ಕೊಡಿ ಎಂದು ಜನ ಆಗ್ರಹಿಸುತ್ತಿದ್ದರೆ ಕೇಂದ್ರ ಸರ್ಕಾರ ಮೊನ್ನೆ ರೈಲ್ವೆ ಬಜೆಟ್‌ನಲ್ಲಿ ಬೆಂಗಳೂರು ತಾಳಗುಪ್ಪ ಹೊಸ ರೈಲನ್ನು ಘೋಷಿಸಿ ಸಂಭ್ರಮಿಸುತ್ತಿದೆ. ಜನಕ್ಕಿನ್ನೂ ನಂಬಿಕೆ ಬಂದಿಲ್ಲ, ಹಾಗಾಗಿ ಸಂಭ್ರಮಾಚರಣೆಯನ್ನು ಪೋಸ್ಟ್‌ಪೋನ್ ಮಾಡಿದ್ದಾರೆ!



-ಮಾವೆಂಸ

ಬುಧವಾರ, ಜುಲೈ 13, 2011

‘ಬಳಕೆ ತಿಳುವಳಿಕೆ’ ಸಂಪಾದಕನಾಗಿ....

ಸಾಗರದ ಬಳಕೆದಾರರ ವೇದಿಕೆ ಕಳೆದ ೨೦ ವರ್ಷಗಳಿಂದ ಪ್ರಕಟಿಸುತ್ತಿರುವ ‘ಬಳಕೆ ತಿಳುವಳಿಕೆ’ ಮಾಸಿಕದ ನೂತನ ಸಂಪಾದಕನನ್ನಾಗಿ ನನ್ನನ್ನು ನೇಮಿಸಲಾಗಿದೆ. ಈ ಹಿಂದೆ ಇದೇ ಪತ್ರಿಕೆಯ ಸಹಸಂಪಾದಕನಾಗಿ ಕೆಲಸ ಮಾಡಿದ್ದೆ.
ಪ್ರಥಮ ಸಂಚಿಕೆಯಿಂದ ಇದರ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಕೆ.ಎನ್.ವೆಂಕಟಗಿರಿರಾವ್ ತೆರವುಗೊಳಿಸಿದ ಸ್ಥಾನಕ್ಕೆ ಇತ್ತೀಚೆಗೆ ಸೇರಿದ್ದ ವೇದಿಕೆಯ ಮಹಾಸಭೆಯಲ್ಲಿ ಉದಯವಾಣಿಯ ಸಾಗರ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿರುವ ನನ್ನನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು.
ಇನ್ನು ಮುಂದೆ ಬಳಕೆ ತಿಳುವಳಿಕೆಯನ್ನು  ಓದುಗರು ನೇರವಾಗಿ ಅಂತರ್ಜಾಲ ಬಳಸಿಯೂ ಪ್ರತಿ ತಿಂಗಳು  ಓದಬಹುದು. ನೀವು http://balaketiluvalike.blogspot.com/ ವಿಳಾಸದಲ್ಲಿ  ಇಣುಕಿದರೆ ಸಾಕು.

ಪತ್ರಿಕೆಯ ಕುರಿತಂತೆ ನಿಮ್ಮ ಪ್ರತಿಕ್ರಿಯೆ, ಗ್ರಾಹಕ ಕ್ಷೇತ್ರದ ನಿಮ್ಮ ಅನುಭವ, ವಿಷಯಾಧಾರಿತ ಲೇಖನಗಳನ್ನು ನೀವೀಗ ಪತ್ರಿಕೆಯ ಇ-ಮೈಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು. ಆ ವಿಳಾಸ balaketiluvalike@gmail.com

ಗುರುವಾರ, ಜುಲೈ 7, 2011

ಊರ ಹೆಗ್ಡೇರು ಗುಳೆ ಹೊರಟ್ರು, ಟಾಡ್ ಭಟ್ರು ಹಳ್ಳಿಗೆ ಬಂದ್ರು.........



Add caption

ಹಳ್ಳಿ ಮೂಲೆ, ಜಿಟಿ ಜಿಟಿ ಮಳೆ. ಜಾರುವ ನೆಲ. ಸುತ್ತ ಮರಗಿಡ, ಉಂಬಳ ಸೊಳ್ಳೆ ಧಾರಾಳ. ಮುಖ್ಯ ರಸ್ತೆಗೆ ಅಜಮಾಸು ಒಂದು ಕಿ.ಮೀ. ನಡೆದರೆ ದರ್ಶನ. ಅಲ್ಲಿಯವರೆಗೆ ಮಾತ್ರ ಸಾರಿಗೆ ಬಸ್ಸಿನ ಓಡಾಟ. ಕೈ ಕೊಡುವ ವಿದ್ಯುತ್, ಆಗೀಗ ಸಿಗ್ನಲ್ ತಾಕದ ವಿಲ್ ಫೋನ್...... ಇಂತಹ ಸನ್ನಿವೇಶದಲ್ಲೂ ‘ಕೃಷಿ ಕುಟುಂಬ’ವೊಂದು ನೆಮ್ಮದಿಯಿಂದಿದೆ. ಅಮೆರಿಕನ್ ಯುವಕ, ಇಂಡಿಯನ್ ಹುಡುಗಿಯ ಈ ಸಂಸಾರ ಹಳ್ಳಿಗಳಿಂದ ಗುಳೆ ಎದ್ದು ಹೋಗುತ್ತಿರುವ ನಮ್ಮವರಿಗೆ ಶಾಕ್ ಕೊಡಬಲ್ಲದು.
ಉಹ್ಞೂ, ಅವರಿರುವ ಊರಿನ ಹೆಸರಿನ ಪ್ರಸ್ತಾಪವೇ ಬೇಡ. ಸಾಗರದ ಸಾಂಸ್ಕೃತಿಕ ರಾಜಧಾನಿ ಎನ್ನಬಹುದಾದ ಹೆಗ್ಗೋಡಿನ ಸಮೀಪ ಎಂದಷ್ಟೆ ದಾಖಲಿಸಿಕೊಳ್ಳೋಣ. ಇಲ್ಲಿ ಅಮೆರಿಕದ ಕ್ಲೇವ್‌ಲೆಂಡ್‌ನ ಟಾಡ್ ಲಾರಿಚ್ ಹಾಗೂ ಮಲೆನಾಡಿಗೆ ಸೇರಿದವರಾದ ಕೃತಿ ದಂಪತಿಗಳು ಕಳೆದ ನಾಲ್ಕು ವರ್ಷಗಳಿಂದ ಅಕ್ಷರಶಃ ಕೃಷಿಕ ಜೀವನವನ್ನು ಸಾಗಿಸುತ್ತಿದ್ದಾರೆ. ಹೊರಗಿನಿಂದ ಬಂದವರು ಮಲೆನಾಡಿನ ಒಂದು ಮಳೆಗಾಲವನ್ನು ಕಳೆಯುವುದೇ ಕಷ್ಟ ಎನ್ನುವ ಪರಿಸ್ಥಿತಿಯಿರುವಾಗ ಈ ದಂಪತಿಗಳು ಖುಷಿಖುಷಿಯಾಗಿದ್ದಾರೆ. ಅದೇ ಸಮಯಕ್ಕೆ ನಾವು ನೀವು ಒಪ್ಪಿತ ವಾದಕ್ಕೆ ಸವಾಲು ಹಾಕುತ್ತಿದ್ದಾರೆ.
ಹಳ್ಳಿಯ ಕೊರತೆಗಳು, ಕೃಷಿ ಬದುಕಿನ ಸಂಕಷ್ಟಗಳನ್ನು ಪ್ರಸ್ತಾಪಿಸಿದರೆ ಇಲ್ಲಿನ ಕೂಲಿಯಾಳುಗಳ ನೆಚ್ಚಿನ ಟಾಡ್ ಭಟ್ರು ಹೇಳುವುದೇ ಬೇರೆ, ಪಟ್ಟಣದ ಜಿಗಿಜಿಗಿ ಟ್ರಾಫಿಕ್, ಬೆಳಿಗ್ಗೆಯಿಂದ ರಾತ್ರಿ ೮-೧೦ರವರೆಗಿನ ದುಡಿತ, ಕಲುಷಿತ ವಾತಾವರಣಗಳ ನಗರಗಳಿಗಿಂತ ಹಳ್ಳಿಯ ವಾತಾವರಣ ಎಷ್ಟೋ ಮೇಲು ಎನ್ನುತ್ತಾರವರು.
ಮಾತು ಮುಂದುವರೆಸುವ ಮುನ್ನ ಕೆಲಕಾಲ ಫ್ಲಾಶ್‌ಬ್ಯಾಕ್‌ಗೆ ತೆರಳೋಣ. ವರ್ಷ ೧೯೯೬. ಟಾಡ್ ಹಾಗೂ ಕೃತಿ ದೆಹಲಿಯಲ್ಲಿ ವಿದ್ಯಾಭ್ಯಾಸ ನಿಮಿತ್ತ ಇದ್ದ ಸಂದರ್ಭದಲ್ಲಿ ಭೇಟಿಯಾದವರು ಪರಸ್ಪರ ಪ್ರೀತಿಸಿ ಹುಡುಗಿ ಮನೆಯ ಹವ್ಯಕ ಸಂಪ್ರದಾಯದಂತೆ ಮದುವೆಯಾದವರು. ೫-೬ ವರ್ಷ ಓದು, ಉದ್ಯೋಗಕ್ಕಾಗಿ ಸುತ್ತಾಕಿದ ಅಮೆರಿಕ, ದೆಹಲಿ, ಬೆಂಗಳೂರುಗಳೆಲ್ಲ ಅವರದೇ ಕಾರಣಗಳಿಗೆ ರೇಜಿಗೆ ಹುಟ್ಟಿಸಿತ್ತು. ಅಮೆರಿಕದ ಕೊಳ್ಳುಬಾಕ ಸಂಸ್ಕೃತಿ ಇಷ್ಟಪಡದ ಕೃತಿ ಹಾಗೂ ನಗರದ ಅಬ್ಬರ, ಜಂಜಡಗಳನ್ನು ಬಯಸದ ಟಾಡ್‌ರಿಗೆ ಪರಿಹಾರವಾಗಿ ‘ಹಳ್ಳಿ’ ಕಾಣಿಸಿತ್ತು. ಹಾಗಾಗಿ ಯುವ ದಂಪತಿಗಳು ‘ಹಳ್ಳಿ ಮೂಲೆ’ಯನ್ನು ಹುಡುಕಲಾರಂಭಿಸಿದ್ದರು.
ಸಾಂಸ್ಕೃತಿಕ ಚಟುವಟಿಕೆಗಳ ನೆಲವೀಡು ಹೆಗ್ಗೋಡಿನ ನಿನಾಸಂ ಆಜುಬಾಜಿನಲ್ಲಿಯೇ ಕೃಷಿ ಜಮೀನು ಅರಸಿದವರಿಗೆ ನಿರಾಶೆಯಾಗಲಿಲ್ಲ. ಅಂತೂ ಇಲ್ಲಿಂದ ನಾಲ್ಕು ಕಿ.ಮೀ. ದೂರದಲ್ಲಿ ಒಂದೆಕರೆಗಿಂತ ತುಸು ಹೆಚ್ಚಿರುವ ಅಡಿಕೆ ತೋಟ ಒಳಗೊಂಡ ಜಮೀನು ಸಿಕ್ಕಿಯೇಬಿಟ್ಟಿತು. ತಮ್ಮದೇ ಆದ ಪುಟ್ಟ ಮನೆ ಕಟ್ಟಿಸಿಯೇ ಟಾಡ್-ಶೃತಿ ಜೋಡಿ ತಮ್ಮ ಪುಟ್ಟ ಮಗು ‘ಹಮೀರ್ ಮುಗಿಲು’ ಸಮೇತರಾಗಿ ಇಲ್ಲಿ ಗೃಹಪ್ರವೇಶ ಮಾಡಿದ್ದು  ೨೦೦೯ರ ಜುಲೈನಲ್ಲಿ. ಅಲ್ಲಿಂದ ಬರೋಬ್ಬರಿ ೨೫ ತಿಂಗಳು ಕಳೆದಿವೆ. ಎರಡು ಮಳೆಗಾಲದಲ್ಲಿ ಮಳೆ ಹರಿದುಹೋಗಿದೆ. ಟಾಡ್ - ಕೃತಿ ಬೇಸರಗೊಂಡಿಲ್ಲ. ಮಲೆನಾಡಿನ ಸಮಸ್ಯೆಗಳಿಂದ ಕಿರಿಕಿರಿಗೊಂಡಿಲ್ಲ. ಅಲ್ರೀ, ಸಮಸ್ಯೆ ಇಲ್ಲದ ವಸತಿ ಎಲ್ಲಿದೆ? ಇಲ್ಲಿ ವಿದ್ಯುತ್ ಇಲ್ಲ ಎಂದಾದರೆ ಅಲ್ಲಿ ನಗರದಲ್ಲಿ ನೀರಿಗೆ ತತ್ವಾರ ಆಗುವುದನ್ನು ಯಾರೂ ಹೇಳುವುದಿಲ್ಲ ಯಾಕೆ?
ನಿಜಕ್ಕೂ ಮಲೆನಾಡು, ಹಳ್ಳಿ ಜೀವನ ವಾರವೊಪ್ಪತ್ತು ಇದ್ದು ಹೋಗಲು ತುಂಬಾ ಚೆನ್ನ. ಅಬ್ಬಬ್ಬಾ ಎಂದರೆ ಎರಡು ತಿಂಗಳು ಇದ್ದಿರಬಹುದು ಎನ್ನುವವರಿದ್ದಾರೆ. ನಮ್ಮ ಈ ಕಥೆಯ ಹೀರೋ ದಂಪತಿಗಳು ಇಲ್ಲಿ ಬಿಡಾರ ಹೂಡಿದ ಮೇಲೆ ಮತ್ತೊಮ್ಮೆ ಅಮೆರಿಕಾಕ್ಕೆ ತಲೆ ಹಾಕಿಲ್ಲ. ದೆಹಲಿ, ಬೆಂಗಳೂರು ಟೂರ್ ಕೂಡ ಹೋಗಿಲ್ಲ. ಬರಲಿರುವ ವರ್ಷ ಅಮೆರಿಕಕ್ಕೆ ಒಂದು ‘ವಿಸಿಟ್’ ಕೊಡುವ ಆಸೆಯಿದೆ. ಟಾಡ್‌ರ ೯೦ ವರ್ಷದ ಅಜ್ಜನನ್ನು ಒಮ್ಮೆ ನೋಡಿ ಬರುವ ಯೋಚನೆ. ಆದೀತಾ ಎಂಬ ಬಗ್ಗೆ ಗುಮಾನಿಯೂ ಇದೆ.
  ಮಗನನ್ನು ಕೂಡ ಇಲ್ಲಿನ ಅಆಇಈ ಕನ್ನಡ ಅಂಗನವಾಡಿಗೆ ಸೇರಿಸಿ ನಿರುಮ್ಮಳರಾಗಿದ್ದಾರೆ. ಹಾಗೆಂದು ಕೃತಿಯವರನ್ನು ಬಿಡಿ, ಅವರು ಹಳ್ಳಿಯಿಂದಲೇ ಬಂದವರು. ಅವರಿಗೆ ಇಲ್ಲಿನ ಬದುಕು ಹೊಸದಲ್ಲ ಎಂದು ಬಿಡಬಹುದು. ಕೃತಿಯವರಿಗೂ ‘ಟಿಪಿಕಲ್’ ಹಳ್ಳಿ ಜೀವನ ಹೊಸದೇ. ಅವರ ತವರೂರು ಮಂಕಳಲೆಯಿಂದ ಸಣ್ಣದಾಗಿ ಕೂಗಿದರೂ ತಾಲ್ಲೂಕು ಕೇಂದ್ರ ಸಾಗರ ಪಟ್ಟಣಕ್ಕೆ ಕೇಳಿಸುವಷ್ಟು ಸನಿಹ. ಇದೊಂದು ತರಹ ಪೇಟೆಯ ಇನ್ನೊಂದು ಬಡಾವಣೆ ಎನ್ನಬಹುದಷ್ಟೇ.
ಬದುಕು ವಿಚಿತ್ರ. ಈ ಜೋಡಿ ಖರೀದಿಸಿದ ಜಮೀನಿನ ಮೂಲ ಹಕ್ಕುದಾರರು ಈಗ ಪೇಟೆಯಲ್ಲಿ ನೆಲೆಸಿದ್ದಾರೆ. ಪಕ್ಕದ ಮನೆಯವರ ಮಗ ದುಡಿಮೆಯ ನಿಮಿತ್ತ ಅಮೆರಿಕಕ್ಕೆ ತೆರಳಿದ್ದಾನೆ. ಈ ಗೊಂದಲಕ್ಕೆ ಟಾಡ್ ತಮ್ಮ ನೆಲೆಯಲ್ಲಿ ಉತ್ತರಿಸುವುದು ಹೀಗೆ, "ಹಳ್ಳಿಯ ಜೀವನದಲ್ಲಿ ಯಾವುದೇ ಮಹತ್ವಾಕಾಂಕ್ಷೆಗಳಿಲ್ಲದೆ ಬದುಕಲು ಇಚ್ಛಿಸುವವರಿಗೆ ಇಲ್ಲಿ ಹುಟ್ಟುವ ಆದಾಯ ಸಾಕಾಗುತ್ತದೆ. ಆ ಮಟ್ಟಿಗೆ ನಾವು ಸುಖವಾಗಿದ್ದೇವೆ"
ಕೃಷಿ ಕುರಿತಂತೆ ಸಂಪೂರ್ಣ ತೊಡಗಿಸಿಕೊಂಡಿರುವ ಈ ದಂಪತಿಗಳು ಯಾವುದೋ ಸಾಧನೆ ಮಾಡುವ ಧಾವಂತದಲ್ಲಿಲ್ಲ. ನೈಸರ್ಗಿಕ ಕೃಷಿಯ ಬಗ್ಗೆ ಆಸ್ಥೆ, ಪಾಳೇಕರ್ ವಿಧಾನದ ಅನುಸರಣೆ ಮತ್ತು ಸ್ವಯಂ ಆಗಿ ತೋಟದಲ್ಲಿ ತೊಡಗಿಸಿಕೊಂಡಿರುವುದರಿಂದ ದಿನದ ಸಮಯದ ಬಹುಪಾಲು ವೆಚ್ಚವಾಗುತ್ತದೆ. ಅಳಿದುಳಿದ ಸಮಯದಲ್ಲಿ ಟಾಡ್ ತಮ್ಮ ಸಿತಾರ್ ಅಭ್ಯಾಸ ನಡೆಸುತ್ತಾರೆ. ಕೃತಿ ಊರು ಮನೆಯ ಮೈಯಾಳಿನ ಅಡಿಕೆ ಸುಲಿ ಕೆಲಸಕ್ಕೂ ಸೈ. ಇನ್ನು ಹಳ್ಳಿ ಬದುಕಿನ ಬೇಸರಕ್ಕೆ ಜಾಗವೆಲ್ಲಿ?
ರಾಜ್ಯದ ಮಟ್ಟಿಗೆ ವರ್ಷದ ಹನ್ನೆರಡು ತಿಂಗಳೂ ಮಲೆನಾಡಿನ ಹಳ್ಳಿಯಲ್ಲಿ ಶಾಶ್ವತ ವಾಸ್ತವ್ಯ ಹೂಡಿರುವ ವಿದೇಶಿ ದಂಪತಿಗಳು ಇನ್ನೆಲ್ಲೂ ಸಿಕ್ಕುವುದಿಲ್ಲ. ಸ್ವತಃ ಟಾಡ್, "ಇಂತಹ ದೃಷ್ಟಾಂತಗಳು ತಮ್ಮ ಗಮನಕ್ಕೆ ಬಂದಿಲ್ಲ. ಇದೀಗ ಕೆಲ ದಿನಗಳ ಹಿಂದೆ ಉತ್ತರ ಭಾರತೀಯ ಸಾಫ್ಟ್‌ವೇರ್ ಪತಿಯ ಸಮೇತ ಇನ್ನೊಬ್ಬ ಮಲೆನಾಡಿನ ಮಹಿಳೆ ಕೃಷಿಯಲ್ಲೇ ಬದುಕು ಕಂಡುಕೊಳ್ಳಲು ಜಮೀನು ಖರೀದಿಸಿರುವ ಮಾಹಿತಿಯಿದೆ" ಎಂದಿದ್ದಾರೆ. ಹಾಗಿದ್ದೂ ಪ್ರಚಾರ ಪಡೆಯಲು ಟಾಡ್ ಸುತರಾಂ ಒಪ್ಪುವುದಿಲ್ಲ. ಅವರ ಪೋನ್ ನಂಬರ್, ವಾಸಸ್ಥಳದ ವಿಳಾಸ ಕೊಡದಿರುವ ಕರಾರಿನ ಮೇಲೆಯೇ ಅವರು ಮಾತನಾಡಲು ಸಮ್ಮತಿಸಿದ್ದು. ಸರಿ ಬಿಡಿ, ಅವರ ನಿಲುವುಗಳನ್ನು ಗೌರವಿಸೋಣ. ಕುತೂಹಲಕ್ಕೆ ಅವರಲ್ಲಿಗೆ ಧಾವಿಸಿ ಪ್ರೈವೆಸಿಯನ್ನು ನಾಶ ಮಾಡುವುದು ಬೇಡ, ಪ್ಲೀಸ್....
ಆದರೆ ಇದೇ ವೇಳೆ ಹಳ್ಳಿಗಳ ಕುರಿತು ಟನ್‌ಗಟ್ಟಲೆ ದೂರು ಹೇಳಿ ನಗರಗಳತ್ತ ವಲಸೆ ಹೋಗುವ ಮಹನೀಯರು ವಾಸ್ತವ ಸತ್ಯ ತಿಳಿದುಕೊಳ್ಳಲು ಟಾಡ್ ಕೃತಿ ಉದಾಹರಣೆಯನ್ನು ಒಮ್ಮೆ ಗಮನಿಸಬೇಕು. ನೀವೇನಂತೀರಿ?

-ಮಾವೆಂಸ

ಮಂಗಳವಾರ, ಜೂನ್ 7, 2011

ಭಾರತದಲ್ಲಿ ನೆಲೆಸಲು ಬಂದಿರುವ ‘ಹೋಮ್ ಸ್ಟೇ’




ಪ್ರವಾಸೋದ್ಯಮ ಗರಿಗೆದರುತ್ತಿರುವ ದಿನಗಳಿವು. ಖುದ್ದು ಭಾರತೀಯರು ನೆಮ್ಮದಿ, ವಿಶ್ರಾಂತಿ, ಮೋಜು ಅರಸಿ ಪ್ರವಾಸಿ ತಾಣಗಳಿಗೆ ಅಲೆಯುತ್ತಿದ್ದಾರೆ. ವಿದೇಶಿ ಪ್ರವಾಸಿಗರಿಂದಲೇ ಪ್ರವಾಸೋದ್ಯಮದ ವಹಿವಾಟು ಸುಧಾರಿಸಬೇಕು ಎಂಬ ದಿನಗಳಂತೂ ಈಗಿಲ್ಲ. ಪ್ರಕೃತಿ ಮಡಿಲಿನಲ್ಲಿ ನೆಲೆಸಿರುವ ಮೂಲನಿವಾಸಿಗಳಿಗೆಲ್ಲ ಹೊಸ ಅವಕಾಶ ತೆರೆದಿರುವುದಂತೂ ಸತ್ಯ. ಇದಕ್ಕೆ ನೂತನ ಪೋಷಾಕಿನೊಂದಿಗೆ ಬಂದಿರುವ ವ್ಯಾಪಾರವೇ  ಹೋಮ್ ಸ್ಟೇ!
ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ಜನರ ಮನೆಯಲ್ಲಿಯೇ ಪಾವತಿ ಅತಿಥಿಗಳನ್ನು ಆಹ್ವಾನಿಸುವ ಪ್ರವಾಸೋದ್ಯಮದ ಮಾದರಿಯನ್ನು ಹೋಮ್‌ಸ್ಟೇ ಎಂದು ಹೇಳಲಾಗುತ್ತದೆ. ಅಲ್ಲಿನ ಪರಿಸರದಲ್ಲಿ ಅಲ್ಲಿನದೇ ಅಹಾರವನ್ನು ಒದಗಿಸುವ ಈ ತಂತ್ರ ನಗರವಾಸಿಗಳಿಗೆ ಹೆಚ್ಚು ಇಷ್ಟವಾಗುತ್ತಿದೆ ಎನ್ನುವುದನ್ನು ಹಲವು ಅಧ್ಯಯನಗಳು ಸ್ಪಷ್ಟಪಡಿಸಿವೆ. ಬೆಂಗಳೂರಿನ ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ತರುಣ್ ತಮ್ಮಣ್ಣ ಈ ಕುರಿತು ಆಳವಾದ ಸಂಶೋಧನೆ ನಡೆಸಿದ್ದರು.

ಭವಿಷ್ಯಕ್ಕೆ ಭಾಷ್ಯ
ಕಾಮನ್‌ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ದೆಹಲಿಯಲ್ಲಿ ಸಾಕಷ್ಟು ಕಟ್ಟಡಗಳ ನಿರ್ಮಾಣವಾದರೂ ಸರಿಸುಮಾರು ೩೦ ಸಾವಿರ ಕೊಠಡಿಗಳ ಕೊರತೆ ಬಿದ್ದಿತ್ತು. ಇಲ್ಲಿನ ಸುತ್ತಮುತ್ತಲಿನ ಹಾಗೂ ಜೈಪುರದ ೨೦೦ ಮನೆಯವರು ತಾವು ‘ಪಾವತಿ ಆತಿಥ್ಯ’ ನೀಡುವುದಾಗಿ ಮುಂದೆ ಬಂದರೂ ಮತ್ತು ಉಳಿದ ಪ್ರತಿ ಮನೆಯವರು ತಮ್ಮ ಒಂದು ಕೊಠಡಿಯನ್ನು ಬಿಟ್ಟು ಕೊಟ್ಟರೆ ಕೂಡ ಮತ್ತೆ ೪೦೦ ವಸತಿ ಲಭ್ಯವಾಯಿತೇ ವಿನಃ ಕೊರತೆಯ ಪ್ರಮಾಣ ಅಗಾಧವಾಗಿಯೇ ಉಳಿದಿತ್ತು. ಬಹುಷಃ ಇದು ಭಾರತದಲ್ಲಿ ಹೋಮ್ ಸ್ಟೇಗಳಿಗಿರುವ ಭವಿಷ್ಯಕ್ಕೂ ಭಾಷ್ಯ ಹೇಳಬಲ್ಲದು.
ಕರ್ನಾಟಕದ ಕೊಡಗು ಜಿಲ್ಲೆ, ಗೋವಾ ಪ್ರದೇಶದಲ್ಲಿ ಹೋಮ್ ಸ್ಟೇ ಉದ್ಯಮ ಬೇರೂರಿ ದಶಕ ಕಳೆದಿದೆ. ಆದರೆ ಕಳೆದ ಮೂರ‍್ನಾಲ್ಕು ವರ್ಷಗಳಲ್ಲಿ ತೀವ್ರ ಗತಿಯ ಬೆಳವಣಿಗೆಯನ್ನು ಈ ಕ್ಷೇತ್ರದಲ್ಲಿ ಕಾಣಲಾಗುತ್ತಿದೆಯಾದರೂ ಅಂಕಿಅಂಶಗಳ ಮೂಲಕ ಇದನ್ನು ಪ್ರಸ್ತುತಪಡಿಸುವುದು ಕಷ್ಟ. ಕಂಫರ್ಟ್ ಹೋಮ್‌ಸ್ಟೇ ನಿರ್ವಾಹಕರಾದ ಎಕ್ತಾ ಕಪೂರ್‌ರ ಪ್ರಕಾರ, ಶೇ. ೨೫ರಷ್ಟು ಹೋಮ್‌ಸ್ಟೇಗಳು ಮಾತ್ರ ನೊಂದಣಿಯಾಗಿ ಕೆಲಸಮಾಡುತ್ತಿವೆ.
ಕೇರಳ, ಹಿಮಾಚಲ ಪ್ರದೇಶ, ರಾಜಾಸ್ತಾನಗಳಲ್ಲಿ ಉದ್ಯಮ ಪ್ರಗತಿಯಲ್ಲಿದೆ. ಲಡಾಖ್‌ನಂತ ಪ್ರದೇಶದಲ್ಲಿ ಬದುಕು ಸಂಕಷ್ಟದಲ್ಲಿದೆ ಎನ್ನುವ ಮಾತು ಹಳೆಯದಾಗಿದೆ. ಈಗ ಅಲ್ಲಿ ಪ್ರತಿ ಮನೆಯೂ ಹೋಮ್ ಸ್ಟೇಗಳಾಗಿ ಬದಲಾಗುವ ಅದೃಷ್ಟ ಪಡೆದಿವೆ. ಅಂತೆಯೇ ರಾಜ್ಯದ ಮೈಸೂರು, ಕೊಡಗು, ಮಲೆನಾಡು ಭಾಗಗಳಲ್ಲಿ ಅಲ್ಲಿಯ ಸಂಸ್ಕೃತಿ, ಬಾಣಸಿಗತನವನ್ನು ಪ್ರದರ್ಶಿಸುವ ವಸತಿ ವ್ಯವಹಾರ ಚುರುಕುಗೊಳ್ಳುತ್ತಿದೆ. ಇಲ್ಲಿ ಬಹುಪಾಲು ಗ್ರಾಹಕರು ದೇಶದೊಳಗಿನವರೇ ವಿನಃ ವಿದೇಶಿಯರಲ್ಲ.


ಬಂಡವಾಳಶಾಹಿಗಳಿಗೆ ಆಕರ್ಷಣೆ 
ಈ ಉದ್ಯಮದೊಳಗಿನ ದುಡಿಯುವ ಶಕ್ತಿ ಈಗಾಗಲೇ ಬಂಡವಾಳಶಾಹಿಗಳನ್ನು ಸೆಳೆದಿದೆ. ಹಲವು ಆತಿಥೇಯರನ್ನು ಒಂದು ವ್ಯವಸ್ಥೆಯೊಳಗೆ ತಂದು ಅಂತರ್ಜಾಲ ತಂತ್ರಜ್ಞಾನದ ಮೂಲಕ ವಹಿವಾಟು ನಡೆಸುತ್ತಿವೆ. ವಿಲೇಜ್ ವೇಸ್, ಭಾರತ್ ಹೋಮ್ ಸ್ಟೇ ಪೋರ್ಟಲ್, ಕಂಫರ್ಟ್ ಮೊದಲಾದ ಸಂಸ್ಥೆಗಳು ದೇಶದ ಹಲವು ಭಾಗದ ಸಣ್ಣಪುಟ್ಟ ವಸತಿಗಳು, ಹೋಮ್‌ಸ್ಟೇ ವ್ಯವಸ್ಥೆಗಳನ್ನು ತಮ್ಮಲ್ಲಿ ನೊಂದಣಿ ಮಾಡಿಸಿಕೊಂಡು ವಹಿವಾಟು ನಡೆಸುತ್ತಿವೆ. 
ಇಂತಹ ಅಂಕಿಅಂಶಗಳನ್ನು ಸೈಬರ್ ಮೀಡಿಯಾ ಕ್ರೋಢೀಕರಣ ಮಾಡಿದೆ. ದೇಶದ ಒಂದು ಏಜೆನ್ಸಿಯಲ್ಲಿ ೧೫೦ ಕೊಠಡಿಗಳು ಲಭ್ಯವಿದ್ದು, ವಾರ್ಷಿಕ ಶೇ.೫೦ರಷ್ಟು ತುಂಬಿರುತ್ತದೆ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ೭೫ ಕೊಠಡಿಗಳಲ್ಲಿ ವರ್ಷಪೂರ್ತಿ ವಸತಿಯಿರುತ್ತದೆ. ಇದರಿಂದ ಆತಿಥೇಯರಿಗೆ ೧೦.೧ ಕೋಟಿ ರೂ. ಆದಾಯ ಸಿಕ್ಕಿದ್ದರೆ ಏಜೆನ್ಸಿಗೆ ೨.೫ ಕೋಟಿ ರೂ. ಬಂದಿದೆ. ಇನ್ನೊಂದು ಸಂಸ್ಥೆಯ ಲಭ್ಯ ೪೫೦ ಕೊಠಡಿಗಳು ಕೂಡ ಶೇ.೫೦ರ ಬೇಡಿಕೆ ಪಡೆದಿದ್ದು ವಾರ್ಷಿಕ ೩೮ ಕೋಟಿ ವಹಿವಾಟು ನಡೆಸುತ್ತಿದೆ. ಪ್ರತಿ ವರ್ಷ ಶೇ.೫ರ ಬೆಳವಣಿಗೆ ಕಾಣುತ್ತಿರುವ ಈ ಉದ್ಯಮ ಅಗಾಧ ಸಾಧ್ಯತೆಗಳಿಗೆ ತೆರೆದುಕೊಂಡಿದೆ.
ರಾಜ್ಯದಲ್ಲಿ ೨೦೦೫ರ ವೇಳೆಯಲ್ಲಿ ೭೦೦ ಹೋಮ್‌ಸ್ಟೇಗಳಿದ್ದವು ಎಂಬುದು ಒಂದು ಅಂದಾಜು. ಗೋಕರ್ಣದಂತಲ್ಲಿ ಅಲ್ಲಿನ ಭಟ್ಟರ ಮನೆಯಲ್ಲಿ ಪಾವತಿ ಮಾಡಿ ತಂಗುತ್ತಿದ್ದ ಭಕ್ತಾದಿಗಳ ಪರಂಪರೆಯನ್ನು ಕೂಡ ಈ ಯಾದಿಗೆ ಸೇರಿಸಬಹುದು! ಭಾರತದಲ್ಲಿ ಆಂತರಿಕ ಪ್ರವಾಸಿಗರ ಸಂಖ್ಯೆ ಶೇ.೧೭ರಷ್ಟು ವೃದ್ಧಿಸಿರುವುದು ಹಿತಾಸಕ್ತರಿಗೆ ಖುಷಿ ಕೊಡುವ ವಿಚಾರ.


ಬಾಹ್ಯ ಬಂಡವಾಳ, ಸ್ಥಳೀಯ ಆತಿಥ್ಯ!
ವಿಲೇಜ್ ವೇಸ್ ಎಂಬ ಸಂಸ್ಥೆ ಗ್ರಾಮೀಣ ಭಾಗದಲ್ಲಿ ಹಣ ತೊಡಗಿಸಿ ಹೋಮ್ ಸ್ಟೇ ಉದ್ಯಮಕ್ಕೆ ಚಾಲನೆ ಕೊಡುವ ಮಾದರಿಯೊಂದನ್ನು ಅನುಸರಿಸುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಸಂಸ್ಥೆಯನ್ನು ಭಾರತ ಹಾಗೂ ಇಂಗ್ಲೆಂಡ್‌ನ ಪ್ರವಾಸಿ ತಜ್ಞರು ಸೇರಿ ಹಳ್ಳಿಗರ ಸಂಘಟನೆಗಳ ಸಹಕಾರದಿಂದ ಪ್ರವಾಸೋದ್ಯಮ ಅಭಿವೃದ್ಧಿಗೋಸ್ಕರ  ಹುಟ್ಟು ಹಾಕಿದ್ದಾರೆ. ಶಿರಸಿಯ ಹೂಳಗೋಳದಲ್ಲಿ ಸೌಹಾರ್ದ ಸಹಕಾರಿ ಎಂಬ ಸ್ಥಳೀಯ ವ್ಯವಸ್ಥೆಯಡಿ ೧೨ ಲಕ್ಷ ರೂ. ವೆಚ್ಚದಲ್ಲಿ ಹೋಮ್ ಸ್ಟೇ ಗೃಹ ನಿರ್ಮಿಸಿದೆ. ವಿದೇಶಿ ಪ್ರವಾಸಿಗರಿಂದ ದಿನವೊಂದಕ್ಕೆ ಲಭಿಸುವ ೮೦ ಡಾಲರ್‌ನಲ್ಲಿ ಸ್ಥಳೀಯ ನಿರ್ವಾಹಕರಿಗೆ ಕೂಡ ಶೇ.೨೫ಕ್ಕಿಂತ ಹೆಚ್ಚಿನ ಹಣ ಲಭಿಸುತ್ತದೆ ಮತ್ತು ನಿರ್ದಿಷ್ಟ ವರ್ಷಗಳ ನಂತರ ಆ ನಿರ್ಮಾಣ ಸ್ಥಳೀಯರ ಸುಪರ್ದಿಗೆ ಬರುವ ಯೋಜನೆಯಂತಹ ದೃಷ್ಟಾಂತ ಪ್ರವಾಸೋದ್ಯಮಕ್ಕೆ ಹೊಸ ನೆಲೆಗಟ್ಟನ್ನು ಒದಗಿಸಬಹುದು.
ಭಾರತ ಹಳ್ಳಿಗಳ ದೇಶ, ಪ್ರಕೃತಿ ಸಂಪತ್ತಿನ ನೆಲೆ ಎನ್ನುವುದನ್ನು ಪ್ರವಾಸೋದ್ಯಮದ ಮೂಲ ಆಧಾರವಾಗಿ ಬಳಸಬಹುದು ಎಂಬುದನ್ನು ಹೋಮ್ ಸ್ಟೇ ಮತ್ತೆ ಮತ್ತೆ ಹೇಳುತ್ತಿದೆ. ಕೃಷಿ ಬದುಕಿನ ಡೋಲಾಯಮಾನ ಆರ್ಥಿಕ ಸ್ಥಿತಿಗತಿಗೆ ಇದು ಸ್ವಲ್ಪಮಟ್ಟಿಗಾದರೂ ಉತ್ತರವಾಗಬಲ್ಲದು. ಸರ್ಕಾರ ಕೂಡ ಇದಕ್ಕೆ ಪೂರಕವಾದ ಕಾನೂನುಗಳನ್ನು ರಚಿಸುವ ಅಗತ್ಯವಿದೆ.
ಚೈನಾ, ಥೈಲ್ಯಾಂಡ್, ವಿಯೆಟ್ನಾಂ ಮೊದಲಾದ ದೇಶಗಳಲ್ಲಿ ಹೋಮ್ ಸ್ಟೇ ವ್ಯಾಪಾರ ಶೇ. ೧೪ರ ವೇಗದಲ್ಲಿ ಚಿಮ್ಮುತ್ತಿದೆ. ೨೦೧೫ರ ವೇಳೆಗೆ ಪ್ರತಿ ವರ್ಷ ಭಾರತೀಯರು ಇಂತಹ ಪ್ರವಾಸಗಳಿಗೆ ಇನ್ನೂ ೧.೨ ಮಿಲಿಯನ್ ಡಾಲರ್ ಹಣ ತೊಡಗಿಸುವ ಅಂದಾಜು ಮಾಡಲಾಗುತ್ತಿದೆಯೇ ವಿನಃ ಭಾರತೀಯ ಪ್ರವಾಸೋದ್ಯಮದ ವಿಸ್ತರಣೆಯ ಬಗ್ಗೆ ಗಂಭೀರ ಚಿಂತನೆ ನಡೆದಿಲ್ಲ, ದುರಂತ!!


-ಮಾವೆಂಸ

ಗುರುವಾರ, ಮಾರ್ಚ್ 17, 2011

ಸಾಗರದ ಸುದ್ದಿ ದಿನಂಪ್ರತಿ ಓದಿ, ಸುವರ್ಣಪ್ರಭ ವೆಬ್ ರೂಪದಲ್ಲಿ.....



ಬದುಕಿನ ಸಾಧನೆಗೆಂದು ಹಾಗೂ ತುತ್ತು ಚೀಲದ ಸಂಪಾದನೆಗೆಂದು ಸಾಗರದ ಹಲವು ಸಾವಿರ ಮಂದಿ ಜಿಲ್ಲೆಯ ಹೊರಗೆ, ಬೆಂಗಳೂರಿನಲ್ಲಿ, ಅಷ್ಟೇಕೆ ವಿದೇಶಗಳಲ್ಲಿ ನೆಲಸಿದ್ದಾರೆ. ಇವರಿಗೆ ಸಾಗರ ತಾಲೂಕಿನ ದಿನದಿನದ ಸುದ್ದಿಗಳು ಲಭ್ಯವಾಗುವುದೇ ಇಲ್ಲ. ಉದಯವಾಣಿ ಪತ್ರಿಕೆ ತನ್ನ ಇ ಪತ್ರಿಕೆಯಲ್ಲಿ ಲೋಕಲ್ ಎಡಿಷನ್ ಪುಟಗಳನ್ನೂ ಅಪ್‌ಲೋಡ್ ಮಾಡುವುದರಿಂದ ಸ್ವಲ್ಪ ಮಾಹಿತಿ ಲಭ್ಯವಾಗುವ ಸಮಾಧಾನ. ಉಳಿದೆಲ್ಲ ಪತ್ರಿಕೆಗಳು ಸ್ಥಳೀಯ ಆವೃತ್ತಿಗಳನ್ನು ಅಂತರ್ಜಾಲಕ್ಕೆ ಏರಿಸದಿರುವುದರಿಂದ ಸಾಗರದ ಸರಿಸುಮಾರು ಪ್ರಮುಖ ಸುದ್ದಿಯೂ ಸಾಗರಿಕರಿಗೆ ತಿಳಿಯುವುದೇ ಇಲ್ಲ.
ಅಂತವರಿಗೆ ಒಂದು ಪರಿಹಾರ ಲಭಿಸಿದೆ. ಸಾಗರದ ಹಿತಕರ ಜೈನ್ ಸಂಪಾದಕತ್ವದ ಸುವರ್ಣಪ್ರಭ ದೈನಿಕ ಇದೀಗ ತನ್ನ ಪಿಡಿಎಫ್ ರೂಪವನ್ನು ಬ್ಲಾಗ್‌ಸ್ಪಾಟ್ ವೆಬ್‌ನಲ್ಲಿ ಪ್ರತಿ ದಿನ ಪ್ರಕಾಶಿಸುತ್ತಿರುವುದರಿಂದ ಸಾಗರದ ಅಷ್ಟೂ ಸುದ್ದಿಗಳನ್ನು ಓದಿ ಸಾಗರದ ಹೊರಗಿನ ಸಾಗರಿಕರು ಅಪ್‌ಡೇಟ್ ಆಗಬಹುದು. ಒನ್ ಮ್ಯಾನ್ ಆರ್ಮಿಯಾಗಿರುವ ಹಿತಕರ್‌ರ ಪ್ರಯತ್ನಕ್ಕೆ ನೀವು ಕೂಡ ಬೆಂಬಲ ನೀಡಿ.
ಸ್ವಾರಸ್ಯವೆಂದರೆ, ಸಾಗರದ ಜನರು ಓದುವ ಮುನ್ನವೇ ನೆಟ್ಟಿಗರು ಸುದ್ದಿ ಓದಿಬಿಡುವ ಸಾಧ್ಯತೆಯಿದೆ! ಅಂತರ್ಜಾಲವೆಂದರೆ ವೇಗ ತಾನೆ? ಹಿತಕರ್ ಜೈನ್‌ಗೆ ಅಭಿನಂದನೆಗಳು......

 
200812023996